ಕನ್ನಡ ಸಾಹಿತ್ಯ ಸಂಸ್ಕೃತಿಯ ಬೆಳವಣಿಗೆ : ದತ್ತಿ ಉಪನ್ಯಾಸ
Team Udayavani, Mar 10, 2019, 1:00 AM IST
ಗೋಣಿಕೊಪ್ಪಲು: ಕೆಲವರು ಕನ್ನಡದ ನೆಲ ಹಾಗೂ ಭಾಷೆಯ ಬಗೆ ಬಂಡವಾಳ ವಾಗಿಸಿಕೊಂಡು ಕನ್ನಡ ಅಳಿದು ಹೋಗುತ್ತದೆ ಎಂಬ ಆತಂಕಕಾರಿ ಹೇಳಿಕೆಗಳನ್ನು ನೀಡುತ್ತಾ ಕನ್ನಡದ ಮನಸ್ಸುಗಳ ಮೇಲೆ ಅಘಾತವನ್ನು ನೀಡುತ್ತಿದ್ದಾರೆ. ಎಂದು ಕವಿ,ಸಾಹಿತಿ ಜಗದೀಶ್ ಜೋಡುಬೀಟಿ ವಿಷಾದ ವ್ಯಕ್ತಪಡಿಸಿದರು.
ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅರಣ್ಯ ಮಹಾ ವಿದ್ಯಾಲಯದ ಸಹಯೋಗದಲ್ಲಿ ನಡೆದ ದಿ. ಎಂ.ಜಿ. ಪದ್ಮನಾಭ ಕಾಮತ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ವಾಣಿಜ್ಯೋದ್ಯಮಿಗಳ ಕೊಡುಗೆ ಎಂಬ ವಿಚಾರವಾಗಿ ಮಾತನಾಡಿದರು.
ಚಕ್ಕೇರ ಮುತ್ತಣ್ಣ, ಚರಿಯಪಂಡ ಕುಶಾಲಪ್ಪ, ಡಾ. ಮೇಚಿರ ನಾಣಯ್ಯ ಹಾಗೂ ಮಲ್ಲಂಡ ನಂಜಪ್ಪ ಅವರ ಕನ್ನಡ ಪರ ಚಟುವಟಿಕೆ ಮತ್ತು ಜೀವನ ಆಧರಿತ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ಕನ್ನಡದ ಇತಿಹಾಸದ ಬಗೆ ತಿಳಿದುಕೊಂಡು ಕನ್ನಡದ ಬಗೆ ಅಭಿಮಾನ ಮೂಡಿಸಿಕೊಳ್ಳಬೇಕು. ಶಿಕ್ಷಣದೊಂದಿಗೆ ಸಾಹಿತ್ಯ ಪರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಅರಣ್ಯ ಮಹಾ ವಿದ್ಯಾಲಯದ ಡೀನ್, ಚೆಪ್ಪುಡೀರ ಕುಶಾಲಪ್ಪ ಮಾತನಾಡಿದರು.
ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ಹಾಗೂ ದತ್ತಿ ದಾನಿಗಳಾದ ಎಂ.ಪಿ. ಕೇಶವ ಕಾಮತ್ ಮಾತನಾಡಿ ಸಮಾಜಕ್ಕೆ ನಮ್ಮ ಕೊಡುಗೆಯ ಬಗೆ ನಮ್ಮ ಮುಂದಿನ ತಲೆಮಾರಿನವರು ನೆನೆಸಿಕೊಳ್ಳುವ ಕಾರ್ಯ ಮಾಡಬೇಕು. ಹೀಗಾಗಿ ಸಾಹಿತ್ಯ ಪರಿಷತ್ನಲ್ಲಿ ದತ್ತಿ ಇಡುವ ಮೂಲಕ ನಮ್ಮ ತಂದೆ, ಮುತ್ತಾಂದಿರ ನೆನಪಿಕೊಳ್ಳುವ ಕಾರ್ಯವಾಗುತ್ತಿದೆ ಎಂದು ತಿಳಿಸಿದರು.
ತಾ.ಕ.ಸ.ಪ. ಕಾರ್ಯದರ್ಶಿ ನಳಿನಾಕ್ಷಿ, ನಿರ್ದೇಶಕ ವೈಲೇಶ್,ಉಪಸ್ಥಿತರಿದ್ದರು.