ಮೈಸೂರು ದಸರಾ ಜಂಬೂ ಸವಾರಿಯ ದ್ರೋಣ ಇನ್ನಿಲ್ಲ
Team Udayavani, Apr 27, 2019, 10:44 AM IST
ಗೋಣಿಕೊಪ್ಪಲು: ಮೈಸೂರು ದಸರಾ ಜಂಬೂ ಸವಾರಿಯಲ್ಲಿ ರಾಜ ಗಾಂಭೀರ್ಯದಿಂದ ಗಮನ ಸೆಳೆದಿದ್ದ ಆನೆ ದ್ರೋಣ ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ. ದ್ರೋಣನಿಗೆ 37 ವರ್ಷವಾಗಿತ್ತು.
ತಿತಿಮತಿ, ನಾಗರಹೊಳೆ ಅಭಯಾರಣ್ಯದ ಮತ್ತಿ ಗೋಡು ಆನೆ ಶಿಬಿರದಲ್ಲಿ ಆರು ವರ್ಷಗಳಿಂದ ವಾಸವಾಗಿದ್ದ ದ್ರೋಣ ಶುಕ್ರವಾರ ಬೆಳಗ್ಗೆ ಶಿಬಿರದ ನೀರಿನ ತೊಟ್ಟಿಯಲ್ಲಿ ದಾಹ ನೀಗಿಸಿಕೊಂಡ ಅನಂತರ ಅಸ್ವಸ್ಥಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
2014ರಲ್ಲಿ ನಾಗರಹೊಳೆ ಅಭಯಾರಣ್ಯದ ಹಾಸನ ಜಿಲ್ಲೆಯ ಆಲೂರು ವ್ಯಾಪ್ತಿಯಲ್ಲಿ ಪುಂಡಾಟ ನಡೆಸಿದ್ದ ದ್ರೋಣನನ್ನು ಸೆರೆ ಹಿಡಿದು ಮತ್ತಿಗೋಡು ಆನೆ ಶಿಬಿರಕ್ಕೆ ಕರೆತರಲಾಗಿತ್ತು. ಅನಂತರ ಸಂಯಮದ ತರಬೇತಿ ನೀಡಿ ಪಳಗಿಸಲಾಗಿತ್ತು. ದ್ರೋಣನನ್ನು ರವಿ ಮತ್ತು ಗುಂಡು ಎಂಬ ಮಾವುತ, ಕಾವಾಡಿಗಳು ಆರೈಕೆ ಮಾಡುತ್ತಿದ್ದರು. ಅನಂತರ ದ್ರೋಣ ಶಿಬಿರದ ಖಾಯಂ ನಿವಾಸಿಯಾಗಿದ್ದ. ಕಳೆದ ಬಾರಿ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಗಮನ ಸೆಳೆದಿದ್ದ ಎಂದು ವೈದ್ಯರಾದ ಡಾ| ನಾಗರಾಜ್ ತಿಳಿಸಿದ್ದಾರೆ.