ತೀರ್ಥೋದ್ಭವ ಸಂದರ್ಭ ಮುಂಜಾಗ್ರತ ಕ್ರಮಕ್ಕೆ ಸೂಚನೆ
Team Udayavani, Oct 10, 2020, 10:14 PM IST
ಸಾಂದರ್ಭಿಕ ಚಿತ್ರ
ಮಡಿಕೇರಿ: ಕೊಡಗು ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿ ಸಾಗಿರುವ ಹಿನ್ನೆಲೆಯಲ್ಲಿ, ತಲಕಾವೇರಿಯಲ್ಲಿ ಅ. 17ರಂದು ನಡೆಯಲಿರುವ ಕಾವೇರಿ ತುಲಾ ಸಂಕ್ರಮಣ ತೀರ್ಥೋದ್ಭವ ಮತ್ತು ಜಾತ್ರಾ ಮಹೋತ್ಸವವನ್ನು ಎಚ್ಚರಿಕೆಯಿಂದ ನಡೆಸಬೇಕೆಂದು ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.
ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮುಡಿ ಕಟ್ಟಡದಲ್ಲಿ ತುಲಾ ಸಂಕ್ರಮಣ ಸಂಬಂಧ ಆಯೋಜಿತ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೋಂಕಿನ ಪ್ರಕರಣಗಳು ಕೊಡಗಿನಲ್ಲಿ ಹೆಚ್ಚುತ್ತಿದೆ. ಇದನ್ನು ಲಕ್ಷ್ಯದಲ್ಲಿರಿಸಿಕೊಂಡು ಉತ್ಸವ ಆಚರಿಸಬೇಕೆಂದು ಹೇಳಿದರು.
ತೀರ್ಥೋದ್ಭವ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯವಶ್ಯ. ತಲ ಕಾವೇರಿಯಲ್ಲಿ ಹೆಚ್ಚಿನ ಚಳಿ ಯಿದ್ದು, ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಮುಂಜಾಗ್ರತೆ ವಹಿಸುವಂತೆ ಅವರು ಮನವಿ ಮಾಡಿದರಲ್ಲದೆ, ತಲ ಕಾವೇರಿ ಭಾಗದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.
ಥರ್ಮಲ್ ಸ್ಕ್ರೀನಿಂಗ್
ತಲಕಾವೇರಿ ಮತ್ತು ಭಾಗಮಂಡಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಮಾತನಾಡಿ, ಆರೋಗ್ಯ ಇಲಾಖೆ ತೀರ್ಥೋದ್ಭವ ಸಂದರ್ಭ ಕಾಳಜಿಯಿಂದ ಕಾರ್ಯನಿರ್ವಹಿಸಬೇಕು. ಹೊರ ಗಿನಿಂದ ಬರುವವರಿಗೆ ಥರ್ಮಲ್ ಸ್ಕ್ರೀನಿಂಗ್, ಪಲ್ಸ್ ಆಕ್ಸಿಮೀಟರ್ ಪರೀಕ್ಷೆ ಯನ್ನು ನಡೆಸಬೇಕು. ಸೋಂಕು ಹರಡ ದಂತೆ ಎಚ್ಚರಿಕೆಯಿಂದ ಉತ್ಸವ ನಡೆಸಬೇಕಿದೆ ಎಂದರು.
ಎಲ್.ಇ.ಡಿ. ಸ್ಕ್ರೀನ್
ಎಲ್.ಇ.ಡಿ. ಸ್ಕ್ರೀನ್ ಮೂಲಕ ತೀಥೋìದ್ಭವ ದರ್ಶನದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ ಬಿ.ಎಸ್.ತಮ್ಮಯ್ಯ, ಇತರ ರಾಜ್ಯಗಳಿಂದ ಬರುವ ಪ್ರವಾಸಿಗರ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು. ಆರ್.ಸಿ.ಎಚ್. ಅಧಿಕಾರಿ ಡಾ| ಗೋಪಿ ನಾಥ್, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಹಾಜರಿದ್ದರು.
ಊಟದ ವ್ಯವಸ್ಥೆ ಇಲ್ಲ
ತಲಕಾವೇರಿ ಕ್ಷೇತ್ರದಲ್ಲಿ ವರ್ಷಂಪ್ರತಿ ವಿವಿಧ ಸಂಘ ಸಂಸ್ಥೆಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದ ಊಟದ ವ್ಯವಸ್ಥೆ ಈ ಬಾರಿ ಇರುವುದಿಲ್ಲವೆಂದು ತಮ್ಮಯ್ಯ ಸ್ಪಷ್ಟಪಡಿಸಿದರು.