ಜಿಲ್ಲಾ ಶಾಸಕರಲ್ಲೂ ಅಧಿಕಾರ ಕಳೆದುಕೊಳ್ಳುವ ಆತಂಕ
ಮೈತ್ರಿ ಸರ್ಕಾರ ಅಳಿವು ಉಳಿವು ನಿರ್ಧಾರ ಇಂದು • ಅಧಿಕಾರ ಖಚಿತಪಡಿಸಿಕೊಂಡಿರುವ ನಾಗೇಶ್
Team Udayavani, Jul 22, 2019, 12:34 PM IST
ಕೋಲಾರ: ಹದಿನೈದು ದಿನಗಳಿಂದಲೂ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ನಾಟಕೀಯ ರೋಚಕ ತಿರುವುಗಳ ಘಟನಾವಳಿಗಳಿಂದ ಮೈತ್ರಿ ಸರ್ಕಾರ ಅಸ್ತಿತ್ವ ಕಳೆದುಕೊಳ್ಳುವ ಕ್ಷಣಗಣನೆ ಆರಂಭವಾಗಿದ್ದು, ಜಿಲ್ಲೆಯ ಶಾಸಕರ ವಲಯದಲ್ಲಿ ಅಧಿಕಾರ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಸೋಮವಾರ ಮೈತ್ರಿ ಸರ್ಕಾರ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆಗಳಿದ್ದು, ಬಿಜೆಪಿ ಅಧಿಕಾರ ಹತ್ತಿರವಾಗುತ್ತಿದೆಯೆಂಬ ಭಾವನೆ ಹುಟ್ಟಿದೆ.
ಪಕ್ಷೇತರ ಶಾಸಕ: ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬರಲು ಸಜ್ಜಾಗುತ್ತಿರುವ ಮೈತ್ರಿ ಸರ್ಕಾರದಲ್ಲಿ ಅಧಿಕಾರ ಹಿಡಿಯುವ ಜಾಗವನ್ನು ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್ ಭದ್ರಪಡಿಸಿಕೊಂಡಿದ್ದಾರೆ. ಅಧಿಕಾರಕ್ಕಾಗಿ ಯಾರಿಗೆ ಬೇಕಾದರೂ ಬೆಂಬಲ ಕೊಡಲು ಸಿದ್ಧ ಎಂಬ ವರ್ತನೆ ತೋರಿಸುತ್ತಿರುವ ಎಚ್.ನಾಗೇಶ್ ಈಗಾಗಲೇ ಎರಡೆರೆಡು ಸುತ್ತು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಎಂಬಂತೆ ಸುತ್ತಾಡಿದ್ದಾರೆ. ಮ್ಯೂಸಿಕಲ್ ಕುರ್ಚಿಯಂತಾಗಿರುವ ಅಧಿಕಾರದ ಕುರ್ಚಿ ಹಿಡಿಯುವ ಪ್ರಯತ್ನದಲ್ಲಿ ಎಚ್.ನಾಗೇಶ್ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದುಕೊಂಡು ಬಿಜೆಪಿಗೆ ಘೋಷಿಸಿದ್ದಾರೆ. ಹೊಸ ಸರ್ಕಾರದಲ್ಲಿ ತಮಗೆ ಅಧಿಕಾರದ ಕುರ್ಚಿ ಖಚಿತ ಎನ್ನುವ ವಿಶ್ವಾಸದಲ್ಲಿ ಮೈತ್ರಿ ಸರ್ಕಾರ ವಿಶ್ವಾಸ ಕಳೆದುಕೊಳ್ಳುವ ಮುಹೂರ್ತಕ್ಕೆ ಕಾಯುತ್ತಿದ್ದಾರೆ.
ಜೆಡಿಎಸ್ ಶಾಸಕ: ಮೈತ್ರಿ ಸರ್ಕಾರ ತಮಗೆ ಮಂತ್ರಿಗಿರಿ ನೀಡಲಿಲ್ಲವೆಂದು ಜಿಲ್ಲೆಯ ಏಕೈಕ ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ ಪಕ್ಷದ ವರಿಷ್ಠರ ವಿರುದ್ಧ ಮುನಿಸಿಕೊಂಡಿದ್ದರು. ಇವರ ಈ ಮನಸ್ಥಿತಿಯನ್ನು ಗಮನಿಸಿದ್ದ ಬಿಜೆಪಿ ಮುಖಂಡರು ಇವರನ್ನು ತಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಹಲವಾರು ಕಾರಣಗಳಿಂದಾಗಿ ಕೆ.ಶ್ರೀನಿವಾಸಗೌಡರ ಬಿಜೆಪಿ ಸೇರ್ಪಡೆ ಕುದುರಿರಲಿಲ್ಲ. ಬಿಜೆಪಿ ತಮಗೆ ಅಹ್ವಾನ ನೀಡಿತ್ತು ಎನ್ನುವುದನ್ನೇ ವಿವಾದಾತ್ಮಕ ಹೇಳಿಕೆ ನೀಡಿ ಎಸಿಬಿ ಕೇಸನ್ನು ಎದುರಿಸಿದ್ದರು. ಆದರೆ, ಆನಂತರ ತಾವು ನೀಡಿದ ಹೇಳಿಕೆಯನ್ನು ಎಸಿಬಿ ಮುಂದೆ ನಿರಾಕರಿಸಿ ಕೇಸಿನಿಂದ ಬಚಾವ್ ಆಗಿದ್ದರು.
ಇದೀಗ ಮತ್ತೇ ಅಧಿವೇಶನದಲ್ಲಿ ಪುನರುಚ್ಚರಿಸುವ ಮೂಲಕ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರ ಈ ವರ್ತನೆ ಜಿಲ್ಲೆಯಲ್ಲಿ ಪರ ವಿರುದ್ಧ ಟೀಕಾರೋಪಗಳಿಗೂ ಕಾರಣವಾಗಿದೆ. ಆದರೂ, ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.
ಬಿಜೆಪಿ ಈ ಹೇಳಿಕೆ ಬಗ್ಗೆ ಹಕ್ಕು ಚ್ಯುತಿ ಮಂಡಿಸಿದರೆ ಎದುರಿಸಲು ಸಿದ್ಧ ಎಂಬ ಸಂದೇಶವನ್ನು ಸಾರಿದ್ದಾರೆ. ಇಷ್ಟೆಲ್ಲಾ ಆದರೂ, ಮೈತ್ರಿ ಸರ್ಕಾರದಲ್ಲಿ ತಮಗೆ ಅಧಿಕಾರ ಸಿಗಲಿಲ್ಲ ಎಂದು ಅಲವತ್ತುಕೊಳ್ಳುತ್ತಿದ್ದ ಕೆ.ಶ್ರೀನಿವಾಸಗೌಡರಿಗೆ ಮೈತ್ರಿ ಸರ್ಕಾರ ಉರುಳುತ್ತಿರುವುದು ಒಂದು ರೀತಿಯ ನೆಮ್ಮದಿಗೆ ಕಾರಣವಾಗಿದೆ.
ಕಾಂಗ್ರೆಸ್ ಶಾಸಕರು: ಕೋಲಾರ ಜಿಲ್ಲೆಯಲ್ಲಿರುವ ನಾಲ್ಕು ಮಂದಿ ಶಾಸಕರಿಗೆ ಮೈತ್ರಿ ಸರ್ಕಾರ ಒಂದಲ್ಲಾ ಒಂದು ರೀತಿಯಲ್ಲಿ ಅಧಿಕಾರದ ರುಚಿ ತೋರಿಸಿತ್ತು. ರಮೇಶ್ಕುಮಾರ್ ಸ್ಪೀಕರ್, ಎಸ್.ಎನ್.ನಾರಾಯಣಸ್ವಾಮಿ ಕೆಲವು ತಿಂಗಳುಗಳ ಹಿಂದೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ, ಮಾಲೂರು ಶಾಸಕ ಕೆ.ವೈ.ನಂಜೇಗೌಡ ಕೋಚಿಮುಲ್ ಅಧ್ಯಕ್ಷ ಹಾಗೂ ಕೆಜಿಎಫ್ ಶಾಸಕ ರೂಪಕಲಾ ಸಂಸದೀಯ ಕಾರ್ಯದರ್ಶಿ ಸ್ಥಾನಮಾನ ದೊರೆತಿತ್ತು.
ಇದೀಗ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಂಡರೆ ಸಹಕಾರಿ ಸಂಸ್ಥೆ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡರನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಕಾಂಗ್ರೆಸ್ ಶಾಸಕರು ಅಧಿಕಾರ ಕಳೆದುಕೊಳ್ಳುವುದು ಖಚಿತವಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ 28 ವರ್ಷಗಳಿಂದಲೂ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪರನ್ನು ಸೋಲಿಸಿ ಅವರಿಗೆ ಅಧಿಕಾರ ತಪ್ಪಿಸಲು ಒಗ್ಗೂಡಿದ್ದ ಜೆಡಿಎಸ್- ಕಾಂಗ್ರೆಸ್ ಶಾಸಕರು ಇದೀಗ ಮೈತ್ರಿ ಸರ್ಕಾರದ ಅಸ್ಥಿರತೆಯಿಂದ ತಾವೇ ಅಧಿಕಾರ ಕಳೆದುಕೊಳ್ಳುವ ಆತಂಕ ಎದುರಿಸುತ್ತಿರುವುದು ರಾಜಕೀಯ ಚದುರಂಗದಾಟಕ್ಕೆ ಸಾಕ್ಷಿಯಾಗಿದೆ.
● ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್