ಸರಕಾರದ ಅನುದಾನ ಸದುಪಯೋಗಪಡಿಸಿ: ಶೋಭಾ ಮೋಹನ್
Team Udayavani, Jul 8, 2019, 5:34 AM IST
ಮಡಿಕೇರಿ :ಅಭಿವೃದ್ಧಿ ಕಾರ್ಯಗಳಿಗಾಗಿ ರೂಪಿಸಲಾಗಿರುವ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಠಾನ ಗೊಳಿಸುವ ಮೂಲಕ ಅಧಿಕಾರಿಗಳು ಸರಕಾರದ ಅನುದಾನವನ್ನು ಸದುಪ ಯೋಗ ಪಡಿಸಬೇಕೆಂದು ಮಡಿಕೇರಿ ತಾಲೂಕು ಪಂಚಾಯತ್ ಅಧ್ಯಕ್ಷೆ ತೆಕ್ಕಡೆ ಶೋಭಾಮೋಹನ್ ಸೂಚನೆ ನೀಡಿದ್ದಾರೆ.
ತಾ.ಪಂ ಸಭಾಂಗಣದಲ್ಲಿ ನಡೆದ 2019-20 ನೇ ಸಾಲಿನ ಜೂನ್ ಅಂತ್ಯದವರೆಗಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾವಿಸಿದ ತೆಕ್ಕಡೆ ಶೋಭಾ, ಕುಂಬಳ ದಾಳು ಅಂಗನವಾಡಿ ಕೇಂದ್ರದಲ್ಲಿ ಮೂರು ಮಕ್ಕಳು ಮಾತ್ರ ಇದ್ದಾರೆ. ನಿಯಮಾನುಸಾರ ಅಂಗನವಾಡಿ ಸಹಾಯಕಿಯರೇ ಮಕ್ಕಳನ್ನು ಕೇಂದ್ರಗಳಿಗೆ ಕರೆದುಕೊಂಡು ಹೋಗಿ, ಮರಳಿ ಕರೆತರಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ ಸಹಾಯಕಿ ಪೋಷಕರಿಗೆ ಮಕ್ಕಳನ್ನು ಕೇಂದ್ರಕ್ಕೆ ತಂದು ಬೀಡುವಂತೆ ಸೂಚನೆ ನೀಡುತ್ತಾರೆ. ಮಾತ್ರವಲ್ಲದೇ 4 ಗಂಟೆವರೆಗೆ ಕೇಂದ್ರ ತೆರೆಯಬೇಕೆಂಬ ಸೂಚನೆ ಇದ್ದರೂ ಕೂಡ 3.30 ವರೆಗೆ ಮಾತ್ರ ಕೇಂದ್ರದಲ್ಲಿರುತಾರೆ. ಮಕ್ಕಳನ್ನು ಅಂಗಡಿ ಇಲ್ಲವೇ ರಸ್ತೆಯಲ್ಲಿ ನಿಲ್ಲಿಸಿ ಹೋಗುತ್ತೇನೆ. ಅಲ್ಲಿಂದ ನೀವೆ ಕರೆದುಕೊಂಡು ಹೋಗಿ ಎಂದು ಪೋಷಕರಿಗೆ ಆದೇಶ ಮಾಡುತ್ತಾರೆ. ಇನ್ನು ಶಿಕ್ಷಕರಂತೂ ವಾರದಲ್ಲಿ ಮೂರು ದಿನ ಮಾತ್ರ ಅಂಗನವಾಡಿಗೆ ಆಗಮಿಸುತ್ತಾರೆ. ಏಕೆ ಹೀಗೆ ಆಗುತ್ತಿದೆ ಎಂದು ಶಿಶು ಅಭಿವೃದ್ಧಿ ಅಧಿಕಾರಿಯನ್ನು ಪ್ರಶ್ನಿಸಿದರು.
ಪ್ರತಿಕ್ರಿಯಿಸಿದ ಅಧಿಕಾರಿ ದಮಯಂತಿ, ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ನನಗೆ ಹೆಚ್ಚುವರಿ ಜವಾಬ್ದಾರಿಯೂ ಇದೆ. ನಮ್ಮಲ್ಲಿ ಸೂಪರ್ ವೈಸರ್ಗಳ ಕೊರತೆ ಇರುವ ಕಾರಣ ಸಮಸ್ಯೆ ಉಂಟಾಗುತ್ತಿದೆ. 2 ಅಂಗನವಾಡಿಯಲ್ಲಿ ಕಾರ್ಯಕರ್ತೆ ಮತ್ತು 8 ಅಂಗನವಾಡಿಯಲ್ಲಿ ಸಹಾಯಕಿಯರ ಹುದ್ದೆ ಖಾಲಿ ಇದೆ. ಈ ಬಗ್ಗೆ ಗಮನ ಹರಿಸುತ್ತೇನೆ ಎಂದರು.
ಇಲಾಖೆಯಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಯಡಿಯಲ್ಲಿ 2,006 ರಿಂದ ಜೂ 2019 ರವರೆಗೆ 3,491 ಬಾಂಡ್ಗಳನ್ನು ವಿತರಿಸಲಾಗಿದೆ. ಬಾಂಡ್ ಬರಲು ಬಾಕಿ ಇದ್ದ 372 ರಲ್ಲಿ 130 ಬಾಂಡ್ ಕಚೇರಿಗೆ ಬಂದಿದ್ದು, ವಿತರಣೆ ಮಾಡಲಾಗಿದೆ ಎಂದರು.
ಕೃಷಿ ಇಲಾಖೆಯ ಅಧಿಕಾರಿ ಗಿರೀಶ್ ಮಾತನಾಡಿ, ತಾಲೂಕಿನ ನಾಲ್ಕು ಹೋಬಳಿ ಕಚೇರಿಯಲ್ಲಿ ಭತ್ತದ ಬಿತ್ತನೆ ಬೀಜಗಳಾದ ಇಂಟಾನ್, ತುಂಗ, ಜಯ, ಬಿಆರ್-2655, ಅಥಿರ ವಿತರಣೆಯಾಗುತ್ತಿದೆ. ಮುಂಗಾರು ಮಳೆ ಆಶಾದಾಯಕವಾಗಿದ್ದು, ಬಿತ್ತನೆ ತಯಾರಿ ನಡೆಯುತ್ತಿದೆ ಎಂದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಈಗಾಗಲೇ ತಾಲೂಕಿನಲ್ಲಿ 12,500 ಅರ್ಜಿಗಳು ಬಂದಿದ್ದು, 8,300 ಅರ್ಜಿಗಳನ್ನು ಆನ್ಲೈನ್ನಲ್ಲಿ ದಾಖಲಾಗಿರುತ್ತದೆ. 2,000 ರೂ ವಿನಂತೆ ಮೂರು ಕಂತುಗಳಲ್ಲಿ ರೈತರಿಗೆ ನೇರವಾಗಿ 6,000 ರೂ ಖಾತೆಗೆ ಜಮಾಯಿಸಲು ಕೆಲಸ ಕಾರ್ಯ ನಡೆಯುತ್ತಿದೆ ಎಂದರು.
ತೋಟಗಾರಿಕೆ ಇಲಾಖೆಯ ಅಧಿಕಾರಿ ಚಂದ್ರಶೇಖರ್, ತಾ.ಪಂ.ಇಒ ಲಕ್ಷ್ಮಿ , ಶಿಕ್ಷಣಾಧಿಕಾರಿ ಗಾಯತ್ರಿ ಮೀನುಗಾರಿಕೆ, ಸಮಾಜ ಕಲ್ಯಾಣ, ಆಯುಷ್, ಅಕ್ಷರ ದಾಸೋಹ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ, ಆಹಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಸೇರಿದಂತೆ ನಾನಾ ಇಲಾಖೆಯ ಪ್ರಗತಿ ಪರಿಶೀಲನೆ ನಡೆಯಿತು.ಉಪಾಧ್ಯಕ್ಷ ಬೊಳಿಯಾಡೀರ ಸಂತು ಸುಬ್ರಮಣಿ ಉಪಸ್ಥಿತರಿದ್ದರು.
ಅಲ್ಯೂಮಿನಿಯಂ ಏಣಿ ಬಳಕೆ
ಚೆಸ್ಕಾಂ ಅಧಿಕಾರಿ ಮಹೇಶ್ ಮಾತನಾಡಿ, ಮಾರ್ಚ್ನಿಂದ ಇಲ್ಲಿವರೆಗೆ ಮಳೆಗೆ 227 ಕಂಬಗಳು ಹಾನಿಗೀಡಾಗಿದ್ದವು. ಈ ಬಗ್ಗೆ ಗಮನಹರಿಸಿದ್ದು, 20 ಕಂಬಗಳು ಮಾತ್ರ ದುರಸ್ತಿಗೆ ಬಾಕಿ ಉಳಿದಿವೆೆ ಎಂದರು.
ಎಷ್ಟೇ ಸೂಚನೆ ನೀಡಿದರೂ ಅಲ್ಯೂಮಿನಿಯಂ ಏಣಿ ಬಳಕೆ ಪ್ರಮಾಣ ಕಡಿಮೆಯಾಗಿಲ್ಲ. ಇದರಿಂದ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ರೈತರೂ ಅಲ್ಯೂಮಿನಿಯಂ ಏಣಿ ಬಳಕೆ ಮಾಡಬಾರದು ಹಾಗೂ ತೋಟದಲ್ಲಿ ವಿದ್ಯುತ್ ವಯರ್ಗಳು ಬಿದ್ದಿದ್ದರೆ ಇಲಾಖೆ ಗಮನಕ್ಕೆ ತರುವಂತೆ ಅಧಿಕಾರಿ ಸಭೆಗೆ ತಿಳಿಸಿದರು.