ಮೊಬೈಲ್ ಗೀಳಿನಿಂದ ಅಧ್ಯಯನಾಸಕ್ತಿ ಕ್ಷೀಣ
ಪದವಿ ಪೂರ್ಣಗೊಳ್ಳುವವರೆಗೆ ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿರಿ: ಷಡಕ್ಷರಪ್ಪ
Team Udayavani, May 27, 2019, 12:41 PM IST
ಕೊಂಡ್ಲಹಳ್ಳಿ: ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕೊಂಡ್ಲಹಳ್ಳಿ: ಪೋಷಕರು ಮಕ್ಕಳ ಮುಂದೆಯೇ ದುಶ್ಚಟಗಳನ್ನು ಮಾಡುವುದರಿಂದ ಮಕ್ಕಳು ದುಶ್ಚಟಗಳಿಗೆ ಬಲಿಯಾಗುವ ಸಂಭವ ಹೆಚ್ಚು ಎಂದು ರಾಜ್ಯ ಪಟ್ಟಸಾಲೆ ಸಮಾಜದ ಗೌರವಾಧ್ಯಕ್ಷ ಡಿ. ಷಡಕ್ಷರಪ್ಪ ಎಚ್ಚರಿಸಿದರು.
ಇಲ್ಲಿನ ಸಾಲೇಶ್ವರ ಸಮುದಾಯ ಭವನದಲ್ಲಿ ತಾಲೂಕು ನೇಕಾರ ನೌಕರರ ಸಂಘ ಹಾಗೂ ಪಟ್ಟಸಾಲೆ ನೇಕಾರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ನೇಕಾರ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪದವಿ ಮುಗಿಯುವವರೆಗೂ ಮೊಬೈಲ್ ಕೊಡಿಸಬಾರದು.ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳು ಓದುವ ಹವ್ಯಾಸದಿಂದ ದೂರವಾಗುತ್ತಿದ್ದು, ಮೊಬೈಲ್ ದಾಸರಾಗುತ್ತಿದ್ದಾರೆ. ಟಿವಿ ಮತ್ತು ಮೊಬೈಲ್ ಬಿಟ್ಟು ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದುವುದರಿಂದ ಸ್ಪರ್ಧಾ ಮನೋಭಾವ ಬೆಳೆದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುತ್ತದೆ ಪೋಷಕರು ಕೂಡ ಟಿವಿ ನೋಡುವುದನ್ನು ಕಡಿಮೆ ಮಾಡಿ ಮಕ್ಕಳಿಗೆ ಓದಲು ಉತ್ತಮ ವಾತಾವರಣವನ್ನು ಒದಗಿಸಬೇಕು ಎಂದರು.
ಪಟ್ಟಸಾಲೆ ಸಮಾಜದ ಅಧ್ಯಕ್ಷ ಎನ್. ಅಪ್ಪಳ್ಳಿ ಮಾತನಾಡಿ, ಪ್ರತಿಭಾ ಪುರಸ್ಕಾರಕ್ಕೆ ಸಮಾಜದ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು.ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಎಂದು ಅಭಿಪ್ರಾಯಪಟ್ಟರು.
ನೇಕಾರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಒ.ಟಿ. ನಾಗರಾಜ್ ಮಾತನಾಡಿ, ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಲು ಒಂದು ಲಕ್ಷ ರೂ. ಅನ್ನು ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ. ಅದರ ಬಡ್ಡಿಯ ಮೊತ್ತದಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಐದು ಲಕ್ಷ ರೂ. ಸಂಗ್ರಹದ ಗುರಿ ಹೊಂದಿದ್ದು, ಬಡ ಪ್ರತಿಭಾವಂತರಿಗೆ ವಿದ್ಯಾರ್ಥಿವೇತನ ನೀಡುವ ಉದ್ದೇಶವಿದೆ ಎಂದರು.
ಬಿ.ಆರ್. ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಪಟ್ಟಸಾಲೆ ನೌಕರರ ಸಂಘದ ಅಧ್ಯಕ್ಷ ಮಹಂತೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಸನ್ನಕುಮಾರ್, ಪತ್ರಕರ್ತ ಎಸ್.ಕೆ. ಜಯಪ್ರಕಾಶ್, ನೇಕಾರ ನೌಕರರ ಸಂಘದ ಅಧ್ಯಕ್ಷ ಎಸ್.ಟಿ. ನಟರಾಜ್, ಎನ್.ಟಿ. ಮಂಜುಳಾ, ಸಂಘಟನಾ ಕಾರ್ಯದರ್ಶಿ ಬಿ.ಎನ್. ನಿಂಗರಾಜ್, ಎನ್.ಜಿ. ಶಾರದಾದೇವಿ ಬಿ.ಆರ್. ತಿಪ್ಪೇಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು. ಇದೇ ವೇಳೆ ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 11 ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸದಾಧನೆ ಮಾಡಿದ 4 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪತ್ರಕರ್ತ ಜಯಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ನೇಕಾರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಟಿ. ನಟರಾಜ್ ಸ್ವಾಗತಿಸಿದರು. ಎ.ಟಿ. ತಿಪ್ಪೇಸ್ವಾಮಿ ನಿರೂಪಿಸಿದರು.
ಟಿವಿ ಮತ್ತು ಮೊಬೈಲ್ ಬಿಟ್ಟು ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದುವುದರಿಂದ ಸ್ಪರ್ಧಾ ಮನೋಭಾವ ಬೆಳೆದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುತ್ತದೆ ಪೋಷಕರು ಕೂಡ ಟಿವಿ ನೋಡುವುದನ್ನು ಕಡಿಮೆ ಮಾಡಿ ಮಕ್ಕಳಿಗೆ ಓದಲು ಉತ್ತಮ ವಾತಾವರಣವನ್ನು ಒದಗಿಸಬೇಕು.
• ಡಿ. ಷಡಕ್ಷರಪ್ಪ,
ರಾಜ್ಯ ಪಟ್ಟಸಾಲೆ ಸಮಾಜದ ಗೌರವಾಧ್ಯಕ್ಷರು.