ಕಾಲೇಜು ಪ್ರವೇಶಾತಿ ಸಂಬಂಧ ವಿದ್ಯಾರ್ಥಿಗಳಿಗೆ ಸೌಲಭ್ಯ ಮಾಹಿತಿ
Team Udayavani, Jun 18, 2019, 5:41 AM IST
ಮಡಿಕೇರಿ: ನಗರದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ ಪದವಿಯ ವಿವಿಧ ವಿಭಾಗಗಳ ಪ್ರವೇಶಾತಿ ಆರಂಭಗೊಂಡಿದ್ದು, ಈ ಸಂಬಂಧ ಕಾಲೇಜಿನಲ್ಲಿರುವ ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಲು ಹಾಗೂ ಕೋರ್ಸುಗಳ ಕುರಿತು ಗೊಂದಲ ನಿವಾರಿಸಲು ತೆರೆದ ಮನೆ (ಓಪನ್ ಹೌಸ್) ಕಾರ್ಯಕ್ರಮವನ್ನು ಶನಿವಾರ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ 2012 ರಿಂದಲೇ ಆರಂಭಗೊಂಡಿದ್ದು, ಇದೀಗ ಭೌತಶಾಸ್ತ್ರ, ಅರ್ಥಶಾಸ್ತ್ರ, ಇಂಗ್ಲೀಷ್, ಎಂಬಿಎ ಟೂರಿಸಂ ಅಂಡ್ ಟ್ರಾವೆಲ್ ಮೇನೇಜೆ¾ಂಟ್, ವಾಣಿಜ್ಯ ಶಾಸ್ತ್ರ ಹಾಗೂ ಯೋಗವಿಜ್ಞಾನದಲ್ಲಿ ಸ್ನಾತಕೋತ್ತರ ಡಿಪೋ›ಮಾ ಕೋರ್ಸುಗಳು ಲಭ್ಯವಿದ್ದು, ಅರ್ಜಿಗಳನ್ನು ದಿನಾಂಕ ಜೂನ್ 15 ರಿಂದ ನೀಡಲಾಗುತ್ತಿದ್ದು, ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಜೂನ್ 28 ಆಗಿರುತ್ತದೆ. ಅರ್ಜಿಗಳು ಆಯಾಯ ಸ್ನಾತಕೋತ್ತರ ವಿಭಾಗಗಳಲ್ಲಿ ಲಭ್ಯವಿರುತ್ತದೆ.
ಅರ್ಜಿ ಶುಲ್ಕ 500 ರೂ ಆಗಿದ್ದು, ಹೆಚ್ಚಿನ ಕೋರ್ಸಿನ ಆಯ್ಕೆಗೆ ಅರ್ಜಿ ಸಲ್ಲಿಸಲು 250 ರೂ ಹೆಚ್ಚುವರಿ ಶುಲ್ಕವಾಗಿರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಕ್ಯಾಟಗರಿ 1 ಗೆ ಅರ್ಜಿ ಶುಲ್ಕ ರೂ 250 ಆಗಿದ್ದು, ಹೆಚ್ಚಿನ ಕೋರ್ಸಿನ ಆಯ್ಕೆಗೆ ಅರ್ಜಿ ಸಲ್ಲಿಸಲು 125 ರೂ ಹೆಚ್ಚುವರಿ ಶುಲ್ಕವಾಗಿರುತ್ತದೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ. ಜಗನ್ನಾಥ್, ಸ್ನಾತಕೋತ್ತರ ಪದವಿ ಮಾಡಲು ಇಚ್ಚಿಸುವ ವಿದ್ಯಾರ್ಥಿಗಳು ಮೊದಲು ಕೋರ್ಸುಗಳ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಂಡು ಮುಂದಿನ ಭವಿಷ್ಯದ ಬಗ್ಗೆ ಸ್ಪಷ್ಟ ಗುರಿ ಹೊಂದಿರಬೇಕು.
ಹಾಗೊಂದು ವೇಳೆ ಕೋರ್ಸುಗಳ ಕುರಿತಾಗಲೀ ಅಥವಾ ಉದ್ಯೋಗದ ಕುರಿತಾಗಲೀ ಏನೇ ಗೊಂದಲಗಳಿದ್ದಲ್ಲಿ ಅದನ್ನು ಮೊದಲು ನಿವಾರಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸ್ನಾತಕೋತ್ತರ ಪದವಿಗೆ ಸೇರುವ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ತಮ್ಮ ತಮ್ಮ ವೃತ್ತಿಕ್ಷೇತ್ರದೊಂದಿಗೆ ಸಂಪರ್ಕ ಕಲ್ಪಿಸಿಕೊಳ್ಳಬೇಕು ಹಾಗೂ ಆ ಮೂಲಕ ವೃತ್ತಿಪರತೆಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸುಗಳು ಹಾಗೂ ಇಲ್ಲಿ ಕಲಿಕೆಗೆ ಇರುವ ಸೌಲಭ್ಯ ಹಾಗೂ ಪೂರಕ ವಾತಾವರಣದ ಕುರಿತ ಮಾಹಿತಿಯನ್ನು ಸ್ನಾತಕೋತ್ತರ ಆಂಗ್ಲ ವಿಭಾಗದ ಸಂಯೋಜಕರಾದ ಡಾ. ನಯನ ಕಶ್ಯಪ್ ಅವರು ನೀಡಿದರು.
ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕರಾದ ಡಾ. ಗಾಯತ್ರಿದೇವಿ. ಎ ಅವರು ನಿರೂಪಿಸಿದರು. ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕರಾದ ಡಾ. ಇ.ತಿಪ್ಪೇಸ್ವಾಮಿ ಅವರು ಮುಖ್ಯ ಅಥಿತಿಯನ್ನು ಪರಿಚಯಿಸಿದರು.
ಕಾರ್ಯಕ್ರಮವನ್ನು ಯೋಗವಿಜ್ಞಾನ ಸ್ನಾತಕೋತ್ತರ ಡಿಪೋ›ಮಾ ವಿಭಾಗದ ಸಂಯೋಜಕರಾದ ಡಾ| ಶ್ರೀಧರ್ ಹೆಗಡೆ ಅವರು ಸ್ವಾಗತಿಸಿದರು. ಎಂಬಿಎ ಟೂರಿಸಂ ಅಂಡ್ ಟ್ರಾವೆಲ್ ಮೇನೇಜೆ¾ಂಟ್ ವಿಭಾಗದ ಸಂಯೋಜಕರಾದ ಡಾ| ಜಗದೀಶ. ಬಿ ಅವರು ವಂದಿಸಿದರು. ಚಿಕ್ಕ ಅಳುವಾರ ಸ್ನಾತಕ್ಕೋತ್ತರ ಕೇಂದ್ರದ ನಿರ್ದೇಶಕಿ ಡಾ|ಮಂಜುಳಾ ಶಾಂತಾರಾಮ್ ಅವರು ಉಪಸ್ಥಿತರಿದ್ದರು.
ಸ್ಪಷ್ಟ ನಿರ್ಧಾರ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಡಿ.ತಿಮ್ಮಯ್ಯ, ತೆರೆದ ಮನೆ ಕಾರ್ಯಕ್ರಮದ ಮುಖಾಂತರ ವಿದ್ಯಾರ್ಥಿಗಳು ಕೋರ್ಸುಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಅರಿತು ತಮ್ಮ ಭವಿಷ್ಯದ ಕುರಿತು ಈ ಹಂತದಲ್ಲೇ ಒಂದು ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.