ದಕ್ಷಿಣ ಕೊಡಗು: ಗದ್ದೆ, ತೋಟ ಜಲಾವೃತ, ಭೂಕುಸಿತ
Team Udayavani, Jun 14, 2018, 7:00 AM IST
ಗೋಣಿಕೊಪ್ಪಲು: ಮಂಗಳವಾರ ರಾತ್ರಿ ಸುರಿದ ಮಳೆಗೆ ದಕ್ಷಿಣ ಕೊಡಗಿನ ಬಹುತೇಕ ಗದ್ದೆ, ತೋಟಗಳು ಜಲಾವೃತಗೊಂಡಿದ್ದು, ಕೆಲವೆಡೆ ಭೂಕುಸಿತವಾಗಿದೆ.
ವಿ.ಬಾಡಗ ಗ್ರಾಮದ ತೀತಿಮಾಡ ಕುಟುಂಬಸ್ಥರ ಗದ್ದೆ ಏರಿಗಳು ಹೊಡೆದುಹೋಗಿ ಸಂಪೂರ್ಣ ಜಲಾವೃತಗೊಂಡಿದೆ. ಕುಟ್ಟಂದಿ, ಕಂಡಗಾಲ, ರುದ್ರುಗುಪ್ಪೆ, ಬಿ.ಶೆಟ್ಟಿಗೇರಿ ಭಾಗಗಳಲ್ಲಿ ಮಳೆಯ ಆರ್ಭಟ ತೀವ್ರಗೊಂಡಿದೆ. ಬೇಗೂರು ಕೊಲ್ಲಿ ಗದ್ದೆಗಳು ಭಾಗಾಂಶ ನೀರು ತುಂಬಿಕೊಂಡಿದೆ. ರಸ್ತೆಯ ಮೇಲಾºಗದಲ್ಲೂ ನೀರು ನಿಂತು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.
ಬುಧವಾರ ಬೆಳಿಗ್ಗೆ ಜಾವದ ಮಳೆಯ ಆರ್ಭಟಕ್ಕೆ ರಸ್ತೆಯ ಬದಿಗಳು ಕುಸಿದು ಹೋಗಿ ವಾಹನ ಸಂಚಾರಕ್ಕೆ ಅಡಚಣೆ ಆಗಿದೆ. ನಡಿಕೇರಿ ತಿರುವಿನಲ್ಲಿ ಲಾರಿಯೊಂದು ಮುಂಭಾಗದ ಬರುವ ಖಾಸಗಿ ಬಸ್ಗೆ ಸ್ಥಳಾವಕಾಶ ಮಾಡಿಕೊಡುವ ಸಂದರ್ಭ ರಸ್ತೆಯ ಬದಿಯಲ್ಲಿ ಸಿಲುಕಿಕೊಂಡಿತ್ತು. ಇದ್ದರಿಂದ 2 ಗಂಟೆಗಳ ಕಾಲ ಸಂಚಾರಕ್ಕೆ ಅಡಚಣೆ ಎದುರಾಯಿತು. ಬಾಳೆಲೆ, ನಿಟ್ಟೂರು, ಕಾರ್ಮಾಡು ಭಾಗಗಳಲ್ಲೂ ಮಳೆಯ ತೀವ್ರತೆ ಕಂಡಿದೆ. ಬಿ.ಶೆಟ್ಟಿಗೇರಿಯಲ್ಲಿ 24 ಗಂಟೆಯಲ್ಲಿ 15 ಇಂಚು, ಕುಟ್ಟಂದಿಯಲ್ಲಿ 20 ಇಂಚು, ಬಿರುನಾಣಿಯಲ್ಲಿ 18 ಇಂಚು, ಹೆ„ಸೋಡ್ಲುರುವಿನಲ್ಲಿ 13.70 ಇಂಚು, ಪೊರಾಡುವಿನಲ್ಲಿ 18 ಇಂಚು ಮಳೆಯಾಗಿದೆ. ತಿತಿಮತಿ, ಪಾಲಿಬೆಟ್ಟ, ಅಮ್ಮತ್ತಿ, ಹೊಸುರು ಭಾಗಗಳಲ್ಲೂ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಕಳೆದ 2 ದಿನಗಳಿಂದ ದಕ್ಷಿಣ ಕೊಡಗಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಗಾಳಿ, ಮಳೆಯ ಅಬ್ಬರಕ್ಕೆ ದಕ್ಷಿಣ ಕೊಡಗಿನಲ್ಲಿ 350ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿವೆ. 10 ಟಿ.ಸಿಗಳು ದುರಸ್ಥಿಗೆ ಬಂದಿದೆ. ಪೊನ್ನಂಪೇಟೆ, ಹಳ್ಳಿಗಟ್ಟು, ಕುಂದಾ, ನಾಲ್ಕೇರಿ, ಹುದಿಕೇರಿ, ಕಾನೂರು, ಕುಟ್ಟ, ತಿತಿಮತಿ ಭಾಗಗಳಲ್ಲಿ ಒಂದು ವಾರದಿಂದ ವಿದ್ಯುತ್ ಕಡಿತಗೊಂಡು ಹೊರಗಿನ ಪ್ರಪಂಚದ ಸಂಪರ್ಕ ಇಲ್ಲದಂತಾಗಿದೆ. ಇದೀಗಾಗಲೇ 270 ಕಂಬಗಳನ್ನು ಅಳವಡಿಸಲಾಗಿದ್ದು, ಕುಟ್ಟ, ಬಿರುನಾಣಿ ಭಾಗಗಳಿಗೆ ವಿದ್ಯುತ್ ಕಲ್ಪಿಸಲು ಶ್ರಮ ವಹಿಸುತ್ತಿದ್ದಾರೆ ಎಂದು ಚೆಸ್ಕಂ ಹಿರಿಯ ಅಭಿಯಂತರ ಅಂಕಯ್ಯ ಮಾಹಿತಿ ನೀಡಿದ್ದಾರೆ.
ಮಾಹಿತಿ ಇರದೇ ಶಾಲೆ ರಜೆ ಸಮಸ್ಯೆ
ಅಂಗನವಾಡಿ ಮತ್ತು ಶಾಲೆಗಳಿಗೆ ರಜೆ ನೀಡಲಾಗಿದೆ. ಆದರೆ ರಜೆಯನ್ನು ಮಕ್ಕಳು ಶಾಲೆಗೆ ತೆರಳಿದ ಅನಂತರವೇ ರಜೆ ನೀಡಿರು ವುದರ ಪರಿಣಾಮ ಮಕ್ಕಳಿಗೆ ಸಮಸ್ಯೆಯಾಗಿದೆ. ಎಂದು ಪೋಷಕರು ಆರೋಪಿಸಿದರು. ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಜೆ ನೀಡಿದರೂ ಕಾಲೇಜು ವಿಭಾಗದ ಮಕ್ಕಳಿಗೆ ರಜೆ ನೀಡಿರಲಿಲ್ಲ. ಹೀಗಾಗಿ ಕಾಲೇಜುಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿತ್ತು. ಅಧಿಕಾರಿಗಳು ಮಳೆಯ ವಿವರಗಳನ್ನು ಮೇಲಾಧಿಕಾರಿಗಳಿಗೆ ಮಾಹಿತಿ ನೀಡದ ಪರಿಣಾಮ ಶಾಲಾ ಕಾಲೇಜು ಮಕ್ಕಳಿಗೆ ರಜೆ ನೀಡುವುದರ ಬಗ್ಗೆ ಯಾವುದೇ ಮಾಹಿತಿಯಿರದೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂಬುದು ಪೋಷಕರ ಅಳಲು.
ಭಾರೀಮಳೆ: ಅಪಾರ ಪ್ರಮಾಣದ ಹಾನಿ
ಸೋಮವಾರಪೇಟೆ: ವರುಣನ ಅರ್ಭಟ ಮುಂದುವರಿ ದಿದ್ದು, ಮರಗಳು ಧರೆಗುರುಳುತ್ತಿರುವ ಪರಿಣಾಮ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಮರಗಳು ವಿದ್ಯುತ್ ಕಂಬ ತಂತಿಗಳ ಮೇಲೆ ಬೀಳುತ್ತಿರುವುದರಿಂದ ಸೆಸ್ಕ್ ಶಾಂತಳ್ಳಿ ವಲಯದಲ್ಲಿ 40 ಕಂಬಗಳು ಮುರಿದುಬಿದ್ದಿವೆ. ತಾಕೇರಿ, ಕಿರಗಂದೂರು, ಕೊತ್ನಳ್ಳಿ, ಬೀದಳ್ಳಿ, ಹೆಗ್ಗಡಮನೆ, ಬಾಚಳ್ಳಿ, ಕುಮಾರಳ್ಳಿ, ಹಂಚಿನಳ್ಳಿ, ಹರಗ, ಬೆಟ್ಟದಳ್ಳಿ, ದೊಡ್ಡಮಳೆ, ಸುಳಿಮಳೆ, ಕೂಗೂರು ಗ್ರಾಮಗಳು ಕರೆಂಟ್ ಇಲ್ಲದೆ ಕತ್ತಲೆಯಲ್ಲೇ ದಿನದೂಡಬೇಕಾಗಿದೆ.ಸೆಸ್ಕ್ ಸಿಬಂದಿ ವಿದ್ಯುತ್ ಕಂಬ, ತಂತಿ ಸರಿಪಡಿಸುವ ಕರ್ತವ್ಯದಲ್ಲಿ ತೊಡಗಿದ್ದಾರೆ. ಕಾಫಿ ತೋಟಗಳಲ್ಲೂ ಮರಗಳು ಹಾಗು ರೆಂಬೆಗಳು ಮುರಿದು ಬೀಳುತ್ತಿವೆ.
ಸಂಚಾರ ಸ್ಥಗಿತ
ಮಡಿಕೇರಿ: ಭಾರೀ ಮಳೆಯಿಂದಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಕೊಡಗಿನ ಗಡಿಭಾಗ ಮಾಕುಟ್ಟ ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ ಕಣ್ಣನೂರು-ತಲಚೇರಿಗಳಿಂದ ವಿರಾಜಪೇಟೆ ಮಾರ್ಗವಾಗಿ ಮೈಸೂರು-ಬೆಂಗಳೂರಿಗೆ ಸಾಗುವ ವಾಹನಗಳಿಗೆ ಇರಿಟ್ಟಿ-ಮಾನಂದವಾಡಿ-ಕುಟ್ಟ-ಗೋಣಿಕೊಪ್ಪಕ್ಕಾಗಿ ಸಾಗಲು ಅನುಕೂಲ ಮಾಡಿಕೊಡಲಾಗಿದೆ.