ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ನಿರೀಕ್ಷೆ
Team Udayavani, Feb 15, 2018, 5:02 PM IST
ಕೋಲಾರ: ಕಳೆದ ವರ್ಷ ರಾಜ್ಯ ಸರಕಾರ ಮಂಡಿಸಿದ್ದ ಬಜೆಟ್ನಲ್ಲಿ ಬಹು ನಿರೀಕ್ಷಿತ ಯೋಜನೆಗಳಿಲ್ಲದೇ ಜಿಲ್ಲೆಗೆ ನಿರಾಸೆಯಾಗಿತ್ತು. ಆದರೂ, ಬಜೆಟ್ನಲ್ಲಿ ಪ್ರಕಟಿಸಿದ್ದ ಕೆಲವು ಯೋಜನೆಗಳು ಕಾರ್ಯಗತ ವಾಗುವ ಮೂಲಕ ನುಡಿದಂತೆ ನಡೆದ ಸರಕಾರ ಎನ್ನುವ ಕಾರಣಕ್ಕೆ ಜಿಲ್ಲೆಯ ಜನತೆಯ ಪಾಲಿಗೆ ನೆಮ್ಮದಿ ಮೂಡಿಸಿದೆ.
ಮಾ.1ಕ್ಕೆ ಕೆ.ಸಿ.ವ್ಯಾಲಿ ಉದ್ಘಾಟನೆ: ರಾಜ್ಯ ಬಜೆಟ್ ಎಂದರೆ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ನಿರೀಕ್ಷೆ ಶಾಶ್ವತ ನೀರಾವರಿ ಸೌಲಭ್ಯಗಳು ಮಾತ್ರವೇ ಆಗಿದೆ. ಕಳೆದ ಬಜೆಟ್ನಲ್ಲಿ ರಾಜ್ಯ ಸರಕಾರ ಕೆ.ಸಿ.ವ್ಯಾಲಿ ಹಾಗೂ ಎತ್ತಿನ ಹೊಳೆ ಯೋಜನೆಗಳ ಮೂಲಕ
ಕೋಲಾರ ಜಿಲ್ಲೆಗೆ ನೀರು ಹರಿಸಲಾಗುತ್ತದೆ ಎಂದು ಘೋಷಿಸಿತ್ತು. ಕೆ.ಸಿ. ವ್ಯಾಲಿ ಯೋಜನೆ ಪ್ರಗತಿಯ ಲ್ಲಿದ್ದು, ಮಾರ್ಚ್ 1 ಕ್ಕೆ
ಉದ್ಘಾಟನೆಯಾಗಲಿದೆ ಎಂದು ಉಸ್ತುವಾರಿ ಸಚಿವ ರಮೇಶ್ಕುಮಾರ್ ಘೋಷಿಸಿದ್ದಾರೆ.
ಉಳಿದಂತೆ ಎತ್ತಿನಹೊಳೆ ಯೋಜನೆಯಲ್ಲಿ ಐತ ಗುಂಡ್ಲು ಜಲಾಶಯ ಹಾಗೂ ಏತ ವಿನ್ಯಾಸಗಳ ಕಾಮಗಾರಿ ಪ್ರಗತಿಯಲ್ಲಿದೆಯೆಂದು ಘೋಷಿಸಿತ್ತು. ಬಹುಶಃ ಈ ಬಾರಿಯ ಬಜೆಟ್ನಲ್ಲಿಯೂ ಇದೇ ಮಾತುಗಳು ಪುನರುಚ್ಛಾರಗೊಂಡರೂ ಅಚ್ಚರಿಪಡ ಬೇಕಾಗಿಲ್ಲ. ಕೆ.ಸಿ.ವ್ಯಾಲಿ ಯೋಜನೆಯಲ್ಲಿ ಮಾತು ಉಳಿಸಿಕೊಳ್ಳುವತ್ತ ಸಾಗಿರುವ ಸರಕಾರ, ಎತ್ತಿನಹೊಳೆ ವಿಚಾರದಲ್ಲಿ ಮಾತು ಉಳಿಸಿಕೊಳ್ಳಲು ವಿಫಲವಾಗಿದೆ.
ಕೆಜಿಎಫ್ ತಾಲೂಕು: ಕೋಲಾರ ಜಿಲ್ಲೆಯ ಆರನೇ ತಾಲೂಕಾಗಿ ಕೆಜಿಎಫ್ ಅನ್ನು ಮಾರ್ಪಡಿಸಲಾಗುವುದು ಎಂದು ಸರಕಾರ ಬಜೆಟ್ನಲ್ಲಿ ಘೋಷಿಸಿತ್ತು. ಈ ಗಣರಾಜ್ಯೋತ್ಸವದ ದಿನ ಕೆಜಿಎಫ್ ಅಧಿಕೃತವಾಗಿ ತಾಲೂಕಾಗಿ ಕಾರ್ಯಾರಂಭ ಮಾಡಿದೆ. ಹೊಸ ತಾಲೂಕಿಗೆ ಮೂಲಭೂತ ಸೌಕರ್ಯಗಳ ಹಾಗೂ ವಿವಿಧ ಇಲಾಖೆಗಳಿಗೆ ಕಟ್ಟಡಗಳ ಕೊರತೆ ಸಹಜವಾಗಿಯೇ ಕಾಡುತ್ತಿದೆ.
ರಕ್ತವಿದಳನ ಘಟಕ: ಕಳೆದ ಬಜೆಟ್ನಲ್ಲಿ ಸರಕಾರ ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಗೆ 6 ಕೋಟಿ ರೂ. ವೆಚ್ಚದಲ್ಲಿ ರಕ್ತವಿದಳನ ಘಟಕವನ್ನು ಮಂಜೂರು ಮಾಡಿತ್ತು. ಆದರೆ, ಸರಕಾರ ಈ ಘಟಕವನ್ನು ಬಜೆಟ್ನಲ್ಲಿ ಮಂಜೂರು ಮಾಡುವುದರೊಳಗಾಗಿ ಹೊಂಡಾ ಕಂಪನಿ ತನ್ನ ಸಮುದಾಯ ಅಭಿವೃದ್ಧಿ ನಿಧಿಯಡಿ ಎಸ್ಎನ್ಆರ್ ಆಸ್ಪತ್ರೆಗೆ ರಕ್ತವಿದಳನ ಘಟಕದ ಯಂತ್ರೋಪಕರಣಗಳನ್ನು ಮಂಜೂರು ಮಾಡಿತ್ತು. ಆದರೆ, ಇದರ ಕಾರ್ಯಾರಂಭಕ್ಕೆ ತಾಂತ್ರಿಕವಾಗಿ ಸರಕಾರ ಇನ್ನೂ ಪರವಾನಗಿ ನೀಡದ ಕಾರಣ ರಕ್ತವಿದಳನ ಘಟಕ ವಿದ್ಯುಕ್ತವಾಗಿ ಆರಂಭವಾಗಿಲ್ಲ.
ನೀಲಗಿರಿ ನಿರ್ಮೂಲನೆಯಾಗಿಲ್ಲ: ಕೋಲಾರ ಜಿಲ್ಲೆಯ ಪರಿಸರಕ್ಕೆ ಮಾರಕವಾಗಿರುವ, ಅಂತರ್ಜಲ ಹಾಗೂ ವಾತಾವರಣದ ತೇವಾಂಶವನ್ನು ಹೀರುತ್ತದೆ ಎಂದು ಹೇಳಲಾಗುವ ನೀಲಗಿರಿ ನಿರ್ಮೂಲನೆಗೆ ಸರಕಾರ ಬಜೆಟ್ನಲ್ಲಿ ಘೋಷಿಸಿತ್ತು. 6 ಲಕ್ಷ ಶ್ರೀಗಂಧ
ಸಸಿಗಳನ್ನು 700 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಸುವ ಪ್ರಸ್ತಾಪನೆ ಅನುಷ್ಠಾನವಾಗದೇ ನೆನೆಗುದಿಗೆ ಬೀಳುವಂತಾಗಿದೆ.
ಕೆ.ಸಿ.ರೆಡ್ಡಿ ಸ್ಮಾರಕ: ಕೋಲಾರ ಜಿಲ್ಲೆಯ ಹಿರಿಯ ರಾಜಕಾರಣಿ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಸ್ಮಾರಕ ನಿರ್ಮಿಸಲು 2 ಕೋಟಿ ರೂ. ಅನ್ನು ಬಜೆಟ್ನಲ್ಲಿ ಘೋಷಿಸಲಾಗಿತ್ತು. ಆದರೆ, ಇದು ಪೂರ್ಣ ಅನುಷ್ಠಾನವಾಗಲಿಲ್ಲವಾದರೂ, ಈ
ಕುರಿತು ಪೂರ್ವಭಾವಿ ಸಿದ್ಧತೆಗಳು ಸರಕಾರದ ಹಂತದಲ್ಲಿ ನಡೆಯುತ್ತಿರುವುದು ಸಮಾಧಾನಕರ ಸಂಗತಿ ಎನ್ನಬಹುದು.
ಮೋಡ ಬಿತ್ತನೆ: ಮೋಡ ಬಿತ್ತನೆಯಿಂದ ಕೋಲಾರದಂತಹ ಬರಪೀಡಿತ ಜಿಲ್ಲೆಗಳಲ್ಲಿ ಮಳೆ ಸುರಿಸಲು 30 ಕೋಟಿ ರೂ. ವೆಚ್ಚ ಮಾಡುವುದಾಗಿ ಸರಕಾರ ಬಜೆಟ್ ನಲ್ಲಿ ಪ್ರಕಟಿಸಿತ್ತು. ಸರಕಾರ ಮೋಡ ಬಿತ್ತನೆಯನ್ನು ಕೈಗೆತ್ತಿಕೊಂಡಿತ್ತು. ಆದರೆ, ಮೋಡ ಬಿತ್ತನೆಯ
ಪರಿಣಾಮಕ್ಕಿಂತ ಈ ಬಾರಿ ಭರ್ಜರಿ ಮಳೆ ಸುರಿಯುವ ಮೂಲಕ ಕೋಲಾರ ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ನೀರು ಕಾಣುವಂತಾಯಿತು. ಕೆರೆ ಸಂಜೀವಿನಿ: ರಾಜ್ಯದಲ್ಲಿ ಕೆರೆ ಸಂಜೀವಿನಿ ಯೋಜನೆಯಡಿ 100 ಕೆರೆಗಳನ್ನು ಸಮಗ್ರವಾಗಿ
ಅಭಿವೃದ್ಧಿಪಡಿಸುವುದಾಗಿ ಸರಕಾರ ಬಜೆಟ್ನಲ್ಲಿ ಘೋಷಿಸಿತ್ತು. ಆದರೆ, ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಸುವ ವಿಚಾರದಲ್ಲಿ ಕೆರೆಗಳ ಜಿಲ್ಲೆ ಕೋಲಾರದಲ್ಲಿ ಅಂತಹ ಅಭಿವೃದ್ಧಿಯನ್ನು ಕಾಣಲಾಗಲಿಲ್ಲ.
ಚಾಕಿ ಪ್ರಾಧಿಕಾರ: ಕೋಲಾರ ಜಿಲ್ಲೆ ರೇಷ್ಮೆ ಕೃಷಿಯ ಮೇಲೆ ಹೆಚ್ಚು ಅವಲಂಬಿಸಿದ್ದು, ಚಾಕಿ ಪ್ರಾಧಿಕಾರ ಆರಂಭಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ, ಪ್ರಾಧಿಕಾರ ಎಲ್ಲಿ ಪ್ರಾರಂಭವಾಯಿತು ಎನ್ನುವ ಕುರಿತು ಮಾಹಿತಿ ಸಿಗಲಿಲ್ಲ. ಮಾವು ತೋಟಗಳ
ಪುನಃಶ್ಚೇತನ, ಹನಿ, ತುಂತುರು ನೀರಾವರಿ, ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ, ತೋಟಗಾರಿಕೆ, ಕೃಷಿ ಭಾಗ್ಯ, ಡಿಸಿಸಿ ಬ್ಯಾಂಕ್ ಮೂಲಕ ಶೂನ್ಯ ಬಡ್ಡಿ ಸಾಲ ಕೋಲಾರ ಜಿಲ್ಲೆಯ ರೈತಾಪಿ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ತಲುಪುವಂತಾಗಿದೆ
ಬಜೆಟ್ನ ಪ್ರಮುಖ ನಿರೀಕ್ಷೆಗಳು ಕೋಲಾರ ಜಿಲ್ಲೆಯ ಈ ಬಾರಿಯ ಬಜೆಟ್ ನಿರೀಕ್ಷೆಗಳು ಕೆ.ಸಿ.ವ್ಯಾಲಿ ಯೋಜನೆ ಕಾಮಗಾರಿ
ಚುರುಕುಗೊಳ್ಳಬೇಕು. ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಬೇಕು. ಕೇಂದ್ರ ಪ್ರಕಟಿಸಿರುವ ವಿವಿಧ ರೈಲ್ವೆ ಯೋಜನೆಗಳಿಗೆ ಭೂಮಿ ನೀಡಬೇಕು. ರಾಜ್ಯ ಸರಕಾರದ ಅನುದಾನವನ್ನು ಘೋಷಿಸಬೇಕು. ಶಾಶ್ವತ ಬರಪೀಡಿತ ಕೋಲಾರ ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ ಕೃಷಿ, ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆ ವಿಚಾರದಲ್ಲಿ ವಿಶೇಷ ರಿಯಾಯಿತಿ ಯೋಜನೆಗಳ
ಪ್ಯಾಕೇಜ್ ಘೋಷಿಸಬೇಕು. ನೂತನ ತಾಲೂಕಾಗಿರುವ ಕೆಜಿಎಫ್ನಲ್ಲಿ ಚಿನ್ನದ ಗಣಿ ಕಾರ್ಮಿಕರ ಕುಟುಂಬಗಳಿಗೆ ಕೈತುಂಬ ಕೆಲಸ ಸಿಗುವಂತೆ ಮಾಡಬೇಕು. ಚಿನ್ನದ ಗಣಿ ಪುನಾರಂಭಿಸಲು ರಾಜ್ಯ ಸರಕಾರ ಪ್ರಯತ್ನಿಸಬೇಕು. ಗಣಿಯ ಸಹಸ್ರಾರು ಹೆಕ್ಟೇರ್ ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರು ಹರಿಸಲು ವಿಶೇಷ ಯೋಜನೆಗಳನ್ನು ಘೋಷಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕೆಂಬುದು ಜಿಲ್ಲೆಯ ರೈತರು ಹಾಗೂ ನಾಗರಿಕರ ಆದ್ಯತೆಯ ಬೇಡಿಕೆಗಳಾಗಿವೆ.
25 ಕೋಟಿ ರೂ.ವೆಚ್ಚದಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೋಲಾರ ಜಿಲ್ಲೆಗೆ 2016 ನೇ ಬಜೆಟ್ನಲ್ಲಿ ಸರಕಾರ ವೈದ್ಯಕೀಯ ಕಾಲೇಜನ್ನು ಘೋಷಿಸಿತ್ತು. 2017 ರ ಬಜೆಟ್ನಲ್ಲಿ ಇದನ್ನು ಮರೆಸುವಂತೆ 25 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡಿತು. ವೈದ್ಯಕೀ ಯ ಕಾಲೇಜಿನಂತಲ್ಲದಿದ್ದರೂ, ಸೂಪರ್ ಸ್ಪೆಷಾ ಲಿಟಿ ಆಸ್ಪತ್ರೆಗೆ ಶ್ರೀನಿವಾಸಪುರ ಸಮೀಪ ಜಾಗ
ಹುಡುಕಲಾಗಿದೆ. ಆಸ್ಪತ್ರೆ ಕಾಮಗಾರಿಗೆ ಚಾಲನೆ ನೀಡಿರುವುದು ಸದ್ಯದ ಸ್ಥಿತಿಯಾಗಿದೆ.
ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು