ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಚಿವ ಸುರೇಶ್ ಕುಮಾರ್
Team Udayavani, Aug 31, 2019, 6:02 PM IST
ಕೊಡಗು:ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಹಾರಂಗಿ ಜಲಾಶಯ ಭರ್ತಿಯಾದ ಹಿನ್ನೆಲೆ ಸಚಿವ ಸುರೇಶ್ ಕುಮಾರ್ ದಂಪತಿ ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದರು
ಕುಶಾಲನಗರದ ಹಾರಂಗಿ ಜಲಾಶಯದ ಮುಂಭಾಗ ಇರುವ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದ ಸಚಿವ ಸುರೇಶ್ ಕುಮಾರ್ ನಂತರ ಜಲಾಶಯಕ್ಕೆ ಭಾಗಿನ ಅರ್ಪಣೆ ಮಾಡಿದರು. ಶಾಸಕ ಅಪ್ಪಚ್ಚು ರಂಜನ್ ಡಿಸಿ ಅನೀಸ್ ಕಣ್ಮಣಿ ಜಾಯ್ ಸೇರಿದಂತೆ ಹಲವರು ಹಾಜರಿದ್ದರು.
ಬಾಗೀನ ಅರ್ಪಿಸಿದ ಬಳಿಕ ಮಾತನಾಡಿದ ಸಚಿವ ಸುರೇಶ್ ಕುಮಾರ್, ನಾನು ಬೆಂಗಳೂರಿನವನಾದ್ರೂ ಕಾವೇರಿಯ ಋಣ ನನ್ನ ಮೇಲೆ ತುಂಬಾ ಇದೆ. ಕಾವೇರಿ ಋಣ ತೀರಿಸಲು ನನಗೆ ಇದೊಂದು ಅವಕಾಶ. ಹೀಗಾಗಿಯೇ ನಾನು ಬಾಗೀನ ಅರ್ಪಿಸಲು ಸಂತೋಷ ಪಡುತ್ತೇನೆ. ಹಾರಂಗಿ ತುಂಬಿ ಯಾವುದೇ ಸಮಸ್ಯೆ ಸೃಷ್ಟಿಸದಿರಲಿ, ಈ ಭಾಗದ ರೈತರ ಬದುಕು ಹಸನಾಗಲಿ ಅಂತಾ ಕೇಳಿಕೊಳ್ಳುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಸಚಿವ ಸುರೇಶ್ ಕುಮಾರ್, ಈಗಾಗಲೇ ರಾಜ್ಯದ ಸಮಸ್ಯೆಯನ್ನ ನರೇಂದ್ರ ಮೋದಿ ಗಮನಕ್ಕೆ ತರಲಾಗಿದೆ. ಕೇಂದ್ರದ ತಂಡ ಕೂಡ ರಾಜ್ಯದಲ್ಲಿ ಪರಿಶೀಲನೆ ಮಾಡಿದೆ. ಈಗಾಗಲೇ ಕೇಂದ್ರ ಸರ್ಕಾರ 536 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, 100 ಕೋಟಿ ಬಿಡುಗಡೆ ಮಾಡಿದೆ. ಸೆ.7 ಕ್ಕೆ ಮೋದಿ ರಾಜ್ಯಕ್ಕೆ ಬರುವ ಸಂದರ್ಭದಲ್ಲಿ ಮತ್ತೊಮ್ಮೆ ನಾವು ಹೆಚ್ಚಿನ ಅನುದಾನಕ್ಕೆ ಮನವಿ ಮಾಡುತ್ತೇವೆ ಎಂದರು.