ಕಲಿಕೆಯಲ್ಲಿ ಶಿಸ್ತು, ಶ್ರದ್ಧೆ ಇದ್ದರೆ ಸಾಧನೆ ಸುಲಭ
ಎಪ್ಸನ್ ಕಂಪನಿಯಿಂದ 14 ಸಾವಿರ ಮಕ್ಕಳಿಗೆ ನೋಟ್ಪುಸ್ತಕ, ಉಪಾಧ್ಯಕ್ಷ ಶೋಗೊ ಶಿರಕಾವ ವಿತರಣೆ
Team Udayavani, Jul 6, 2019, 3:45 PM IST
ಕೋಲಾರ ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಎಪ್ಸನ್ ಕಂಪನಿಯ ಅಧಿಕಾರಿಗಳು ಉಚಿತ ನೋಟ್ಪುಸ್ತಕ, ಪರೀಕ್ಷಾ ಪ್ಯಾಡ್ ವಿತರಿಸಿದರು.
ಕೋಲಾರ: ಕಲಿಕೆಯ ಸಂದರ್ಭದಲ್ಲಿ ದುಶ್ಚಟಗಳಿಂದ ದೂರವಿರಿ, ಶಿಸ್ತು, ಶ್ರದ್ಧೆ, ಛಲ, ರ್ನಿಷ್ಟ ಗುರಿಯೊಂದಿಗೆ ಶೈಕ್ಷಣಿಕ ಸಾಧನೆ ಮಾಡಿದರೆ ಸಮಾಜವೇ ನಿಮ್ಮನ್ನು ಗುರುತಿಸುತ್ತದೆ ಎಂದು ಎಪ್ಸನ್ ಇಂಡಿಯಾ ಕಂಪನಿ ಉಪಾಧ್ಯಕ್ಷ ಶೋಗೊ ಶಿರಕಾವ ಸಲಹೆ ನೀಡಿದರು.
ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕಂಪನಿ ವತಿಯಿಂದ ಶಿಕ್ಷಕರ ಗೆಳೆಯರ ಬಳಗದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿ, ಯಾವುದೇ ಕೆಲಸ ಮಾಡಿದರೂ ಶಿಸ್ತು, ಶ್ರದ್ಧೆ ಮುಖ್ಯ, ಶಿಸ್ತು ನಿಮಗೆ ಮೌಲ್ಯಗಳನ್ನು ಕಲಿಸುತ್ತದೆ, ಕಲಿಕೆಗೆ ಆಸಕ್ತಿಯನ್ನು ಹೆಚ್ಚಿಸುತ್ತದೆ, ನಿಮ್ಮ ಬದುಕು ಸರಿದಾರಿಯಲ್ಲಿ ಸಾಗಲು ಬೆಳಕು ನೀಡುತ್ತದೆ ಎಂದು ವಿವರಿಸಿದರು.
ಎಪ್ಸನ್ ಕಂಪನಿಯ ಹಿರಿಯ ವ್ಯವಸ್ಥಾಪಕ ಸ್ಯಾಮುಯಲ್ ನವನೀತ್, ಸರ್ಕಾರಿ ಶಾಲೆಯ ಪ್ರತಿ ಮಗುವಿಗೂ ತಾಲೂಕಿನಲ್ಲಿ ಉಚಿತ ನೋಟ್ಪುಸ್ತಕಗಳನ್ನು ಹಂಚುವ ಗುರಿ ಹೊಂದಿದ್ದೇವೆ, ಇದೀಗ ಪುಸ್ತಕಗಳ ಜತೆ ಎಕ್ಸಾಂ ಪ್ಯಾಡ್ ನೀಡುತ್ತಿದ್ದೇವೆ, ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ವಿವರಿಸಿದರು.
ಪುಸ್ತಕಗಳ ಜತೆ ಎಕ್ಸಾಂ ಪ್ಯಾಡ್: ತಾಲೂಕಿನ ಸರ್ಕಾರಿ ಶಾಲೆಗಳ 14500 ಮಕ್ಕಳಿಗೂ ಉಚಿತ ನೋಟ್ಪುಸ್ತಕ, ಎಕ್ಸಾಂ ಪ್ಯಾಡ್ ವಿತರಿಸಲು ಸಿದ್ಧತೆ ನಡೆಸಿದ್ದೇವೆ, ವಿದ್ಯಾರ್ಥಿಗಳು ನೀಡುತ್ತಿರುವ ಪುಸ್ತಕಗಳನ್ನು ಸದ್ವಿನಿಯೋಗ ಮಾಡಿಕೊಂಡರೆ ಮಾತ್ರ ಸಾರ್ಥಕತೆ ಎಂದರು.
ಎಪ್ಸನ್ ಕಂಪನಿಯ ಮತ್ತೂಬ್ಬ ಹಿರಿಯ ವ್ಯವಸ್ಥಾಪಕ ಎಚ್.ಎಸ್.ಎನ್.ಮೂರ್ತಿ, ಕಂಪನಿ ತನ್ನ ಸಾಮಾಜಿಕ ಹೊಣೆಯಡಿ ಈ ಕಾರ್ಯ ಮಾಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್, ಸರ್ಕಾರಿ ಶಾಲೆಗಳನ್ನು ಖಾಸಗಿ ಪೈಪೋಟಿಗೆ ಎದುರಾಗಿ ಸದೃಢಗೊಳಿಸುವ ಕಾರ್ಯಕ್ಕೆ ನೆರವಾಗುತ್ತಿರುವ ಎಪ್ಸನ್ ಕಂಪನಿಗೆ ಕೃತಜ್ಞತೆ ಸಲ್ಲಿಸಿದರು.
ಕೃತಜ್ಞತೆ: ಎಸ್ಡಿಎಂಸಿ ಅಧ್ಯಕ್ಷ ಮುನಿಯಪ್ಪ, ಸರ್ಕಾರಿ ಶಾಲಾ ಮಕ್ಕಳಿಗೆ ನೆರವಾಗುವ ಮೂಲಕ ಸಮಾನ ಶಿಕ್ಷಣ ಉಳಿಸಲು ಕೈಜೋಡಿಸಿರುವ ಎಪ್ಸನ್ ಕಂಪನಿಗೆ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಎಪ್ಸನ್ ಕಂಪನಿಯ ಮ್ಯಾನೇಜರ್ ಹಿರೊಯುಕಿ ಅಕಿಟಾ, ಸೀನಿಯರ್ ಮ್ಯಾನೇಜರ್ಗಳಾದ ವಿನಯ್ ಕುಮಾರ್ರೆಡ್ಡಿ, ಕೆ.ಶ್ರೀಧರನ್, ಮ್ಯಾನೇಜರ್ ನವೀನ್ ಎಸ್.ಶೆಟ್ಟಿ, 35ಕ್ಕೂ ಹೆಚ್ಚು ಮಂದಿ ಎಪ್ಸನ್ ಕಂಪನಿ ಅಧಿಕಾರಿಗಳು, ಶಿಕ್ಷಕರ ಗೆಳೆಯರ ಬಳಗದ ವೀರಣ್ಣಗೌಡ, ಚಂದ್ರಪ್ಪ, ನಾರಾಯಣಸ್ವಾಮಿ, ವೆಂಕಟಾಚಲಪತಿಗೌಡ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಮುಳ್ಳಹಳ್ಳಿ ಮಂಜುನಾಥ್, ಹಾಲಿ ಉಪಾಧ್ಯಕ್ಷೆ ಹೇಮಾವತಿ, ಸದಸ್ಯರಾದ ರಾಘವೇಂದ್ರ ಹಾಜರಿದ್ದರು.