ಶಬರಿಮಲೆ ಹೋರಾಟ ನಿಲ್ಲದು: ಕೆ.ಪಿ. ಶಶಿಕಲಾ ಟೀಚರ್
Team Udayavani, May 17, 2019, 6:30 AM IST
ಕಾಸರಗೋಡು: ಗುರಿ ತಲುಪುವ ತನಕ ಶಬರಿ ಮಲೆ ಆಂದೋಲನದಿಂದ ಹಿಂದೂ ಐಕ್ಯ ವೇದಿಕೆಯಾಗಲಿ, ಶಬರಿಮಲೆ ಕ್ರಿಯಾ ಸಮಿತಿಯಾಗಲೀ ಸ್ವಲ್ಪವೂ ಹಿಂದೆ ಸರಿಯುವುದಿಲ್ಲ ಎಂದು ಹಿಂದೂ ಐಕ್ಯವೇದಿಕೆಯ ರಾಜ್ಯ ಅಧ್ಯಕ್ಷೆ ಕೆ.ಪಿ.ಶಶಿಕಲಾ ಟೀಚರ್ ಸ್ಪಷ್ಟಪಡಿಸಿದ್ದಾರೆ.
ಆರನ್ಮುಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಬರಿಮಲೆ ಹೋರಾಟ ಈತನಕ ಫಲಪ್ರಾಪ್ತಿ ಕಂಡಿಲ್ಲ. ಸುಪ್ರೀಂಕೋರ್ಟ್ನ ಪರಿಶೀಲನೆಯಲ್ಲಿರುವ ಮರುಪರಿಶೀಲನ ಅರ್ಜಿಯಲ್ಲಿ ಭಕ್ತರ ಪರ ಅನುಕೂಲಕರ ತೀರ್ಪು ನೀಡಬೇಕು. ಇಲ್ಲವಾದಲ್ಲಿ ರಾಜ್ಯ ಸರಕಾರ ತನ್ನ ಹಠಮಾರಿತನ ನಿಲುವನ್ನು ಕೈಬಿಟ್ಟು ಶಬರಿಮಲೆಯಲ್ಲಿ ಪರಂಪರಾಗತ ಆಚಾರ ಸಂರಕ್ಷಿಸಲು ಅನುಕೂಲಕರ ರೀತಿಯಲ್ಲಿ ವಿಶೇಷ ಕಾನೂನಿಗೆ ರೂಪು ನೀಡಬೇಕು. ಅಲ್ಲಿಯವರೆಗೆ ಶಬರಿಮಲೆ ಹೋರಾಟವನ್ನು ಮುಂದುವರಿಸಲಾಗುವುದು. ಶಬರಿಮಲೆ ಕ್ರಿಯಾ ಸಮಿತಿ ಕೈಗೊಳ್ಳುವ ತೀರ್ಮಾನದ ಜೊತೆ ಹಿಂದೂ ಐಕ್ಯವೇದಿ ಕೈಜೋಡಿಸಲಿದೆ ಎಂದು ತಿಳಿಸಿದರು.
ಶಬರಿಮಲೆ ಕ್ರಿಯಾ ಸಮಿತಿ ಮತ್ತು ಹಿಂದೂ ಐಕ್ಯ ವೇದಿಕೆ ನಡುವೆ ಈತನಕ ಯಾವುದೇ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿಲ್ಲ. ಆಚಾರಗಳನ್ನು ಪಾಲಿಸುತ್ತಾ ಬಂದಿರುವವರಿಗೆ ಅದನ್ನು ಪಾಲಿಸಲು ವಿಘ್ನಗಳು ಉಂಟಾದಾಗ ಅಂತಹ ವಿಘ್ನಗಳ ಅನುಭವವಾಗುವುದು. ಹಿಂದೂ ಸಂತರು ಮತ್ತು ಧಾರ್ಮಿಕ ನೇತಾರರ ಸಮೂಹದೊಂದಿಗೆ ಚರ್ಚಿಸಿ ಅಭಿಪ್ರಾಯ ಸಮನ್ವಯದೊಂದಿಗೆ ಮಾತ್ರವೇ ಯಾವುದೇ ಬದಲಾವಣೆ ತರಬಹುದು.
ಅದನ್ನು ಬಿಟ್ಟು ಅವಸರದಿಂದ ಕ್ರಮ ತೆಗೆದುಕೊಳ್ಳುವ ನಿಲುವನ್ನು ಸರಕಾರ ಕೊನೆಗೊಳಿಸಬೇಕು. ಶಬರಿಮಲೆಗೆ ಯುವತಿಯರ ಪ್ರವೇಶವನ್ನು ತಡೆಯುವುದು ಅನಾಚಾರವಲ್ಲ ಅದು ಆಚಾರ ವೈಫಲ್ಯವಾಗಿದೆ. ಆದ್ದರಿಂದ ಅದನ್ನು ಆಚರಿಸುವ ಯಾರಿಗೂ ಅನಾಚಾರವೆಂದು ತೋರದೆಂದೂ ಶಶಿಕಲಾ ಟೀಚರ್ ತಿಳಿಸಿದ್ದಾರೆ.