ಜೆಡಿಎಸ್ ವರಿಷ್ಠರಿಂದ ರಾಜ್ಯಕ್ಕೆ ಸಂದೇಶ
Team Udayavani, Jun 24, 2020, 6:59 AM IST
ಕೋಲಾರ: ವಿಧಾನ ಪರಿಷತ್ ಸದಸ್ಯರಾಗಿ ತಮಗೆ ಅವಕಾಶ ಕಲ್ಪಿಸುವ ಮೂಲಕ ಪಕ್ಷನಿಷ್ಠೆ ಇರುವ ಸಾಮಾನ್ಯ ಕಾರ್ಯಕರ್ತರಿಗೂ ಅಧಿಕಾರ ಸಿಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಪಕ್ಷದ ವರಿಷ್ಠರೂ ರಾಜ್ಯಕ್ಕೆ ನೀಡಿದ್ದಾರೆ ಎಂದು ಪರಿಷತ್ ನೂತನ ಸದಸ್ಯ ಇಂಚರ ಗೋವಿಂದರಾಜು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ನಂತರ ಮಂಗಳವಾರ ಬೆಳಗ್ಗೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರ ನೂರಾರು ಅಭಿಮಾನಿಗಳು ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯದ ಸಮೀಪ ನೀಡಿದ ಸ್ವಾಗತ ಸ್ವೀಕರಿಸಿ ಅವರು ಮಾತನಾಡಿದರು. ಪಕ್ಷನಿಷ್ಠೆ ನನಗೆ ಅವಕಾಶ ಸಿಗಲು ಕಾರಣರಾದ ಮಾಜಿ ಪ್ರಧಾನಿ ದೇವೇಗೌಡ, ಎಲ್ಲಾ ಜೆಡಿಎಸ್ನ ಶಾಸಕರು, ಕಾರ್ಯಕರ್ತರು, ಮುಖಂಡರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಕೊಂಡರಾಜನಹಳ್ಳಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ದರ್ಗಾ, ಚರ್ಚ್ನಲ್ಲಿಯೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ವೇಳೆ ಶಾಸಕ ಕೆ.ಶ್ರೀನಿವಾಸಗೌಡ, ಎಂಎಲ್ಸಿ ತೂಪಲ್ಲಿ ಚೌಡರೆಡ್ಡಿ, ಮುಖಂಡರಾದ ಶಂಕರೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ವಕ್ಕಲೇರಿ ರಾಮು, ಎಪಿಎಂಸಿ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷರಾದ ವಡಗೂರು ನಾಗರಾಜ್,
ವೆಂಕಟೇಶ್, ವಿಟ್ಟಪ್ಪನಹಳ್ಳಿ ಮುನಿರಾಜ್, ಜೆಡಿಎಸ್ ತಾಲೂಕು ಅಧ್ಯಕ್ಷ ಬಾಬುಮೌನಿ, ಬಣಕನಹಳ್ಳಿ ನಟರಾಜ್, ಸಿಎಂಆರ್ ಹರೀಶ್, ಮುದುವಾಡಿ ಶ್ರೀನಿವಾಸ್, ಆಡಿಟರ್ ದೇವರಾಜ್, ಸೊಣ್ಣೇಗೌಡ, ಮಂಗಮ್ಮ ಮುನಿಸ್ವಾಮಿ, ಮಂಜುನಾಥ್, ದ್ಯಾವರಪ್ಪ, ಸುಬ್ರಮಣಿಗೌಡ, ಲಕ್ಷ್ಮೀನಾರಾಯಣ ಇದ್ದರು.