ನೀರಿನ ಸೌಲಭ್ಯವಿದ್ರೆ ಉದ್ಯಮ ಆರಂಭಕ್ಕೆ ಸಹಕಾರಿ
Team Udayavani, Sep 21, 2019, 12:10 PM IST
ಕೋಲಾರ: ಜಿಲ್ಲೆಯನ್ನು ಕಾಡುತ್ತಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡರೆ ಬೃಹತ್ ಉದ್ಯಮಗಳನ್ನು ಇಲ್ಲಿಗೆ ತರಲು ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಕೆ.ಸಿ.ವ್ಯಾಲಿ ಹಾಗೂ ಎತ್ತಿನಹೊಳೆ ಯೋಜನೆಗಳ ಸಮಗ್ರ ಜಾರಿಗೆ ಪಣತೊಟ್ಟಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.
ನಗರದಲ್ಲಿ ತಮ್ಮ ಅಭಿಮಾನಿಗಳ ಒಕ್ಕೂಟದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೆ.ಸಿ. ವ್ಯಾಲಿ ಯೋಜನೆಯಡಿ ಈಗಾಗಲೇ 30 ಕೆರೆಗಳು ಮಾತ್ರ ತುಂಬಿವೆ. ಯೋಜನೆಯಡಿ ಹರಿಯುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಕೆರೆಗಳು ತುಂಬಲು ಕಾಲಾವಕಾಶ ಹೆಚ್ಚಾಗಿ ಪಡೆದುಕೊಳ್ಳುತ್ತಿದೆ. ಹೀಗಾಗಿ ನೀರಿನ ಪ್ರಮಾಣವನ್ನು 400 ಎಂಎಲ್ಡಿಗೆ ಹೆಚ್ಚಿಸಲು ಹಾಗೂ ಎತ್ತಿನ ಹೊಳೆ ಯೋಜನೆಯಡಿ ಒಂದೂವರೆ ವರ್ಷದಲ್ಲಿ ಈ ಭಾಗಕ್ಕೆನೀರು ಹರಿಸಲು ಸಂಸದರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ವರ್ಷದ 365 ದಿನವೂ ಕೆರೆಗಳಿಗೆ ನೀರು ಹರಿಯಬೇಕಿದ್ದು, ಅದು ಸಾಧ್ಯವಾದರೆ ಮಾತ್ರವೇ ಜಿಲ್ಲೆಯು ಎಲ್ಲ ರೀತಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಉದ್ಯೋಗಾವಕಾಶ: ಮುಳಬಾಗಿಲು ತಾಲೂಕಿನಲ್ಲಿ ಇತ್ತೀಚೆಗೆ ನಡೆಸಿದ್ದ ಮಿನಿ ಉದ್ಯೋಗ ಮೇಳದಲ್ಲಿ 900 ಮಂದಿಗೆ ಸ್ಥಳದಲ್ಲೇ ಉದ್ಯೋಗವಕಾಶ ಸಿಕ್ಕಿತ್ತು. ಇದೇ ಮಾದರಿಯಲ್ಲಿ ಕೋಲಾರದಲ್ಲಿ ಉದ್ಯೋಗ ಮೇಳವನ್ನು ಸದ್ಯದಲ್ಲೇ ನಡೆಸಿ 4-5 ಸಾವಿರ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದರು.
ಮನೆ ಮನೆ ನೀರು: ಎತ್ತಿನಹೊಳೆ ಯೋಜನೆಯಡಿ ನೀರು ಬಂದ ಬಳಿಕ ಸಮಸ್ಯೆ ಬಹುತೇಕ ಬಗೆಹರಿಯಲಿದೆ. ಮನೆ ಮನೆಗೆ ನಲ್ಲಿ ಮೂಲಕ ನೀರನ್ನು ನೀಡಬೇಕು ಎನ್ನುವ ಆಸೆ ನನ್ನದಾಗಿದ್ದು, ಆನಂತರ ಟ್ಯಾಂಕರ್ಗಳ ಹಾವಳಿಯೂ ತಪ್ಪಲಿದೆ ಎಂದು ತಿಳಿಸಿದರು.
ಎಲ್ಲಾ ತಾಲೂಕುಗಳ ಸಂಪರ್ಕ: ಕೋಲಾರವು ಬೆಂಗಳೂರಿನಿಂದ 65 ಕಿ.ಮೀ. ದೂರದಲ್ಲಿದ್ದರೂ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದೆ ಉಳಿದಿದೆ. ಹೀಗಾಗಿ ನಗರವನ್ನು ಅಭಿವೃದ್ಧಿಪಡಿಸಲು ಯೋಜನೆ ಗಳನ್ನು ರೂಪಿಸಲಾಗುವುದು. ರಸ್ತೆಗಳನ್ನು ಸರಿಪಡಿಸುವುದು, ರಿಂಗ್ ರಸ್ತೆ ನಿರ್ಮಿಸಿ ಎಲ್ಲಾ ತಾಲೂಕುಗಳ ಸಂಪರ್ಕಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ನೆರವು ಬಂದೇ ಬರುತ್ತೆ: ರಾಜ್ಯದ ಸಿಎಂ ಬಿ.ಎಸ್.ಯಡಿಯೂರಪ್ಪ ಬಹಳ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ.ಕಾರಣಾಂತರಗಳಿಂದ ಪ್ರವಾಹ ಪೀಡಿತರಿಗೆ ನೆರವು ವಿಳಂಬವಾಗಿರಬಹುದು. ಆದರೆ, ಅದು ಬಂದೇ ಬರುತ್ತದೆ. ಪ್ರಧಾನಿಅವರನ್ನು ಭೇಟಿಯಾಗಲು ಮತ್ತೆ ಸಿಎಂ ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಿದರು.
ಹಿಂದಿನ ಮೈತ್ರಿ ಸರ್ಕಾರದಲ್ಲಿ ಜಿಲ್ಲೆಗೆ ಬಿಡುಗಡೆಯಾಗಿದ್ದ ಅನುದಾನವನ್ನು ಹೊಸ ಸರ್ಕಾರ ಬಂದ ಬಳಿಕ ತಡೆಯಲಾಗಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಶೀಘ್ರವೇ ಮುಖ್ಯಮಂತ್ರಿ ಬಳಿ ಚರ್ಚಿಸಿ ಜಿಲ್ಲೆಗೆ ಅನ್ಯಾಯವಾಗದಂತೆ ಕ್ರಮವಹಿಸಲಾಗುವುದು ಎಂದರು.
ಇತ್ತೀಚೆಗೆ ಜಿಲ್ಲೆಯಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿ ಕೊಂಡಿರುವುದು ಬೇಸರದ ಸಂಗತಿ. ಅವರ ಸಾಲವೂ ಹೆಚ್ಚಿನ ಪ್ರಮಾಣದ್ದಲ್ಲ. ತಾವೂ ತಮ್ಮ ಕ್ಷೇತ್ರದ ರೈತನ ಮನೆಗೆ ಭೇಟಿ ನೀಡಿ ಸ್ಥಳದಲ್ಲೇ 2 ಲಕ್ಷ ರೂ. ಪರಿಹಾರ, ಆತನ ಮಗನಿಗೆ ಉದ್ಯೋಗವಕಾಶ ಕಲ್ಪಿಸಿಕೊಟ್ಟಿದ್ದೇವೆ ಎಂದರು. ಡೀಸಿ ಜೆ.ಮಂಜುನಾಥ್, ಉಪ ವಿಭಾಗಾಧಿಕಾರಿ ಸೋಮಶೇಖರ್, ಅಬಕಾರಿ ಉಪ ಆಯುಕ್ತೆ ಕೆ.ಕೆ.ಸುಮಿತ್ರಾ, ತಹಶೀಲ್ದಾರ್ ನಾಗವೇಣಿ, ಅಪ್ಪಿ ನಾರಾಯಣ ಸ್ವಾಮಿ, ನಾಗೇಶ್ ಅಭಿಮಾನಿಗಳಾದ ಕದಸಂಸವಿಜಯಕುಮರ್, ವಿನೋದ್, ಮುನಿಆಂಜಿ, ರಾಜಪ್ಪ, ಇದ್ದರು.