ಶನಿವಾರಸಂತೆ: ಹೊಳೆಗೆ ಈಜಲು ಹೋದ ಬಾಲಕ ನೀರು ಪಾಲು
Team Udayavani, May 9, 2022, 8:06 PM IST
ಮಡಿಕೇರಿ : ಹೊಳೆಯಲ್ಲಿ ಈಜಲು ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶನಿವಾರಸಂತೆ ಸಮೀಪದ ಹೆಮ್ಮನೆ ಗ್ರಾಮದಲ್ಲಿ ನಡೆದಿದೆ.
ಬೈಲುಕೊಪ್ಪದ ನಾಸೀರ್ ಪಾಷ, ಫಸಿಯಾ ಬಾನು ದಂಪತಿಯ ಪುತ್ರ ಫರ್ಹಾನ್ (12) ಸಾವನ್ನಪ್ಪಿದ ಬಾಲಕ.
ರಂಜಾನ್ ಹಬ್ಬಕ್ಕೆಂದು ಶನಿವಾರಸಂತೆಯಲ್ಲಿರುವ ಅಜ್ಜನ ಮನೆಗೆ ಬಂದಿದ್ದ ಫರ್ಹಾನ್ ಮಾವನ ಮಗ ಸಮೀರ್ ಜೊತೆ ಹೊಳೆಗೆ ಆಟವಾಡಲೆಂದು ತೆರಳಿದ್ದು, ಈ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಸಮೀರ್ ಪೋಷಕರಿಗೆ ತಿಳಿಸಿದ್ದಾನೆ.
ಹೊಳೆಯಲ್ಲಿ ಈಜಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮಗ ಮೃತಪಟ್ಟಿರುವುದಾಗಿ ತಂದೆ ನಾಸೀರ್ ಪಾಷ ದೂರು ನೀಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಸ್ಪರ್ಶಿಸಿ ಆಟೋ ಚಾಲಕ ಸಾವು
ಮಡಿಕೇರಿ : ವಿದ್ಯುತ್ ತಂತಿ ಸ್ಪರ್ಶಗೊಂಡು ಆಟೋ ಚಾಲಕ ಮೃತಪಟ್ಟಿರುವ ಘಟನೆ ವಿರಾಜಪೇಟೆಯ ಗಾಂಧಿ ನಗರದಲ್ಲಿ ನಡೆದಿದೆ.
ವಿರಾಜಪೇಟೆಯ ಶಿವಕೇರಿ ನಿವಾಸಿ, ಪ್ರಸ್ತುತ ಗಾಂಧಿ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ ಆಟೋ ಚಾಲಕ ಎನ್.ಕೆ.ದಿವಾಕರ್ (58) ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟ ವ್ಯಕ್ತಿ.
ತನ್ನ ಆಟೋ ಮೇಲೆ ಬಿದ್ದಿದ್ದ ತೆಂಗಿನ ಗರಿಯನ್ನು ತೆರವು ಮಾಡುವ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಗೊಂಡಿದ್ದು, ಬಲಗೈ ತುಂಡಾಗಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ನಗರ ಠಾಣೆಯಲ್ಲಿ ಮೃತರ ಪತ್ನಿ ಶೋಭ ಅವರು ನೀಡಿದ ದೂರಿನ ಮೇರೆಗೆ ವಿದ್ಯುತ್ ಅವಘಡದಿಂದ ಆಕಸ್ಮಿಕ ಮರಣ ಸಂಭವಿಸಿದೆ ಎಂದು ಪ್ರಕರಣ ದಾಖಲಾಗಿದೆ.