ಬೆಮೆಲ್ ಗುತ್ತಿಗೆ ನೌಕರರಿಗೆ ಬೆಂಬಲ
ಮುಷ್ಕರ ನಿರತರ ಭೇಟಿ ಮಾಡಿದ ಜೆಡಿಎಸ್ ತಾ.ಅಧ್ಯಕ್ಷ ರಾಜೇಂದ್ರನ್
Team Udayavani, May 4, 2019, 10:35 AM IST
ಎಫ್ನ ಬೆಮಲ್ ಕಚೇರಿಯಲ್ಲಿ ಶುಕ್ರವಾರ ನಡೆದ ಹಿರಿಯ ಅಧಿ ಕಾರಿಗಳ ಸಭೆಯಲ್ಲಿ ಶಾಸಕಿ ಎಂ.ರೂಪಕಲಾ, ಬೆಮಲ್ ಹಿರಿಯ ಅಧಿಕಾರಿಗಳು, ಗುತ್ತಿಗೆ ನೌಕರರು ಭಾಗವಹಿಸಿದ್ದರು.
ಕೆಜಿಎಫ್: ಉದ್ಯೋಗ ಅವಧಿಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಬೆಮೆಲ್ ರೈಲ್ವೆ ಕೋಚ್ ಕಾರ್ಖಾನೆ ಗುತ್ತಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ರಾಜೇಂದ್ರನ್ ಬೆಂಬಲ ವ್ಯಕ್ತಪಡಿಸಿದರು.
ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಕೆ.ರಾಜೇಂದ್ರನ್, ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಬೆಮೆಲ್ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರನ್ನು ಶೋಷಣೆ ಮಾಡಲಾಗುತ್ತಿದೆ. ನ್ಯಾಯಯುತವಾದ ಬೇಡಿಕೆ ಈಡೇರಿಸಲು ಹಿಂದೆ ಮುಂದೆ ನೋಡುತ್ತಿದೆ. ಕಾರ್ಮಿಕರನ್ನು ಮಾನವೀಯತೆ ಆಧಾರದ ಮೇಲೆ ನೋಡದೆ, ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ದೂರಿದರು.
ನಂತರ ಸಂಜೆ ವೇಳೆಗೆ ಶಾಸಕಿ ಎಂ.ರೂಪಕಲಾ ಬೆಮೆಲ್ ಕಾರ್ಖಾನೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಂಕರ್ ಮತ್ತಿತರರ ಅಧಿಕಾರಿಗಳ ಜೊತೆ ಮತ್ತೂಂದು ಸುತ್ತಿನ ಚರ್ಚೆ ನಡೆಸಿದರು. ಹಲವರು ಗುತ್ತಿಗೆ ನೌಕರರ ಪ್ರತಿನಿಧಿಗಳು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸುವಂತೆ ಶಾಸಕಿ ರೂಪಕಲಾ ಕಾರ್ಖಾನೆಯ ಆಡಳಿತ ಮಂಡಳಿಗೆ ಮನವಿ ಮಾಡಿದರು. ಉತ್ಪಾದನೆಯನ್ನು ನೋಡಿಕೊಂಡು ಉದ್ಯೋಗದ ಅವಧಿಯನ್ನು ಹೆಚ್ಚು ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳ ಭರವಸೆ ಮೇರೆಗೆ ಮುಷ್ಕರ ನಿಲ್ಲಿಸುವಂತೆ ಶಾಸಕಿ ರೂಪಕಲಾ ಕಾರ್ಮಿಕರಲ್ಲಿ ಮನವಿ ಮಾಡಿದರು.