ಕೊರೊನಾ ಭೀತಿಯಲ್ಲೂ ಜನಜೀವನ ನಿರಾತಂಕ!
Team Udayavani, Mar 15, 2020, 3:00 AM IST
ಕೋಲಾರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಲವು ಕ್ರಮ ತೆಗೆದುಕೊಳ್ಳುವಂತೆ ಆದೇಶ ಹೊರಡಿಸಿದ್ದರೂ ಕೋಲಾರದ ಜನ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನಿರಾಂತಕವಾಗಿದ್ದುದು ಕಂಡಿತು. ಸರಕಾರದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಡಿಡಿಪಿಐ ಪ್ರತ್ಯೇಕ ಸುತ್ತೋಲೆ ಹೊರಡಿಸಿ ಹಲವು ಕ್ರಮ ಕೈಗೊಳ್ಳುವ ಕುರಿತು ಸೂಚಿಸಿದ್ದರು. ಈ ಪೈಕಿ ಶಾಲೆ ಕಾಲೇಜು ಹಂತದಲ್ಲಿ ಕೆಲವಾರು ಕ್ರಮಕೈಗೊಂಡಿದ್ದು ಹೊರತುಪಡಿಸಿದರೆ ಉಳಿದಂತೆ ವ್ಯಾಪಾರ ವಹಿವಾಟು ಜನಜೀವನದ ಮೇಲೆ ಕೊರೊನಾ ಪ್ರಭಾವ ಬೀರಿದ್ದು ಕಂಡು ಬರಲಿಲ್ಲ.
ಶಾಲಾ-ಕಾಲೇಜು ರಜೆ: ಶಾಲಾ-ಕಾಲೇಜು ಹಂತದಲ್ಲಿ ಮುಂದಿನ ಒಂದು ವಾರ ರಜೆ ಘೋಷಿಸಲಾಗಿದೆ. ಆದರೂ ಏಳರಿಂದ ಮೇಲ್ಪಟ್ಟು ಪರೀಕ್ಷೆ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಆರಂಭವಾಗಿರುವ ಐಸಿಎಸ್ಇ ಮತ್ತು ಸಿಬಿಎಸ್ಇ, ದ್ವಿತೀಯ ಪಿಯುಸಿ ಪರೀಕ್ಷೆಗಳು ಸುಗಮವಾಗಿ ಸಾಗುತ್ತಿದೆ. ಸೋಮವಾರದಿಂದ ಏಳರಿಂದ ಮೇಲ್ಪಟ್ಟ ತರಗತಿಗಳಲ್ಲಿ ಪರೀಕ್ಷೆ ನಡೆಸಲು ಶಾಲೆ ಸಂಸ್ಥೆ ಸಿದ್ಧತೆ ನಡೆಸುತ್ತಿವೆ. ಅದರ ಹೊರತುಪಡಿಸಿ ಕಾಲೇಜು ಹಂತದಲ್ಲಿ ರಜೆ ಘೋಷಿಸಲ್ಪಟ್ಟಿದೆ. ಬಹುತೇಕ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತಾದರೂ, ಶಿಕ್ಷಕರು ಶಾಲೆಗಳಿಗೆ ತೆರಳಿ ಪರೀಕ್ಷೆ ಕಾರ್ಯದ ಸಿದ್ಧತೆ ನಡೆಸಿದರು.
ವ್ಯಾಪಾರ-ವಹಿವಾಟು ಎಂದಿನಂತೆ: ಎಪಿಎಂಸಿ ಮತ್ತು ಗ್ರಾಹಕ ಮಾರುಕಟ್ಟೆ ಎಂದಿನಂತೆ ವಹಿವಾಟು ನಡೆಯುತ್ತಿವೆ. ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣುಹಂಪಲು ಬೆಲೆ ಕಡಿಮೆಯಾಗಿದೆ ಎನ್ನುವುದು ಬಿಟ್ಟರೆ ಉಳಿದಂತೆ ವಹಿವಾಟಿನಲ್ಲಿ ವ್ಯತ್ಯಯವಾದಂತೆ ಕಾಣಿಸುತ್ತಿಲ್ಲ. ಜಿಲ್ಲಾ ಕೇಂದ್ರದ ಫುಟ್ಪಾತ್ ವ್ಯಾಪಾರವೂ ಭರ್ಜರಿಯಾಗಿಯೇ ಸಾಗಿದೆ. ಬೀದಿಬದಿ ತರಕಾರಿ ಮತ್ತು ಹಣ್ಣು ಹಂಪಲು ಗಾಡಿಗಳು ಎಂದಿನಂತೆಯೇ ರಸ್ತೆಗಿಳಿದು ವ್ಯಾಪಾರ ಮಾಡಿದವು.
ಹಳೇಬಸ್ ನಿಲ್ದಾಣದ ಹೂವಿನ ಅಂಗಡಿಗಳಲ್ಲಿಯೂ ಎಂದಿನಂತೆಯೇ ವ್ಯಾಪಾರ ವಹಿವಾಟು ಸಾಗಿತು. ರೇಷ್ಮೆ ಮಾರುಕಟ್ಟೆಯಲ್ಲಿಯೂ ವಹಿವಾಟು ಯಥಾಸ್ಥಿತಿಯಲ್ಲಿಯೇ ನಡೆಯಿತು. ಆದರೆ, ಕಳೆದ ಒಂದು ವಾರದಿಂದ ಹೋಲಿಸಿದರೆ ಶನಿವಾರ ಧಾರಣೆಯಲ್ಲಿ ಸುಮಾರು 50 ರಿಂದ 100 ರೂ.ಗಳು ಕಡಿಮೆ ದಾಖಲಾಗಿತ್ತು. ಹಳೇ ಮತ್ತು ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಯಥಾ ಸ್ಥಿತಿ ಕಂಡು ಬಂದಿತ್ತಾದರೂ, ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದ್ದರಿಂದ ಅವರ ಸಂಖ್ಯೆ ಕಂಡು ಬರಲಿಲ್ಲ. ಉಳಿದಂತೆ ಗ್ರಾಮಾಂತರ ಪ್ರದೇಶದಿಂದ ಕೋಲಾರಕ್ಕೆ ಬರುವವರ ಸಂಖ್ಯೆಯಲ್ಲಿ ಕಡಿಮೆಯಾಗಿರಲಿಲ್ಲ. ಆದರೆ, ಸರಕಾರಿ ಕಚೇರಿಗಳಿಗೆ ರಜೆ ಇದ್ದುದ್ದರಿಂದ ಕಚೇರಿ ಸುತ್ತಮುತ್ತಲೂ ಜನ ಕಾಣಿಸಲಿಲ್ಲ.
ಕಾರ್ಯನಿರ್ವಹಿಸಿದ ಹೋಟೆಲ್ಗಳು: ಕೋಲಾರ ನಗರದಾದ್ಯಂತ ಹೋಟೆಲ್ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಅದರಲ್ಲೂ ಬೀದಿ ಬದಿಯ ಫುಟ್ಪಾತ್ ಅಂಗಡಿ ಹೋಟೆಲ್ಗಳು, ತಳ್ಳುವ ಗಾಡಿ ಹೋಟೆಲ್ಗಳಲ್ಲಿಯೂ ಎಂದಿನಂತೆಯೇ ಜನ ಬಂದು ತಿನ್ನುತ್ತಿದ್ದುದು ಕಂಡು ಬಂದಿತು. ಸಂಜೆಯವೇಳೆಗೆ ಯಥಾ ಸ್ಥಿತಿಯಲ್ಲಿಯೇ ಪಾನೀಪೂರಿ, ಬೋಂಡಾ, ವಡೆ, ಬೇಲ್ಪೂರಿ, ಸಿಹಿ ತಿನಿಸು ಅಂಗಡಿಗಳು ಕಾರ್ಯನಿರ್ವಹಿಸಿದವು. ಅಂಚೆ ಕಚೇರಿ ಎಂದಿನಂತೆ ತೆರೆದು ಗ್ರಾಹಕ ಸೇವೆ ಒದಗಿಸಿದವು. ಇದರಿಂದ ಗ್ರಾಹಕರಿಗೆ ವ್ಯತ್ಯಯವಾಗಲಿಲ್ಲ. ಸರಕಾರಿ ಕಚೇರಿಗಳಲ್ಲಿ ಎರಡನೇ ಶನಿವಾರದ ರಜೆ ಇದ್ದುದ್ದರಿಂದ ಅವು ಮುಚ್ಚಲ್ಪಟ್ಟಿದ್ದವು. ಬ್ಯಾಂಕ್ಗಳಿಗೆ ಎರಡನೇ ಶನಿವಾರದ ರಜೆ ಇದ್ದುದ್ದರಿಂದ ಗ್ರಾಹಕ ಸೇವೆ ಇರಲಿಲ್ಲ.
ನಡೆದ ಖಾಸಗಿ ಕಾರ್ಯಕ್ರಮಗಳು: ರಾಜ್ಯ ಸರಕಾರ ಕೊರೊನಾ ಮುನ್ನಚ್ಚರಿಕೆ ಕ್ರಮ ಕುರಿತಂತೆ ಜಿಲ್ಲೆಯಲ್ಲಿ ಖಾಸಗಿ ಕಾರ್ಯಕ್ರಮಗಳ ಮೇಲೆ ಅಂತಾ ಪರಿಣಾಮ ಬೀರಿಲ್ಲ. ಕೆಲವು ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದೆಯಾದರೂ, ಸಣ್ಣ ಪುಟ್ಟ ಮನೆ ಕಾರ್ಯಕ್ರಮಗಳು ಬಂಧು ಮಿತ್ರರನ್ನು ಸೇರಿ ನಡೆಸಲಾಗುತ್ತಿದೆ. ಯುಗಾದಿಗೂ ಮುನ್ನ ಭಾನುವಾರ ಬಹುತೇಕ ಮುನಿದ್ಯಾವರಗಳನ್ನು ಮಾಡಬೇಕಾಗಿರುವುದರಿಂದ ಬಹಳಷ್ಟು ಮಂದಿ ಭಾನುವಾರದ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ.
ನಗರದ ಬಹುತೇಕ ಉದ್ಯಾನಗಳಲ್ಲಿ ಎಂದಿನಂತೆ ಚಟುವಟಿಕೆಗಳು ನಡೆಯುತ್ತಿವೆ. ಕೊರೊನಾ ಭೀತಿ ಉದ್ಯಾನಗಳನ್ನು ಬಳಕೆ ಮಾಡುವವರಲ್ಲಿ ಕಂಡು ಬರಲಿಲ್ಲ. ಬೆಂಗಳೂರು ಲಾಲ್ಬಾಗ್, ಕಬ್ಬನ್ಪಾರ್ಕ್ನಲ್ಲಿ ವಾಯುವಿಹಾರಕ್ಕೆ ತೆರಳಿದವರಿಗೆ ಕೊರೊನಾ ಭೀತಿ ಮುಂಜಾಗ್ರತಾ ಕ್ರಮಬಿಸಿ ತಟ್ಟಿತ್ತಾದರೂ, ಕೋಲಾರ ನಗರ ಉದ್ಯಾನಗಳಲ್ಲಿ ಬೆಳಿಗ್ಗೆಯಿಂದ ವಾಯು ವಿಹಾರ ಆನಂತರ ಸಾರ್ವಜನಿಕರ ಬಳಕೆಗೆ ಮುಕ್ತವಾಗಿದ್ದವು. ವಾಹನ ಸಂಚಾರ ಎಂದಿನಂತೆ ನಡೆಯಿತು. ಆದರೆ ಪ್ರಯಾಣಿಕರು ಕೊರತೆ ಕಂಡು ಬಂದಿತು.
ನರ್ಸಿಂಗ್ ಹೋಂ ಆಸ್ಪತ್ರೆ: ಜಿಲ್ಲಾದ್ಯಂತ ನರ್ಸಿಂಗ್ ಹೋಂ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಎಂದಿನಂತೆಯೇ ರೋಗಿಗಳಿಗೆ ಚಿಕಿತ್ಸೆ ಮುಂದುವರಿಯಿತು. ಕೆಲವರು ಸಾಮಾನ್ಯವಾಗಿ ಬರುವ ಕೆಮ್ಮ, ನೆಗಡಿಗೂ ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ತುಂಬಿರುವ ರೋಗಿಗಳ ಮೂಲಕ ದೃಢಪಡುತ್ತಿತ್ತು.
ಮಾಲ್ ಮಳಿಗೆಗಳು ಕಾರ್ಯನಿರ್ವಹಣೆ: ಕೋಲಾರದಲ್ಲಿ ಬೃಹತ್ ಮಾಲ್ಗಳಿಲ್ಲ. ಆದರೆ ಇತ್ತೀಚಿಗೆ ಆರಂಭವಾಗಿರುವ ರಿಲೆಯನ್ಸ್ ಫ್ರೆಶ್, ಮೋರ್ನಂತ ಕಂಪನಿ ಹಾಗೂ ಸ್ಥಳೀಯ ವ್ಯಾಪಾರಿಗಳ ಮಳಿಗೆಗಳು ತೆರೆದು ಯಥಾ ಪ್ರಕಾರ ವ್ಯಾಪಾರವಹಿವಾಟು ನಡೆಸಿದವು. ರಜಾ ದಿನವಾಗಿದ್ದರಿಂದ ಸಾಮಾನ್ಯವಾಗಿಯೇ ಇಂತಹ ಮಳಿಗೆಗಳಲ್ಲಿ ವ್ಯಾಪಾರ ದಾಖಲಾಗಿದ್ದುಕಂಡು ಬಂದಿತು. ಬೆಂಗಳೂರಿನ ಸಮೀಪವಿರುವುದರಿಂದ ವಾರಾಂತ್ಯಗಳಲ್ಲಿ ಜಿಲ್ಲೆ ಜನ ಹೆಚ್ಚಾಗಿ ಬೆಂಗಳೂರು ಮತ್ತು ಸುತ್ತಲ ಆಂಧ್ರ ಪ್ರದೇಶ, ತಮಿಳುನಾಡಿನ ಪ್ರವಾಸಿ ತಾಣಗಳಿಗೆ ಒಂದು ದಿನದ ಪ್ರವಾಸ ಹೋಗುವುದು ಸಾಮಾನ್ಯ. ಆದರೆ, ಕೊರೊನಾ ಭೀತಿಯಿಂದ ಇಂತ ಪ್ರವಾಸಗಳಿಗೆ ಕೊಂಚ ಕಡಿವಾಣ ಬಿದ್ದಂತೆ ಕಂಡು ಬರುತ್ತಿದೆ.
ಕೋಲಾರಮ್ಮ ರಥೋತ್ಸವವಿಲ್ಲ: ಜಿಲ್ಲೆಯ ಬಹುತೇಕ ರಥೋತ್ಸವ, ಧಾರ್ಮಿಕ ಉತ್ಸವಗಳಿಗೆ ನಿಷೇಧ ಹೇರಲಾಗಿದೆ. ಇದರಿಂದ ಕೋಲಾರಮ್ಮ ರಥೋತ್ಸವ ನಡೆಯುತ್ತಿಲ್ಲ. ಹಾಗೆಯೇ ಜಿಲ್ಲೆಯ ಇತರೆಡೆಗಳಲ್ಲಿಯೂ ಉತ್ಸವಗಳು ನಡೆಯುತ್ತಿಲ್ಲ. ಆದರೂ, ದೇವಾಲಯಗಳನ್ನು ತೆರೆದು ನಿತ್ಯ ಪೂಜೆ ಗಳು ನಡೆಯುತ್ತಿವೆ. ಶನಿವಾರ ಶನಿಮಹಾತ್ಮ ಹಾಗೂ ಆಂಜನೇಯ ಸ್ವಾಮಿದೇವಾಲಯಗಳಿಗೆ ಭಕ್ತರು ತೆರಳಿ ಪೂಜೆ ಸಲ್ಲಿಸಿ ನಮಸ್ಕರಿಸುತ್ತಿದ್ದುದು ಕಂಡು ಬಂದಿತು.
ವದಂತಿಗಳೇನು ಕಡಿಮೆ ಇರಲಿಲ್ಲ..: ಕೋಲಾರ ನಗರದ ಜನತೆ ಕೊರೊನಾ ವೈರಸ್ ಕುರಿತಂತೆ ಯಾವುದೇ ಭೀತಿ ಇಟ್ಟುಕೊಳ್ಳದಿರುವುದು ಇಲ್ಲಿನ ಜನಜೀವನ ಶೈಲಿಯಿಂದ ವ್ಯಕ್ತವಾದರೂ, ವದಂತಿಗಳು ಹರಡುವಿಕೆಗೆ ಕಡಿವಾಣ ಬಿದ್ದಿರಲಿಲ್ಲ. ಶನಿವಾರದಿಂದಲೇ ಕೋಲಾರದಲ್ಲಿ ಹದಿನಾಲ್ಕು ಮಂದಿಗೆ ಕೊರೊನಾ ಹರಡಿದೆಯಂತೆ, ಜಾಲಪ್ಪ ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಸಾವನ್ನಪ್ಪಿದರಂತೆ, ಶಂಕಿತ ಸೋಂಕಿತರನ್ನು ಬೆಂಗಳೂರಿಗೆ ರವಾನಿಸಲಾಯಿತಂತೆ,
ಬಂಗಾರಪೇಟೆ ವ್ಯಕ್ತಿಗೆ ಸೋಂಕು ಹರಡಿದೆಯಂತೆ, ಕೋಲಾರದಲ್ಲಿಯೂ ಕೊರೊನಾ ವೈರಸ್ ಹರಡಿದ್ದು ಜಿಲ್ಲಾಡಳಿತ ಗುಟ್ಟು ಕಾಪಾಡುತ್ತಿದೆಯಂತೆ ಇತ್ಯಾದಿ ಅಂತೆ ಕಂತೆಗಳು ಲಂಗು ಲಗಾಮಿಲ್ಲದೆ ಹರಿದಾಡುತ್ತಲೇ ಇದ್ದವು. ಆದರೆ, ಜಿಲ್ಲಾಧಿಕಾರಿ ಸಿ.ಸತ್ಯಭಾಮ ಶುಕ್ರವಾರ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದು ಕೋಲಾರ ಜಿಲ್ಲೆಯಲ್ಲಿ ಇದುವರೆವಿಗೂ ಯಾವುದೇ ಸೋಂಕಿತ ವ್ಯಕ್ತಿ ಪತ್ತೆಯಾಗಿಲ್ಲವೆಂದು ಸ್ಪಷ್ಟಪಡಿಸಿದ್ದರು. ಆದರೂ, ವದಂತಿಗಳು ಹರಡುವವರು ಹರಡುತ್ತೇ ಇದ್ದರೂ.
ಚಿತ್ರ ಮಂದಿರ ಬಂದ್: ನಗರದ ನಾಲ್ಕು ಚಿತ್ರಮಂದಿರಗಳು ರಾಜ್ಯ ಸರಕಾರದ ಆದೇಶದ ಮೇರೆಗೆ ಬಂದ್ ಆಗಿದ್ದವು. ಚಿತ್ರಮಂದಿರಗಳಿಗೆ ಮೊದಲೇ ಕೈಬೆರಳೆೆಣಿಕೆಯಷ್ಟು ಜನ ಹೋಗುತ್ತಿದ್ದುದ್ದರಿಂದ ಅಂತಾ ಬದಲಾವಣೆಯೇನು ಕಂಡು ಬರಲಿಲ್ಲ.
* ಕೆ.ಎಸ್.ಗಣೇಶ್