ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ದೂರು ಪುಸ್ತಕ ಇಡಲು ಸಚಿವರ ಸೂಚನೆ
Team Udayavani, Jul 31, 2022, 8:03 PM IST
ಕೋಲಾರ: ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿಯೂ ದೂರು ಪುಸ್ತಕ ಇಟ್ಟು, ರೋಗಿಗಳಿಂದ ಅಭಿಪ್ರಾಯ ಮತ್ತು ಸಲಹೆ ಸೂಚನೆ ಪಡೆಯುವ ಕ್ರಮ ಜಾರಿಗೆ ತರುವುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನಗರದ ಎಸ್ಎನ್ಆರ್ ಆಸ್ಪತ್ರೆಗೆ ಭಾನುವಾರ ದಿಢೀರ್ ಭೇಟಿ ನೀಡಿ ಚಿಕಿತ್ಸೆಯ ಬಗ್ಗೆ ರೋಗಿಗಳಿಂದ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಗಳಲ್ಲಿ ಅಗತ್ಯವಾದ ಎಲ್ಲ ಸೌಲಭ್ಯ ಗಳನ್ನು ಒದಗಿಸಲಾಗಿದ್ದು, ಹೊರಗೆ ಪರೀಕ್ಷೆಗೆ ಬರೆದುಕೊಟ್ಟಿರುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವುದಾಗಿ ಸಚಿವರು ಹೇಳಿದರು.
ಆಸ್ಪತ್ರೆಯ ಪ್ರಯೋಗಾಲಯಗಳು ಸೇರಿ ಇತರೆ ಅಗತ್ಯ ಕಡೆಗಳಲ್ಲಿ ರಕ್ಷಣಾ ಸಿಬ್ಬಂದಿ ಕೊರತೆ ಇರುವ ಬಗ್ಗೆ ಮಾಹಿತಿ ಪಡೆದ ಸಚಿವರು, ಕೂಡಲೇ 10 ಮಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುವಂತೆ ಆದೇಶ ನೀಡಿದರು.
ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದಂತೆ ಗರಿಷ್ಠ ಶೇ.15 ಹೆರಿಗೆಗಳು ಮಾತ್ರ ಸಿಜೇರಿಯನ್ ಆಗಬೇಕು. ಆದರೆ ಇಲ್ಲಿ ಶೇ. 40 ಸಿಜೇರಿಯನ್ ಆಗುತ್ತಿರುವ ಬಗ್ಗೆ ಮಾಹಿತಿ ಇದ್ದು, ಇದು ತುಂಬಾ ಹೆಚ್ಚಾಯಿತು. ಹಾಗಾಗಿ ಹೆರಿಗೆ ಮಾಡುವ ವೈದ್ಯರ ವೈಯಕ್ತಿಕ ವಿವರ ದಾಖಲಿಸಬೇಕು, ಅವರ ಅಭಿಪ್ರಾಯ ಸಂಗ್ರಹ ಮಾಡಬೇಕು, ಆ ಮೂಲಕ ಸೇವೆ ಇನ್ನಷ್ಟು ಹತ್ತಿರ ಮಾಡಬೇಕು ಎಂದು ಸಲಹೆ ನೀಡಿದರು.