ಗಣರಾಜ್ಯೋತ್ಸವ ಪಥ ಸಂಚಲನ: ನಾಲ್ವರು ವಿದ್ಯಾರ್ಥಿಗಳಿಗೆ ಸಮ್ಮಾನ
Team Udayavani, Mar 3, 2019, 1:00 AM IST
ಮಡಿಕೇರಿ: ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ಗಣರಾಜ್ಯೋ ತ್ಸವ ಪಥಸಂಚಲನದಲ್ಲಿ ಪ್ರಥಮ ಸ್ಥಾನ ಪಡೆದ ಕರ್ನಾಟಕ-ಗೋವಾ ಡೈರೆಕ್ಟರೇಟನ್ನು ಪ್ರತಿನಿಧಿಸಿದ್ದ ನಾಲ್ವರು ಎನ್ಸಿಸಿ ಕೆಡೆಟ್ಗಳನ್ನು 19 ಕರ್ನಾಟಕ ಬೆಟಾಲಿಯನ್ ವತಿಯಿಂದ ಮೆರವಣಿಗೆ ನಡೆಸಿ ಸನ್ಮಾನಿಸಲಾಯಿತು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಾದ ಬಿ.ಎಸ್. ತೇಜಸ್ (ದ್ವೀತಿಯ ಬಿ.ಕಾಂ.), ಎನ್.ಎನ್. ಪೊನ್ನಣ್ಣ (ದ್ವೀತಿಯ ಬಿಎ ಇಜೆಎಸ್) ಕೊಡಗು ವಿದ್ಯಾಲಯದ ದಬಾಯನ, ಪುತ್ತೂರು ವಿವೇಕಾನಂದ ಕಾಲೇಜಿನ ಪ್ರೀತಿ ಅವರನ್ನು ತೆರೆದ ವಾಹನದ ಮೂಲಕ ಗಾಂಧಿ ಮೈದಾನದಿಂದ ಜನರಲ್ ತಿಮ್ಮಯ್ಯ ವೃತ್ತ ಬಳಸಿ ಎಸ್ಪಿ ಕಚೇರಿ ಬಳಿಯಿರುವ ಎನ್ಸಿಸಿ ಕಚೇರಿವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು.
ಕಳೆದ ಹದಿನೈದು ವರ್ಷಗಳ ನಂತರ ದೇಶದ ಎಲ್ಲಾ ಬೆಟಾಲಿಯನ್ಗಳ ಪೈಕಿ ಗಣರಾಜ್ಯೋತ್ಸವ ಪಥ
ಸಂಚಲನದಲ್ಲಿ ಈ ವರ್ಷ ಕರ್ನಾಟಕ-ಗೋವಾ ಡೈರಕ್ಟರೇಟ್ ಪ್ರಥಮ ಸ್ಥಾನಗಳಿಸಿದೆ.
ಈ ಸಂದರ್ಭ ಕೊಡಗು ಘಟಕದ ಮುಖ್ಯಸ್ಥ ಕರ್ನಲ್ ವಿ.ಎಂ. ನಾಯಕ್, ಲೆಫ್ಟಿನೆಂಟ್ ಕರ್ನಲ್ ಸಂಜಯ್ ಆಪ್ಟೆ, ಮೇಜರ್ ಡಾ| ಬಿ. ರಾಘವ್, ಸುಭೇದಾರ್ ಮೇಜರ್ ರಾಜೇಶ್, ಸುಭೇದಾರ್ ರಮೇಶ್, ಲೆಫ್ಟಿನೆಂಟ್ ಕಾವೇರಪ್ಪ, ಕೊಡಗು ವಿದ್ಯಾಲಯದ ದಾಮೋದರ, ಮೂರ್ನಾಡು ಹೈಸ್ಕೂಲಿನ ಗಣೇಶ್ ಹಾಗೂ ಪುತ್ತೂರು, ಮೂರ್ನಾಡು, ಸುಳ್ಯದ ಎನ್ಸಿಸಿ ಕೆಡೆಟ್ಗಳು ಸ್ವಾಗತಿಸಿ ಅಭಿನಂದಿಸಿದರು.