ಪಾರಾಂಡಹಳ್ಳಿ ಸರ್ಕಾರಿ ಶಾಲೆ ಕಟ್ಟಡ ಶಿಥಿಲ
Team Udayavani, Apr 15, 2021, 2:59 PM IST
ಕೆಜಿಎಫ್: ಮಳೆ ಬಂದರೆ ಕಟ್ಟಡ ಕುಸಿಯಲು ಸಿದ್ಧವಿರುವ ಛಾವಣಿ, ತರಗತಿ ಕೊಠಡಿಗಳಲ್ಲಿ ಹೆಗ್ಗಣಗಳ ಕಾರು ಬಾರು, ಶಾಲೆಗೆ ಸೇರಿದ ಜಾಗದಲ್ಲಿ ರಾಶಿ ರಾಶಿ ಕಸ. ಇಂತಹ ಪರಿಸ್ಥಿತಿ ನಗರದ ಪಾರಾಂಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿದೆ. ಪಾರಾಂಡಹಳ್ಳಿಯ ಮಧ್ಯಭಾಗದಲ್ಲಿರುವ ಸರ್ಕಾರಿ ಶಾಲೆ ಬಹು ಪುರಾತನವಾದದ್ದು.
1939ರಲ್ಲಿ ನಿರ್ಮಾಣ ಮಾಡಿ ರುವ ಕಟ್ಟಡಗಳಲ್ಲಿ ಇನ್ನೂ ಪಾಠ ಹೇಳಿಕೊಡಲಾಗುತ್ತಿದೆ. ಮೇಲ್ಛಾವಣಿ ಯಲ್ಲಿ ಬಿರುಕು ಬಿದ್ದಿದೆ. ಕಟ್ಟಡದ ಮೂಲೆಗಳಲ್ಲಿ ಗಾರೆ ಬಿದಿದ್ದು, ಯಾವಾಗಬೇಕಾದರೂ ಕಟ್ಟಡ ಕುಸಿಯುವ ಸಾಧ್ಯತೆ ಇದೆ. ಇತ್ತೀಚಿಗೆ ತರಗತಿಗಳು ನಡೆಯದೇ ಇರುವ ಕಾರಣ, ತರಗತಿ ಕೊಠಡಿಗಳು ಹೆಗ್ಗಣಗಳ ವಾಸಸ್ಥಳವಾಗಿದೆ. ಈ ಶಾಲೆಯ ಪರಿಸ್ಥಿತಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕಂಡಿಲ್ಲ. ಇಂತಹ ಶಾಲೆಗೆ ಮಕ್ಕಳನ್ನು ಕಳಿಸಿ ಎಂದು ಅಭಿಯಾನ ಮಾಡುತ್ತಾರೆ. ಆದರೆ, ಯಾವುದೇ ಮೂಲಸೌಲಭ್ಯ ಇಲ್ಲದ ಶಾಲೆಗೆ ಮಕ್ಕಳನ್ನು ಕಳುಹಿಸುವುದಾದರೂ ಹೇಗೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಕಡಿಮೆಯಾಗಿದೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ.
ಮೂಲ ಸೌಲಭ್ಯ ಕಲ್ಪಿಸಲು ನಿರ್ಲಕ್ಷ್ಯ: ಪಾರಾಂಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿವರೆಗೂ ಶಾಲೆ ನಡೆಸಲಾಗುತ್ತಿದೆ. ಎಂಟನೇ ತರಗತಿ ಈಗ ಹಿರಿಯ ಪ್ರಾಥಮಿಕ ಹಂತಕ್ಕೆ ಬಂದಿದ್ದರೂ, ಅದನ್ನು ತೆರೆಯುವ ಧೈರ್ಯವನ್ನು ಶಿಕ್ಷಣ ಇಲಾಖೆ ಮಾಡಿಲ್ಲ. ಒಟ್ಟು 98 ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಎಲ್ಲರೂ ಬಡತನದ ಕುಟುಂಬ ದಿಂದ ಬಂದವರು. ಇಂತಹ ಮಕ್ಕಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂಬುದು ಸಾವಿರಾರು ರೂ. ಸಂಬಳ ಪಡೆಯುವ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿದಿಲ್ಲ ಎಂದು ಗ್ರಾಮಸ್ಥ ರಮೇಶ್ ಆರೋಪಿಸಿದ್ದಾರೆ.
ಶಾಲೆಯಲ್ಲಿ ಹೆಗ್ಗಣಗಳ ಸಂತತಿ ವೃದ್ಧಿ: ಶಾಲೆಯ ಅರ್ಧ ಭಾಗ ಹೊಸ ಕಟ್ಟಡದಲ್ಲಿದೆ. ಉಳಿದ ಅರ್ಧ ಭಾಗ ಹಳೇ ಕಟ್ಟಡದಲ್ಲಿದೆ. ನೆಲಹಾಸು ಕಲ್ಲು ಚಪ್ಪಡಿಯಿಂದ ಕೂಡಿದೆ. ಮೂಲೆಗಳಲ್ಲಿ ಹೆಗ್ಗಣಗಳು ಮಣ್ಣನ್ನು ಹೊರ ತೆಗೆದಿದ್ದು, ಈಗ ಮಕ್ಕಳು ಶಾಲೆಗೆ ಬರುತ್ತಿಲ್ಲವಾದ್ದರಿಂದ ಹೆಗ್ಗಣಗಳು ತಮ್ಮ ಸಂತತಿಯನ್ನು ವೃದ್ಧಿಸಿಕೊಂಡಿವೆ.
ಶಾಲೆ ಜಾಗದಲ್ಲಿ ಕಸದ ರಾಶಿ:ಶಾಲೆಯ ಹಿಂಭಾಗದಲ್ಲಿ ಶಾಲೆಗೆ ಸೇರಿದ ಜಾಗವಿದೆ. ಅದನ್ನು ಸ್ವತ್ಛವಾಗಿಟ್ಟುಕೊಳ್ಳದ ಕಾರಣ ಗ್ರಾಮದ ತಿಪ್ಪೆಯಾಗಿ ಪರಿವರ್ತನೆಯಾಗಿದೆ. ಅಲ್ಲಿಂದ ದುರ್ನಾತ ಬೀರುತ್ತಿದೆ. ಶಾಲೆಯ ಪ್ರವೇಶ ದ್ವಾರದಲ್ಲಿ ಕೂಡ ಕಸದ ರಾಶಿಗಳಿವೆ. ಅವುಗಳನ್ನು ಅಲ್ಲಿಯೇ ಸುಡುವುದರಿಂದ ಶಾಲೆಯ ಪ್ರವೇಶ ದ್ವಾರ ಮತ್ತಷ್ಟು ವಿಕಾರವಾಗಿದೆ.
ಐವರು ಶಿಕ್ಷಕರು ಮತ್ತು ಇಬ್ಬರು ಬಿಸಿಯೂಟ ಸಿಬ್ಬಂದಿ ಇದ್ದಾರೆ. ಆದರೆ, ಶಾಲೆಗೆ ಸ್ವತ್ಛತಾ ಸಿಬ್ಬಂದಿ ಇಲ್ಲ. ಅಡುಗೆ ಮಾಡುವವರೇ ಸ್ವತ್ಛತೆ ಮಾಡುತ್ತಿದ್ದಾರೆ. ಆದರೆ, ಅದು ಕೂಡ ಮೇಲ್ನೋಟಕ್ಕೆ ಎಷ್ಟು ಬೇಕೋ ಅಷ್ಟು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶಾಲೆಗಳು ಪ್ರಾರಂಭವಾದರೆ, ಶಾಲೆಯಲ್ಲಿ ಕುಳಿತುಕೊಳ್ಳುವ ಮಕ್ಕಳ ಪ್ರಾಣಕ್ಕೆ ಅಪಾಯವಿದೆ. ಹೀಗಾಗಿ ಪಾರಾಂಡಹಳ್ಳಿ ಸರ್ಕಾರಿ ಶಾಲೆಯ ಕಟ್ಟಡವನ್ನು ದುರಸ್ತಿಗೊಳಿಸಿ, ಮಕ್ಕಳಿಗೆ ಮೂಲ ಸೌಲಭ್ಯವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಕಲ್ಪಿಸಬೇಕಾಗಿದೆ.
-ಬಿ.ಆರ್.ಗೋಪಿನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ