ಕೊಡವ ಸಾಹಿತ್ಯ ಅಕಾಡೆಮಿಯಿಂದ ತಂಡಗಳಿಗೆ ದುಡಿ, ತಾಳ ವಿತರಣೆ
Team Udayavani, Mar 9, 2019, 12:45 AM IST
ಮಡಿಕೇರಿ :ಕಳೆದ ಮಳೆಗಾಲ ದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ದಿಂದ ಏಳು ನಾಡು ಗ್ರಾಮಗಳಲ್ಲಿ ಜೀವ ಮತ್ತು ಜೀವನಾಧಾ ರವಾದ ತೋಟ, ಗದ್ದೆಗಳು ಹಾನಿಗೀಡಾಗಿರುವುದಲ್ಲದೆ ಕೊಡಗಿನ ಸಂಸ್ಕೃತಿ, ಆಚಾರ, ವಿಚಾರಕ್ಕೆ ಪೂರಕವಾದ ಪರಿಕರಗಳು ಕೂಡ ನೀರುಪಾಲಾಗಿದ್ದವು. ಇದನ್ನು ಮನಗಂಡ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ದುಡಿಪಾಟ್ ತಂಡ ಮತ್ತು ಉಮ್ಮತ್ತಾಟ್ ತಂಡಗಳಿಗೆ ದುಡಿ ಹಾಗೂ ತಾಳವನ್ನು ವಿತರಿಸುವ ಮೂಲಕ ನೆರವನ್ನು ನೀಡಿತು.
ಮಡಿಕೇರಿಯ ಕರವಲೆ ಬಾಡಗ ಶ್ರೀಭಗವತಿ ದೇವಾಲಯ ಹಾಗೂ ಮೂವತ್ತೂಕ್ಲುವಿನ ಶ್ರೀಭದ್ರಕಾಳಿ ದೇವಾಲಯದ ದುಡಿಪಾಟ್ ತಂಡ ಮತ್ತು ಉಮ್ಮತ್ತಾಟ್ ತಂಡಗಳಿಗೆ ತಲಾ ನಾಲ್ಕು ದುಡಿ ಹಾಗೂ ತಲಾ ಹನ್ನೆರಡು ತಾಳಗಳನ್ನು ಅಕಾಡೆಮಿ ವತಿಯಿಂದ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ ಕಳೆದ ಒಂದು ವರ್ಷ ಮೂರು ತಿಂಗಳಿನಿಂದ ಕೊಡವ ಆಚಾರ, ವಿಚಾರ, ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವ ಅಕಾಡೆಮಿ ಅದರ ಒಂದು ಭಾಗವಾಗಿ ದುಡಿ ಮತ್ತು ತಾಳವನ್ನು ದೇವಾಲಯ ಹಾಗೂ ಸಂಘ, ಸಂಸ್ಥೆಗಳಿಗೆ ನೀಡುತ್ತಾ ಬರುತ್ತಿದೆ ಎಂದರು.
ಕಳೆದ ಮಳೆಗಾಲದಲ್ಲಿ ನಷ್ಟಕ್ಕೆ ಒಳಗಾದ ತಂಡಗಳಿಗೆ ಆರ್ಥಿಕ ನೆರವನ್ನು ನೀಡಲಾಗಿದ್ದು, ಇದೀಗ ದುಡಿ ಮತ್ತು ತಾಳವನ್ನು ವಿತರಿಸಲಾಗಿದೆ ಎಂದರು.
ಅಕಾಡೆಮಿ ಸದಸ್ಯರುಗಳಾದ ಹಂಚೆಟ್ಟಿರ ಮನುಮುದ್ದಪ್ಪ, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ನಾಳಿಯಮಂಡ ಉಮೇಶ್ ಕೇಚಮಯ್ಯ, ಬೊಳ್ಳಜಿರ ಬಿ.ಅಯ್ಯಪ್ಪ, ಕರವಲೆ ಶ್ರೀಭಗವತಿ ದೇವಾಲಯದ ಅಧ್ಯಕ್ಷ ಸುಬ್ಬಮಂಡ ಬೋಜಪ್ಪ, ಪ್ರಮುಖರಾದ ಮುದ್ದಂಡ ರಾಯ್ ತಮ್ಮಯ್ಯ, ಶ್ರೀಭದ್ರಕಾಳಿ ದೇವಾಲಯದ ಅಧ್ಯಕ್ಷ ನಾಗಂಡ ಸಚಿ ಕಾಳಪ್ಪ ಹಾಗೂ ಗ್ರಾಮಸ್ಥರು ಈ ಸಂದರ್ಭ ಹಾಜರಿದ್ದರ0