ಮಾಲಂಬಿ: ಕಾಡಾನೆ ದಾಂಧಲೆಗೆ ಅಪಾರ ಫಸಲು ಹಾನಿ
Team Udayavani, Oct 22, 2019, 5:46 AM IST
ಶನಿವಾರಸಂತೆ: ರೈತರ ಕಾಫಿ, ಬಾಳೆತೋಟ ಮತ್ತು ಗದ್ದೆಗೆ ನುಸುಳಿದ ಕಾಡಾನೆ ಅಪಾರ ಪ್ರಮಾಣದಲ್ಲಿ ಕೃಷಿ ಬೆಳೆಗಳನ್ನು ತುಳಿದು ಧ್ವಂಸಗೊಳಿಸಿದ ಘಟನೆ ಮಾಲಂಬಿ ಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಮಾಲಂಬಿ-ಕೂಡುರಸ್ತೆ ಗ್ರಾಮದ ಪಕ್ಕದಲ್ಲಿರುವ ದೊಡ್ಡೇರೆ ಮೀಸಲು ಅರಣ್ಯದಿಂದ ಬಂದ ಒಂಟಿ ಸಲಗವೊಂದು ಗ್ರಾಮದ ಸಿ.ಕೆ.ಗಣೇಶ್ ಮತ್ತು ಅವರ ಸಹೋದರ ಸಿ.ಕೆ.ದುರ್ಗರಾಜು ಅವರಿಗೆ ಸೇರಿದ ಕಾಫಿ ಮತ್ತು ಬಾಳೆತೋಟ ಹಾಗೂ ಗದ್ದೆಗೆ ನುಸುಳಿ ಕಾಫಿ, ಬಾಳೆಗಿಡ, ಸಿಹಿ ಗೆಣಸು ಹಾಗೂ ಗದ್ದೆಯಲ್ಲಿ ಫಸಲಿಗೆ ಬಂದಿದ್ದ ಭತ್ತದ ಪೈರನ್ನು ತುಳಿದು ಹಾಕಿ ಧ್ವಂಸಗೊಳಿಸಿದೆ.
ಈ ಕಾಡಾನೆ ಗಣೇಶ್ ಎಂಬುವರಿಗೆ ಸೇರಿದ ಬಾಳೆತೋಟಕ್ಕೆ ನುಸುಳಿ ಫಸಲಿಗೆ ಬಂದಿದ್ದ ಬಾಳೆಗಿಡವನ್ನು ತುಳಿದು ಧ್ವಂಸಗೊಳಿಸಿದಲ್ಲದೆ ಫಸಲಿಗೆ ಬಂದಿದ್ದ ಸಿಹಿ ಗೆಣಸನ್ನು ತುಳಿದು ಧ್ವಂಸಗೊಳಿಸಿದ ಕಾಡಾನೆ ಗದ್ದೆಯಲ್ಲಿ ಬೆಳೆದ ಭತ್ತದ ಪೈರನ್ನು ತುಳಿದು ಧ್ವಂಸಗೊಳಿಸಿದೆ. ದುರ್ಗರಾಜು ಎಂಬುವರಿಗೆ ಸೇರಿದ ಕಾಫಿತೋಟಕ್ಕೆ ನುಸುಳಿದ ಅದೆ ಕಾಡಾನೆ ಫಸಲು ಬಿಟ್ಟಿದ್ದ ಕಾಫಿಗಿಡವನ್ನು ತುಳಿದು ಹಾಕಿದಲ್ಲದೆ ತೋಟದಲ್ಲಿ ನೀರಾವರಿ ಸೌಲಭ್ಯಕ್ಕಾಗಿ ಅಳವಡಿಸಿದ್ದ ಮೋಟಾರು ಪೈಪ್ಗ್ಳನ್ನು ತುಳಿದು ಹಾನಿಮಾಡಿದ್ದು ಮತ್ತು ಗದ್ದೆಗೆ ನುಸುಳಿದ ಕಾಡಾನೆ ಭತ್ತದ ಪೈರನ್ನು ಧ್ವಂಸಗೊಳಿಸಿದೆ ಕಾಡಾನೆ ದಾಳಿಯಿಂದ ರೈತರು ಬೆಳೆದಿದ್ದ ಸುಮಾರು 35 ಸಾವಿರ ರೂ. ಮೌಲ್ಯದ ಕೃಷಿ ಬೆಳೆ ಫಸಲು ನಷ್ಟವಾಗಿರುವುದಾಗಿ ರೈತರು ಅರಣ್ಯ ಇಲಾಖೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾಲಂಬಿ ಭಾಗದಲ್ಲಿ ತಿಂಗಳಿಂದ ಒಂಟಿ ಸಲಗವೊಂದು ಓಡಾಡುತ್ತಿದ್ದು ರಾತ್ರಿ ವೇಳೆಯಲ್ಲಿ ಈ ಒಂಟಿ ಸಲಗ ರೈತರ ಜಮೀನಿಗೆ ನುಸುಳಿ ಫಸಲಿಗೆ ಬಂದಿರುವ ಕೃಷಿ ಬೆಳೆಯನ್ನು ತುಳಿದು ಧ್ವಂಸಗೊಳಿಸುತ್ತಿರುವುದಾಗಿ ಈ ಭಾಗದ ರೈತರು ಹೇಳುತ್ತಾರೆ.