ಹಲವು ಕುಟುಂಬಗಳು ಸಾಂಕ್ರಾಮಿಕ ರೋಗ ಭೀತಿಯಲ್ಲಿ
ಉದ್ಯಾವರ ಪರಿಸರ ಜಲಾವೃತ
Team Udayavani, Aug 15, 2019, 5:07 AM IST
ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಉದ್ಯಾವರ ಫಸ್ಟ್ ಸಿಗ್ನಲ್ನ ವಿವಿಧ ಮನೆಗಳು ನೆರೆ ಹಾವಳಿಯಿಂದ ನೀರು ತುಂಬಿಕೊಂಡಿದ್ದು ಇಲ್ಲಿನ ವಾಸಿಗರು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ.
ಇಲ್ಲಿನ ಅಲೀಮಾ, ಮೂಸಾ, ಮೋನು, ಹಸೀನಾ, ಮೀನಾ, ಹೈರಾಝ್, ಇಮಿ¤ಯಾಝ್, ಮೇರಿ, ಯು.ಎಂ. ಅಹ್ಮದ್ ಕುಂಞಿ, ಹಸೈನಾರ್, ಹುಸೈನಾರ್, ಸುಶೀಲಾ, ಕಮಲಾ, ಎಂ.ಎಸ್. ಕೃಷ್ಣ ಅವರ ಮನೆಗಳ ಅಂಗಳ ಸಂಪೂರ್ಣ ಜಲಾವೃತಗೊಂಡಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೀರಿನ ಪ್ರಮಾಣ ಹೆಚ್ಚಿದ್ದು ಕೆಲವು ಮನೆಗಳೊಳಗೆ ನೀರು ಪ್ರವೇಶಿಸಿದೆ.
ನೀರು ಹೋಗಲು ಚರಂಡಿಯೇ ಇಲ್ಲ
ಇಲ್ಲಿನ ಪ್ರದೇಶಗಳಲ್ಲಿ 20 ಕ್ಕೂ ಹೆಚ್ಚು ಮನೆಗಳಿದ್ದು ಈ ಮನೆಗಳು ತಗ್ಗು ಪ್ರದೇಶಗಳಲ್ಲಿವೆ. ಮಳೆ ನೀರು ಹರಿಯಲು ಈ ಮೊದಲು ಚರಂಡಿಯಿತ್ತು. ಆ ಬಳಿಕ ಹೊಸ ರೈಲು ಹಳಿ ನಿರ್ಮಿಸಿರುವುದರಿಂದ ಚರಂಡಿಯ ಗಾತ್ರವನ್ನು ಕಿರಿದಾಗಿಸಲಾಗಿತ್ತು. ಇದರಿಂದಾಗಿ ಈ ನೀರು ಚರಂಡಿಯಲ್ಲಿ ಸರಿಯಾಗಿ ಹರಿಯದೇ ಮನೆಯಂಗಳದಲ್ಲಿ ತುಂಬಿಕೊಂಡು ನೆರೆ ಭೀತಿ ಉಂಟು ಮಾಡಿದೆ.
ಈ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆ ಮಾಡಬೇಕಿದ್ದಲ್ಲಿ ರೈಲ್ವೇ ಇಲಾಖೆಯ ಅನುಮತಿಯ ಅಗತ್ಯವಿದ್ದು ಈ ಬಗ್ಗೆ ಸಂಸದ ಉಣ್ಣಿತ್ತಾನ್ ಅವರಲ್ಲಿ ಮನವಿ ಮಾಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹಾಗೂ ಪಂಚಾಯತ್ ಸದಸ್ಯೆ ಅಲೀಮಾ ಹೇಳಿದ್ದಾರೆ. ಪ್ರದೇಶಕ್ಕೆ ಗ್ರಾಮಾಧಿಕಾರಿ ಪ್ರದೀಪ್ ಕುಮಾರ್, ಆರೋಗ್ಯಾಧಿಕಾರಿ ಡಾ| ಶೈನಾ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ರೋಗ ತಡೆಗೆ ಅಗತ್ಯ ಔಷಧವನ್ನು ವಿತರಿಸಿದ್ದಾರೆ.