ಮಡಿಕೇರಿ: ದಂಪತಿ ಆತ್ಮಹತ್ಯೆಗೆ ಶರಣು
Team Udayavani, Apr 2, 2019, 6:30 AM IST
ಮಡಿಕೇರಿ: ಪತಿ-ಪತ್ನಿ ಜಗಳ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಮಡಿಕೇರಿ ನಗರದ ಪಂಪಿನ ಕೆರೆ ಬಡಾವಣೆಯಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ದಂಪತಿ ನೇಣಿಗೆ ಶರಣಾ ಗಿದ್ದು, ಹೆಣ್ಣು ಮಗು ಅನಾಥವಾಗಿದೆ.
ನಗರದ ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕರಾಗಿದ್ದ ಚೇತನ್ (34), ವಾಣಿ (27) ಆತ್ಮಹತೈಗೆ ಶರಣಾದ ದಂಪತಿ. ಚೇತನ್ ಮೂಲತಃ ತಿಪಟೂರು ನಿವಾಸಿಯಾಗಿದ್ದು, 4 ವರ್ಷಗಳ ಹಿಂದೆ ತುಮಕೂರು ಮೂಲದ ವಾಣಿ ಅವರನ್ನು ವಿವಾಹ ವಾಗಿದ್ದರು. ಅವರಿಗೆ 3 ವರ್ಷದ ಮಗುವಿದ್ದು, ಕೆಲವು ದಿನಗಳ ಹಿಂದೆ ದಂಪತಿ ನಡುವೆ ಕ್ಷುಲ್ಲಕ ವಿಚಾರಕ್ಕೆ ಮನಸ್ತಾಪವಾಗಿ, ಬಳಿಕ ಎರಡೂ ಕುಟುಂಬಗಳ ಸದಸ್ಯರು ಬಗೆ ಹರಿಸಿ ದ್ದರು ಎನ್ನಲಾಗಿದೆ.
ಪೋಷಕರಿಗೆ ತಿಳಿಸಿ ಕೃತ್ಯ
ಎ. 1ರ ಮಧ್ಯಾಹ್ನ ವೇಳೆಯಲ್ಲಿ ವಾಣಿ ತನ್ನ ಹೆತ್ತವರಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಳು ಎನ್ನಲಾಗಿದೆ. ಆಕೆಯ ಹೆತ್ತವರು ತತ್ಕ್ಷಣ ಚೇತನ್ಗೆ ಕರೆ ಮಾಡಿ ಈ ವಿಚಾರವನ್ನು ತಿಳಿ ಸಿದ್ದು, ಆತ ಮನೆಗೆ ಬಂದಾಗ ಆಕೆ ಸಾವನ್ನಪ್ಪಿರುವುದು ಕಂಡು ಬಂದಿದೆ. ಇದರಿಂದ ಆಘಾತಗೊಂಡ ಚೇತನ್ ಮನೆಯ ಹೊರಗೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದರು. ಸಾಯುವ ಮುನ್ನ ಚೇತನ್ ತನ್ನ ಹೆತ್ತವರಿಗೆ ಕರೆ ಮಾಡಿ ಪತ್ನಿ ಆತ್ಮಹತ್ಯೆಗೈದಿರುವ ವಿಚಾರ ತಿಳಿಸಿ ತಾನೂ ಆತ್ಮಹತ್ಯೆ ಮಾಡಿ ಕೊಳ್ಳುತ್ತಿರುವುದಾಗಿ ಹೇಳಿದ್ದರು. ತತ್ಕ್ಷಣ ಚೇತನ್ ಹೆತ್ತವರು ಮಡಿಕೇರಿ ನಗರ ಪೊಲೀಸರಿಗೆ ಮಾಹಿತಿ ನೀಡಿದರು. ಆದರೆ ಪೊಲೀಸರು ಸ್ಥಳಕ್ಕೆ ಬರುವ ಮೊದಲೇ ಇಬ್ಬರೂ ಮೃತಪಟ್ಟಿದ್ದರು. ನಗರ ಠಾಣಾಧಿಕಾರಿ ಷಣ್ಮುಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.