“ತಾಯಿ, ಮಗು ಆರೈಕೆಗೆ ಆದ್ಯತೆ ನೀಡಿ’
ಆಯುಷ್ ಕಾರ್ಯಾಗಾರ ಉದ್ಘಾಟನೆ
Team Udayavani, Sep 22, 2019, 5:34 AM IST
ಮಡಿಕೇರಿ:ತಾಯಿ ಮತ್ತು ಮಗುವಿನ ಆರೈಕೆ ಮಾಡುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತರು ಕಾಲ ಕಾಲಕ್ಕೆ ಮಾಹಿತಿ ನೀಡುವಂತಾಗಬೇಕು ಎಂದು ಜಿಲ್ಲಾ ಪಂಚಾಯತ್ ಉಪಾಧಕ್ಷೆ ಲೋಕೇಶ್ವರಿ ಗೋಪಾಲ್ ಸಲಹೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಮಹದೇವ ಪೇಟೆಯ ಜಿಲ್ಲಾ ಆಯುಷ್ ಕಚೇರಿಯಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಆಯುಷ್ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಂಗನವಾಡಿ ಕಾರ್ಯಕರ್ತರು ಮಾಹಿತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದವರು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರು ಹೇಳುವ ಮಾತನ್ನು ವೇದವಾಕ್ಯದಂತೆ ಪರಿಪಾಲಿಸುತ್ತಾರೆ. ಆದ್ದರಿಂದ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಮಾಹಿತಿ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.
ಉತ್ತಮ ಆರೋಗ್ಯ ಹೊಂದಲು ಉತ್ತಮ ಆಹಾರ ಅವಶ್ಯವಾಗಿದೆ. ಹಿಂದಿನ ಕಾಲದಲ್ಲಿ ಜನರು ಉತ್ತಮ ಆರೋಗ್ಯ ಹೊಂದಿರುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ರಾಸಾಯನಿಕ ಇಲ್ಲದ ಆಹಾರ ಪದಾರ್ಥಗಳನ್ನು ಯಥೇತ್ಛವಾಗಿ ಬಳಸುತ್ತಿದ್ದರು. ಆದರೆ ಇಂದಿನ ಕಾಲ ಘಟ್ಟದಲ್ಲಿ ರಾಸಾಯನಿಕ ಆಹಾರ ಪದಾರ್ಥಗಳ ಬಳಕೆಯಿಂದ ಅಪೌಷ್ಟಿಕತೆ ಹೆಚ್ಚಾಗುತ್ತಿದೆ. ಆದ್ದರಿಂದ ಆಹಾರ ಬಗ್ಗೆ ಗಮನಹರಿಸುವುದು ಅಗತ್ಯ ಎಂದು ತಿಳಿಸಿದರು.
ಸ್ವಾಭಾವಿಕವಾಗಿ ದೊರೆಯುವ ಹಣ್ಣು, ತರಕಾರಿಗಳನ್ನು ಬಳಸಿ ಅಪೌಷ್ಟಿಕತೆ ನಿವಾರಿಸಲು ಎಲ್ಲರೂ ಶ್ರಮಿಸಬೇಕಿದೆ. ಶುಚಿತ್ವಕ್ಕೆ ಒತ್ತು ನೀಡಬೇಕಿದೆ. ಗ್ರಾಮೀಣಾಭಿವೃದ್ಧಿ ಆದರಲ್ಲಿ ಸಮಾಜದ ಏಳಿಗೆಯನ್ನು ಕಾಣಬಹುದಾಗಿದೆ ಎಂದು ಲೋಕೇಶ್ವರಿ ಗೋಪಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಚ್.ರಾಮಚಂದ್ರ ಮಾತನಾಡಿದರು. ಆಯುಷ್ ವೈದ್ಯೆ ಡಾ| ಶುಭಾ ಪ್ರಾರ್ಥಿಸಿದರು. ಡಾ.ಈಶ್ವರಿ ಕಾರ್ಯಕ್ರಮ ನಿರೂಪಿಸಿದರು. ಡಾ| ಶೈಲಜಾ ಸ್ವಾಗತಿಸಿದರು. ಡಾ.ಸ್ಮಿತಾ ಅವರು ವಂದಿಸಿದರು. ಡಾ.ಶ್ರೀನಿವಾಸ್ ಉಪಸ್ಥಿತರಿದ್ದರು.
ಅಪೌಷ್ಟಿಕತೆ ನಿವಾರಣೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಕೆ.ರಾಧ ಅವರು ಮಾತನಾಡಿ ಸರ್ಕಾರ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಗರ್ಭಿಣಿಯರು ಮತ್ತು ಬಾಣಂತಿಯರು, ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಪೌಷ್ಟಿಕತೆಯಿಂದ ಆಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡಿ ಪೌಷ್ಟಿಕಾಂಶ ಪದಾರ್ಥಗಳನ್ನು ಪಡೆದು ಉತ್ತಮ ಆರೋಗ್ಯಯುತ ಬದುಕು ನಡೆಸುವಂತಾಗಬೇಕು ಎಂದು ಕೋರಿದರು.
ಮಗುವಿನ ಬೆಳವಣಿಗೆ ಹಾಗೂ ತಾಯಿಯ ಆರೈಕೆ ಕಡೆ ಗಮನಹರಿಸಬೇಕು. ಮೂಢ ನಂಬಿಕೆಗಳಿಂದ ಹೊರಬರಬೇಕು ಎಂದು ಸಲಹೆ ಮಾಡಿದರು.