ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯ ರಾಮನವಮಿ, ವಿಶೇಷ ಪೂಜೆ
Team Udayavani, Apr 7, 2017, 3:04 PM IST
ಮಡಿಕೇರಿ: ಶ್ರೀರಾಮನವಮಿ ಪ್ರಯುಕ್ತ ಕೊಡಗು ಜಿಲ್ಲೆಯಾದ್ಯಂತ ಶ್ರೀರಾಮನಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.
ನಗರದ ಪೇಟೆ ಶ್ರೀರಾಮಮಂದಿರದಲ್ಲಿ ಶ್ರೀರಾಮ ನಾಮ ಸಂಕೀರ್ತನೆ, ವಿಶೇಷ ಪೂಜೆ, ಮಹಾಮಂಗಳಾರತಿಯ ಅನಂತರ ಪ್ರಸಾದ ವಿತರಣೆ ನಡೆಯಿತು.
ಶ್ರೀ ಕೋದಂಡ ರಾಮ ದೇಗುಲದಲ್ಲಿ 27ನೇ ವರ್ಷದ ಶ್ರೀ ರಾಮ ನವಮಿ ಉತ್ಸವ ಶ್ರದ್ಧಾಭಕ್ತಿಯಿಂದ ಜರಗಿತು. ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಪುಷ್ಪ ಅಲಂಕಾರ, ವಸ್ತ್ರ ಅಲಂಕಾರ ಸೇವೆಗಳು ನಡೆದವು. ನಗರದಲ್ಲಿ ಪುಷ್ಪಾಲಂಕೃತ ಮಂಟಪದಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ಅನಂತರ ದೇವಾಲಯದಲ್ಲಿ ಮಹಾಪೂಜೆ, ಮಹಾ ಮಂಗಳಾರತಿ ನೆರವೇರಿತು. ನೆರೆದಿದ್ದ ನೂರಾರು ಭಕ್ತರಿಗೆ ಕೋಸಂಬರಿ, ಪಾನಕ ಹಾಗೂ ಅನ್ನಸಂತರ್ಪಣೆ ನಡೆಯಿತು. ದೇವಾಲಯದ ಆವರಣದಲ್ಲಿ ಜ್ಯೋತಿ ಯುವಕ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಗಳನ್ನು ಆಯೋಜಿಸಲಾಗಿತ್ತು.
ಶ್ರೀ ಆಂಜನೇಯ ದೇವಾಲಯದಲ್ಲಿ ಶ್ರೀರಾಮ ತಾರಕ ಹೋಮ ನಡೆಯಿತು. ಪೂರ್ಣಾಹುತಿಯ ಅನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.