ಸಮಗ್ರ ಕೃಷಿ ಪದ್ಧತಿಯಿಂದ ನೆಮ್ಮದಿಯ ಬದುಕು: ಹರೀಶ್
ಅತ್ತೂರಿನಲ್ಲಿ ಕಿಸಾನ್ ಮೇಳ
Team Udayavani, Mar 13, 2020, 5:03 AM IST
ಮಡಿಕೇರಿ: ಕೃಷಿ ಜೊತೆಗೆ ಕೃಷಿ ಸಂಬಂಧಿಸಿದ ಉಪ ಕಸುಬು ಕೈಗೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳು ವಂತಾಗಬೇಕು ಎಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಸಲಹೆ ಮಾಡಿದರು.
ಗೋಣಿಕೊಪ್ಪಲು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಕೃಷಿ, ತೋಟಗಾರಿಕೆ, ಪಶುಪಾಲನೆ ಮತ್ತು ಪಶು ವೈದ್ಯಸೇವೆ, ಮೀನುಗಾರಿಕೆ ಹಾಗೂ ಅರಣ್ಯ ಇಲಾಖೆ ಇವರ ಸಹಯೋಗದಲ್ಲಿ ಆತ್ಮ ಯೋಜನೆಯಡಿಯಲ್ಲಿ ಗೋಣಿಕೊಪ್ಪದ ಅತ್ತೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕಿಸಾನ್ ಮೇಳ ಹಾಗೂ ಪೊನ್ನಂಪೇಟೆ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೃಷಿ ಪ್ರಧಾನ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಯಿಂದ ದೂರ ಸರಿಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಕೃಷಿಯನ್ನು ಅವಲಂಬಿಸಿ ದವರು ಒಂದಲ್ಲ ಒಂದು ರೀತಿಯಲ್ಲಿ ನೆಮ್ಮದಿಯ ಬದುಕು ನಡೆಸುತ್ತಾರೆ ಎಂದು ಜಿ.ಪಂ. ಅಧ್ಯಕ್ಷರು ಅಭಿಪ್ರಾಯಪಟ್ಟರು.
ಕೃಷಿ ಜೊತೆಗೆ ಹಸು, ಹಂದಿ, ಕುರಿ, ಕೋಳಿ, ಮೀನುಗಾರಿಕೆ ಹೀಗೆ ಕೃಷಿ ಸಂಬಂಧಿಸಿದ ಉಪ ಕಸುಬುಗಳಲ್ಲಿ ತೊಡಗಿಸಿಕೊಂಡಾಗ ಆರ್ಥಿಕವಾಗಿ ಸಬಲರಾಗಬಹುದು. ಆ ನಿಟ್ಟಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ಅವರು ಕರೆ ನೀಡಿದರು.
ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ ಮಾತನಾಡಿ ಹೊಲ ಗದ್ದೆಗಳಲ್ಲಿ ಮೈಮುರಿದು ದುಡಿ ಯುವ ಕೃಷಿಕರಿಗೆ ಸಮ್ಮಾನಿಸು ತ್ತಿರುವುದು ಶ್ಲಾಘನೀಯ ವಿಚಾರ. ಸಮಾಜದಲ್ಲಿ ಕೃಷಿಕ, ಸೈನಿಕ, ಶಿಕ್ಷಕ ಮತ್ತು ಆರಕ್ಷಕರನ್ನು ಸದಾ ಸ್ಮರಿಸಬೇಕಿದೆ. ಇವರು ಸಮಾಜದ ಅಭಿವೃದ್ಧಿ ಹಾಗೂ ರಕ್ಷಣೆಗಾಗಿ ದುಡಿಯುತ್ತಾರೆ ಎಂದು ಅವರು ನುಡಿದರು.
ಭಾರತೀಯ ತೋಟಗಾರಿಕಾ ಸಂಶೋ ಧನ ಸಂಸ್ಥೆಯ ನಿರ್ದೇಶಕ ಡಾ| ಎಂ.ಆರ್. ದಿನೇಶ್, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ| ಸಾಜೂ ಜಾರ್ಜ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ. ರಾಜು, ಅರಣ್ಯ ಮಹಾ ವಿದ್ಯಾಲಯದ ಡೀನ್ ಡಾ| ಸಿ.ಜಿ. ಕುಶಾಲಪ್ಪ ಮಾತನಾಡಿದರು.
ವಿರಾಜಪೇಟೆ ತಾ.ಪಂ.ಉಪಾಧ್ಯಕ್ಷೆ ಆಶಾ ಜೇಮ್ಸ್, ಪಶುಪಾಲನ ಇಲಾಖೆ ಉಪ ನಿರ್ದೇಶಕ ಡಾ| ತಮ್ಮಯ್ಯ, ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆಯ ಪ್ರಧಾನ ವಿಜ್ಞಾನಿ ವೆಂಕಟ್ ಕುಮಾರ್, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಡಾ| ಶಶಿಧರ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ಕೃಷಿ ಇಲಾಖೆಯ ಸ.ನಿರ್ದೇಶಕ ರಾಜಶೇಖರ್, ತೋಟಗಾರಿಕಾ ಇಲಾಖೆಯ ಹಿರಿಯ ಸ. ನಿರ್ದೇಶಕ ಡೀನಾ, ಕೃಷಿ ಇಲಾಖೆಯ ಸ. ನಿರ್ದೇಶಕ ಶಿವಮೂರ್ತಿ, ಕೃಷಿ ಅಧಿಕಾರಿ ರೀನಾ ಮತ್ತಿತರರು ಉಪಸ್ಥಿತರಿದ್ದರು.
ಕೃಷಿ ಅಧಿಕಾರಿ ಗಿರೀಶ್ ಸ್ವಾಗತಿಸಿದರು. ಸರೋಜ ಪ್ರಾರ್ಥಿಸಿದರು. ಹಿರಿಯ ಕೃಷಿ ವಿಜ್ಞಾನಿಗಳಾದ ಡಾ| ಬಿ. ಪ್ರಭಾಕರ್ ನಿರೂಪಿಸಿದರು, ಡಾ| ಕೆ.ವಿ. ವೀರೇಂದ್ರ ಕುಮಾರ್ ವಂದಿಸಿದರು.
ಕಾಫಿ, ಕಾಳುಮೆಣಸು, ಶುಂಠಿಯ ನೂತನ ತಾಂತ್ರಿಕತೆ ಕುರಿತು ಸಮಾವೇಶ ನಡೆಯಿತು. ಈ ನಿಟ್ಟಿನಲ್ಲಿ ಕಾಫಿಯಲ್ಲಿ ನೀರಾವರಿ ಮತ್ತು ಸುಣ್ಣದ ಬಳಕೆಯ ಮಹತ್ವದ ಕುರಿತು ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದ ಉಪ ನಿರ್ದೇಶಕ ಡಾ| ಪಿ.ಶಿವಪ್ರಸಾದ್ ವಿಚಾರ ಮಂಡನೆ ಮಾಡಿದರು.
ಕಾಳುಮೆಣಸಿನಲ್ಲಿ ಒಂಟಿಕಣ್ಣಿನ ಸಸ್ಯಾ ಭಿವೃದ್ಧಿ ವಿಧಾನದಿಂದ ಸಸಿಗಳ ಉತ್ಪಾದನೆ ವಿಷಯವಾಗಿ ಗೋಣಿಕೊಪ್ಪಲು ಕೆ.ವಿ.ಕೆ ತೋಟಗಾರಿಕಾ ವಿಭಾಗದ ವಿಷಯ ತಜ್ಞ ಡಾ| ಕೆ.ಎ. ದೇವಯ್ಯ, ಸುಧಾರಿತ ಶುಂಠಿ ಬೇಸಾಯ ಕ್ರಮಗಳು ವಿಚಾರವಾಗಿ ಗೋಣಿಕೊಪ್ಪಲು ಕೆ.ವಿ.ಕೆ. ತೋಟಗಾರಿಕಾ ವಿಭಾಗದ ವಿಷಯತಜ್ಞ ಡಾ| ಪ್ರಭಾಕರ ಬಿ., ವಿವಿಧ ಬೆಳೆಗಳಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆ ವಿಚಾರವಾಗಿ ಗೋಣಿಕೊಪ್ಪಲು ಕೆ.ವಿ.ಕೆ.ಯ ಸಸ್ಯ ಸಂರಕ್ಷಣೆ ವಿಷಯ ತಜ್ಞ ಡಾ| ವೀರೇಂದ್ರ ಕುಮಾರ್ ಕೆ.ವಿ, ಭತ್ತದ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಯ ಬಗ್ಗೆ ನಲ್ಲೂರು ಗ್ರಾಮದ ಕೃಷಿ ಪಂಡಿತ ತಮ್ಮಯ್ಯ ಅವರಿಂದ ವಿಚಾರ ಮಂಡನೆ ನೆರವೇರಿತು.
ಪುಸ್ತಕಗಳ ಬಿಡುಗಡೆ
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ, ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ ಹಾಗೂ ಕೃಷಿ ಇಲಾಖೆ ವತಿಯಿಂದ ಹೊರ ತಂದಿರುವ ತಾಂತ್ರಿಕ ಕೃಷಿ ಕೈಪಿಡಿ ಹಾಗೂ ಸಾವಯವ ಗೊಬ್ಬರ ಮತ್ತು ಜಲಾನಯನ ಅಭಿವೃದ್ಧಿ ಕುರಿತ ಪುಸ್ತಕಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.