ಶನಿವಾರಸಂತೆ: ತಗ್ಗಿದ ಮಳೆ; ಕೃಷಿಯತ್ತ ಮುಖ ಮಾಡಿದ ರೈತರು
Team Udayavani, Aug 15, 2019, 5:40 AM IST
ಶನಿವಾರಸಂತೆ: ಶನಿವಾರಸಂತೆ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ಮಳೆ ವಿರಾಮ ಕೊಟ್ಟಿರುವ ಹಿನ್ನಲೆಯಲ್ಲಿ ಈ ಭಾಗದ ರೈತರು ಭತ್ತದ ಗದ್ದೆಗಳಲ್ಲಿ ನಾಟಿ ಕಾರ್ಯದಲ್ಲಿ ನಿರತರಾಗಿದ್ದಾರೆ.
ನಿಡ್ತ ಗ್ರಾ.ಪಂ.ವ್ಯಾಪ್ತಿಯ ಇತಿಹಾಸ ಹಿನ್ನೆಲೆಯುಳ್ಳ ಮುಳ್ಳೂರು ಗ್ರಾಮದಲ್ಲಿರುವ ಇಂಟಿ ನಾಯಕನ ಕೆರೆ ಇದೀಗ ಸಂಪೂರ್ಣವಾಗಿ ಭರ್ತಿಯಾಗಿದೆ. ಶನಿವಾರಸಂತೆ-ಕುಶಾಲನಗರ-ಮೈಸೂರು ರಾಜ್ಯ ಹೆದ್ದಾರಿಯ ಮುಳ್ಳೂರು ಗ್ರಾಮದ ಹೆದ್ದಾರಿ ಬದಿಯಲ್ಲಿರುವ ಇಂಟಿ ನಾಯಕನ ಕೆರೆ ಸುಮಾರು 700 ವರ್ಷಗಳಷ್ಟು ಇತಿಹಾಸವನ್ನು ಹೊಂದಿದೆ. ಹಿಂದೆ ಹತ್ತಾರು ಏಕರೆಯಷ್ಟು ವಿಸ್ತೀರ್ಣವನ್ನು ಹೊಂದಿದ ಕೆರೆ ಇದೀಗ 6 ಏಕರೆಯಷ್ಟು ವಿಸ್ತೀರ್ಣವನ್ನು ಹೊಂದಿದೆ. ಇಂಟಿ ನಾಯಕನ ಕೆರೆ ನೀರನ್ನು ನಂಬಿ ಮುಳ್ಳೂರು ಗ್ರಾಮಸ್ಥರು ನೂರಾರು ಹೆಕ್ಟರ್ನಲ್ಲಿ ವ್ಯವಸಾಯವನ್ನು ಮಾಡುತ್ತಾರೆ. ಇಂಟಿ ನಾಯಕನ ಕೆರೆ ನಾಲೆ ಮೂಲಕವಾಗಿ ಮುಳ್ಳೂರು ಗ್ರಾಮದಲ್ಲಿರುವ ಗುದ್ದಲಿಕೆರೆಗೆ ನೀರನ್ನು ಹರಿಯ ಬಿಡಲಾಗುತ್ತದೆ.
ರೈತರು ಇಂಟಿ ನಾಯಕನ ಕೆರೆನೀರನ್ನು ಬಳಸಿ ವ್ಯವಸಾಯ ಮಾಡುತ್ತಾರೆ. ಹೆಚ್ಚುವರಿ ನೀರು ಪಕ್ಕದ ಗ್ರಾಮಕ್ಕೆ ನಾಲೆ ಮೂಲಕ ಹರಿದು ಕೊಲ್ಲಿಯಾಗಿ ಹರಿದು ಹೊಸಗುತ್ತಿ ಗ್ರಾಮದಲ್ಲಿ ಗಾರೆಕಟ್ಟೆ ಹೊಳೆಯಾಗಿ ಹರಿದು ಹಾಸನ ಜಿಲ್ಲೆ ಕಡೆಗೆ ಹರಿಯುತ್ತದೆ. ಕಳೆದ ವಾರ ಶನಿವಾರಸಂತೆ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿರುವುದ್ದರಿಂದ ಇಂಟಿ ನಾಯಕನ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದೆ.
ನಾಲೆ ಮೂಲಕ ನೀರನ್ನು ಬಿಡಲಾಗು ತ್ತಿದ್ದರೂ ಮುಳ್ಳೂರು ಗ್ರಾಮದೊಳಗಿರುವ ಗುದ್ದಲಿಕೆರೆ ಏರಿ ಮಳೆಗೆ 3 ದಿನಗಳ ಹಿಂದೆ ಒಡೆದು ಹೋಗಿರುವುದ್ದರಿಂದ ನೀರು ವ್ಯರ್ಥವಾಗಿ ಹರಿಯುತಿತ್ತು. ಕೆರೆ ಏರಿ ದುರಸ್ಥಿ ಪ್ರಕ್ರಿಯೆ ಹಿನ್ನಲೆ ಇಂಟಿ ನಾಯಕನ ಕೆರೆಯ ನಾಲೆ ಮೂಲಕ ಹರಿಯುವುದನ್ನು ಸ್ಥಗಿತಗೊಳಿಸಲಾಗಿದೆ.