ಕನಡವನ್ನಷ್ಟೇ ಮಾತನಾಡುವ ಯಾರಬ್ ಪಾಷಾ!
Team Udayavani, Nov 1, 2019, 4:28 PM IST
ಕೋಲಾರ: ಕನ್ನಡ ಮಧ್ಯೆ ಇಂಗ್ಲಿಷ್ ಪದಗಳ ಬೆರೆಸಿ ಕಂಗ್ಲಿಷ್ ಮಾತನಾಡುವವರೇ ಹೆಚ್ಚಾಗಿರುವವರ ಮಧ್ಯೆ, ಶುದ್ಧವಾಗಿ ಕನ್ನಡ ಮಾತನಾಡುವವರೇ ಅಪರೂಪವಾಗಿದ್ದಾರೆ. ಇಂತ ಅಪರೂಪದ ವ್ಯಕ್ತಿ ಕೋಲಾರದ ಯಾರಬ್ಪಾಷಾ.
ಕೋಲಾರದ ಎಸ್.ಆರ್.ಯಾರಬ್ ಪಾಷಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ. ಸರಳವಾದ ಪದಗಳ ಮೂಲಕವೇ ಸ್ವಷ್ಟವಾಗಿ ಕನ್ನಡ ಮಾತನಾಡುವುದು ಇವರಿಗೆ ಅಚ್ಚುಮೆಚ್ಚು.
ಇವರ ಈ ಹವ್ಯಾಸದಿಂದ ಇವರನ್ನು ಡಿಡಿಪಿಐ ಕಚೇರಿಯ ಸಿಬ್ಬಂದಿ ಕನ್ನಡಪ್ರೇಮಿ, ಕನ್ನಡ ಪಂಡಿತ ಇತ್ಯಾದಿ ವಿಶೇಷಣಗಳಿಂದ ಗುರುತಿಸುತ್ತಾರೆ.ಹೀಗೆ ಕನ್ನಡ ಮಾತನಾಡುವುದು ತನ್ನೊಬ್ಬನ ಹಿರಿಮೆ ಎಂದು ಯಾರಬ್ ಪಾಷಾ ಎಂದು ಎಂದಿಗೂ ಭಾವಿಸಿಲ್ಲ. ತನ್ನಂತೆಯೇ ಪ್ರತಿಯೊಬ್ಬ ಕನ್ನಡಿಗರು ಕನ್ನಡವನ್ನೇ ಮಾತನಾಡಿದರೆ ಕನ್ನಡಿಗರಾಗಿ ಜನಿಸಿದ ತಮಗೆ ಮತ್ತು ಕನ್ನಡಕ್ಕೆ ಕೀರ್ತಿ ಎನ್ನುತ್ತಾರೆ. ಹೀಗೆ ಕನ್ನಡವನ್ನು ಮಾತ್ರವೇ ಮಾತನಾಡುವ ಯಾರಬ್ ಪಾಷಾ ಇಂದಿಗೂ ತೆರೆಮರೆಯ ಕಾಯಿಯಂತೆ ಇದ್ದುಬಿಟ್ಟಿದ್ದಾರೆ.
ಮಾಲೂರು ಮೂಲ: ಮಾಲೂರು ತಾಲೂಕು ಹುಳದೇನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ ದರ್ಜೆ ನೌಕರರಾಗಿದ್ದ ರಹೀಮ್ಸಾಬ್ ಮತ್ತು ರಹಮತ್ ಉನ್ನಿಸಾ ದಂಪತಿಗಳ ಮೂವರು ಮಕ್ಕಳಲ್ಲಿ ಏಕೈಕ ಗಂಡು ಮಗುವಾಗಿ ಜನ್ಮತಾಳಿದ ಯಾರಬ್ ಪಾಷಾ, ತಂದೆ ಕೆಲಸ ಮಾಡುತ್ತಿದ್ದ ಕನ್ನಡ ಶಾಲೆಯಲ್ಲಿಯೇ ವ್ಯಾಸಂಗಕ್ಕೆ ದಾಖಲಾದರು. ಹುಳದೇನಹಳ್ಳಿಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯವರೆಗೂ, ಮಾಲೂಕು ತಾಲೂಕು ಲಕ್ಕೂರಿನಲ್ಲಿ ಪ್ರೌಢಶಾಲೆ ವ್ಯಾಸಂಗ ಮಾಡಿದ ನಂತರ ಕೋಲಾರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿವರೆಗೂ ಕನ್ನಡ ಮಾಧ್ಯಮ ದಲ್ಲಿಯೇ ವ್ಯಾಸಂಗ ಮಾಡಿದರು.
ಗೋಕಾಕ್ನಲ್ಲಿ ಕೆಲಸ: ದ್ವಿತೀಯ ಪಿಯುಸಿ ಪೂರ್ಣಗೊಳಿಸುತ್ತಿದ್ದಂತೆಯೇ 1992ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ದ್ವಿತೀಯ ದರ್ಜೆ ಗುಮಾಸ್ತರಾಗಿ ಬೆಳಗಾವಿ ಜಿಲ್ಲೆಯ ಗೋಕಾಕ್ನಲ್ಲಿ ಕೆಲಸಕ್ಕೆ ಸೇರಿದ್ದರು. ಆನಂತರ ಆಗಿನ ಕೋಲಾರ ಜಿಲ್ಲೆಯ ಬಾಗೇಪಲ್ಲಿಗೆ ವರ್ಗವಾಗಿ ಬಂದಿದ್ದರು. ನಂತರದ ವರ್ಷಗಳಲ್ಲಿ ಮುಳಬಾಗಿಲು ತಾಲೂಕು ದೇವರಾಯಸಮುದ್ರ ಹಾಗೂ ಶಾಪೂರು ಶಾಲೆಗಳಲ್ಲಿ ಕಾರ್ಯನಿರ್ವಹಿಸಿ ಪ್ರಥಮ ದರ್ಜೆ ಗುಮಾಸ್ತರಾಗಿ ಬಡ್ತಿ ಪಡೆದು 1992ರಲ್ಲಿ ಕೋಲಾರ ಡಿಡಿಪಿಐ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎಲ್ಲೇ ಹೋದ್ರೂ ಕನ್ನಡ ಬಿಡಲಿಲ್ಲ: ಬೆಳಗಾವಿಯ ಮರಾಠಿ ಪ್ರಭಾವ, ಬಾಗೇಪಲ್ಲಿಯ ತೆಲುಗು, ದೇವರಾಯಸಮುದ್ರದ ತಮಿಳು, ತೆಲುವು, ಇದ್ಯಾವುದು ಯಾರಬ್ಪಾಷಾರ ಕನ್ನಡತನಕ್ಕೆ ಅಡ್ಡಿಯಾಗಲಿಲ್ಲ. ತಾವು ಎಲ್ಲಿಯೇ ಕೆಲಸ ನಿರ್ವಹಿಸಲಿ ತನ್ನ ಇಡೀ ಕಚೇರಿಯ ವಾತಾವರಣವನ್ನು ಕನ್ನಡಮ ಯವಾಗಿಸುವುದು ಯಾರಬ್ ಪಾಷಾರ ನೆಚ್ಚಿನ ಹವ್ಯಾಸ. ತನ್ನ ಬಳಿ ಕೆಲಸ ಮಾಡಿಸಿಕೊಳ್ಳಲು ಬರುವವರಿಗೂ ಕನ್ನಡವನ್ನೇ ಮಾತನಾಡಿ ಎಂದು ಪ್ರೀತಿ ಯಿಂದ ತಾಕೀತು ಮಾಡುವುದು ಅವರ ಅಭ್ಯಾಸ.
ಕನ್ನಡ ಪ್ರೀತಿಗೆ ಬಾಲ್ಯವೇ ಸ್ಫೂರ್ತಿ: ಯಾರಬ್ಪಾಷಾ ತಾಯಿಯ ತವರೂರಾದ ಮಾಲೂರು ತಾಲೂಕಿನ ಹುರುಳಗೆರೆಯಲ್ಲಿ 1962ರಲ್ಲಿ ಜನಿಸಿದರು. ಇವರನ್ನು ಸಾಕಿದ ಲಿಂಗಮ್ಮ ಹಾಗೂ ಹುಳದೇನಹಳ್ಳಿಯಲ್ಲಿ ಇವರಿಗೆ ಮನೆ ಬಾಡಿಗೆ ನೀಡಿದ್ದ ಅಮ್ಮಣ್ಣಿಯವರಿಂದ ಬಾಲ್ಯದ ಪಾಠಗಳನ್ನು ಕಲಿತು ಅವರಂತೆಯೇ ಕನ್ನಡವನ್ನೇ ಮಾತನಾಡಬೇಕೆಂದು ಯಾರಬ್ಪಾಷಾ ನಿರ್ಧರಿಸಿ ಕನ್ನಡವನ್ನು ನಿತ್ಯದ ಉಸಿರಾಗಿಸಿಕೊಂಡು ಇಂದಿಗೂ ಬದುಕುತ್ತಿದ್ದಾರೆ.
ಮಕ್ಕಳಿಗೂ ಕನ್ನಡ ಪಾಠ: ಪತ್ನಿ ಫರೀದಾ ಹಾಗೂ ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ಕೌಸಿಯಾ ತರುನಮ್ ಹಾಗೂ ಹತ್ತನೇ ತರಗತಿಯಲ್ಲಿ ಓದುತ್ತಿರುವ ಮುಜಮಿಲ್ ಪಾಷಾರಿಗೂ ಕನ್ನಡ ಪಾಠಗಳನ್ನು ಖುದ್ದು ತಾವೇ ಕಲಿಸುತ್ತಿರುವ ಯಾರಬ್ ಪಾಷಾ ಅವರಲ್ಲೂ ಕನ್ನಡ ಪ್ರೇಮವನ್ನು ಬಿತ್ತುತ್ತಿದ್ದಾರೆ.
ಕಚೇರಿ ಕನ್ನಡಮಯ: ತಮ್ಮೊಂದಿಗೆ ವ್ಯವಹರಿಸುತ್ತಿವವರು ಹಿರಿಯ ಅಧಿಕಾರಿಯಾಗಿರಲಿ, ಸಾಮಾನ್ಯಶಿಕ್ಷಕರೇ ಆಗಿರಲಿ ಯಾರಬ್ ಪಾಷಾ ಅಚ್ಛ ಕನ್ನಡದಲ್ಲೇ ಮಾತನಾಡುತ್ತಾರೆ. ಕಚೇರಿಯ ಕಡತಗಳನ್ನು ಕನ್ನಡದಲ್ಲಿಯೇ ಸ್ಪುಟವಾಗಿ ಬರೆದು ನಿರ್ವಹಿಸುತ್ತಾರೆ. ಕಚೇರಿಯ ಸಹೋದ್ಯೋಗಿಗಳಿಗೂ ಕನ್ನಡವನ್ನೇ ಮಾತನಾಡುವಂತೆ ಕೋರುತ್ತಾರೆ. ಕೆಲವು ಆಂಗ್ಲ ಪದಗಳ ಬದಲಿಗೆ ಇಂತ ಕನ್ನಡ ಪದಗಳನ್ನು ಬಳಸಬಹುದೆಂದು ಸಲಹೆ ನೀಡುತ್ತಾರೆ. ಕೆಇಎಸ್ ಪಾಸಾಗಿ ಮುಖ್ಯ ಶಿಕ್ಷಕರಾಗಿ ಕೆಲಸಕ್ಕೆ ಸೇರಿದವರು ಕಚೇರಿ ಕೆಲಸಕ್ಕೆ ತಮ್ಮ ಬಳಿಬಂದಾಗ ತೋರ್ಪಡಿಕೆಗಾಗಿ ಇಂಗ್ಲಿಷ್ ಮಾತನಾಡಿದರೆ, ಯಾರಬ್ ಪಾಷಾ ಕನ್ನಡ ಭಾಷೆಯ ಅಭಿಮಾನದ ಮಾತುಗಳನ್ನು ಆಡುತ್ತಾ ಅವರಲ್ಲಿ ಕನ್ನಡ ಬೆಳೆಸುವ ಬೀಜವನ್ನು ಬಿತ್ತುತ್ತಾರೆ.
ಯಾರಬ್ ಪಾಷಾ ಎಷ್ಟರ ಮಟ್ಟಿಗೆ ಕನ್ನಡ ಪ್ರೀತಿಯೆಂದರೆ ತಮ್ಮ ಬಳಿ ಕೆಲಸ ಮಾಡಿಸಿಕೊಂಡು ಯಾರಾದರೂ ಥ್ಯಾಂಕ್ಸ್ ಎಂದರೂ ಪ್ರತಿಯಾಗಿ ಅತ್ಛ ಕನ್ನಡದಲ್ಲಿ ಧನ್ಯವಾದಗಳು ಎಂದೇ ಪ್ರತಿಕ್ರಿಯಿಸುತ್ತಾರೆ. ಇವರ ಕನ್ನಡ ಅಭಿಮಾನದ ಪ್ರೀತಿಗೆ ಮನಸೋತ ಸಹೋದ್ಯೋಗಿಗಳು, ಇವರೊಂದಿಗೆ ವ್ಯವಹರಿಸುವ ಶಿಕ್ಷಕರು ಆದಷ್ಟು ಕನ್ನಡದಲ್ಲಿಯೇ ವ್ಯವಹರಿಸುವಂತೆ ಮಾಡುವುದರ ಮೂಲಕ ಕಚೇರಿಯ ವಾತಾವರಣವನ್ನೇ ಕನ್ನಡಮಯವಾಗಿಸುವುದು ಯಾರಬ್ ಪಾಷಾರ ಭಾಷಾ ಕನ್ನಡಾಭಿಮಾನದ ನಿತ್ಯ ಕಾಯಕವಾಗಿದೆ.
ಎಂದಿಗಾದರೂ ಕನ್ನಡವನ್ನು ಮಾತ್ರವೇ ಮಾತನಾಡಿದ್ದಕ್ಕೆ ಯಾರಿಂದಲಾದರೂ ಟೀಕೆಗೆ ಗುರಿಯಾಗಬೇಕಾಗಿತ್ತೇ, ವ್ಯಂಗ್ಯದ ಮಾತುಗಳ ಎದುರಿಸಬೇಕಾಗಿತ್ತೇ ಎಂಬ ಪ್ರಶ್ನೆಗೆ, ಈ ರೀತಿ ಎಂದೂ ಆಗಿಲ್ಲ ಕನ್ನಡ ತಮಗೆ ವಿಶೇಷ ಗೌರವವನ್ನು ತಂದುಕೊಟ್ಟಿದೆ ಎನ್ನುತ್ತಾರೆ.
ಕನ್ನಡಿಗರಾಗಿ ಹುಟ್ಟಿದ ಪ್ರತಿಯೊಬ್ಬರೂ ಕನ್ನಡಕ್ಕೆ ಕೀರ್ತಿತರುವಂತೆ ಬದುಕುವುದನ್ನೇಗುರಿಯಾಗಿಸಿ ಕೊಳ್ಳಬೇಕು. ಕನ್ನಡಕ್ಕಾಗಿ ಕೈ ಎತ್ತು ನಿನ್ನಕೈಕಲ್ಪವೃಕ್ಷವಾಗುತ್ತದೆ ಯೆಂಬ ಕವಿವಾಣಿಯಂತೆ ಕನ್ನಡ ಮಾತ್ರವೇ ಬಳಸುವುದರಿಂದ ತಮಗೆ ಸಹೋದ್ಯೋಗಿಗಳ ವಲಯದಲ್ಲಿ ವಿಶೇಷ ಗೌರವ ದೊರೆಯುವಂತಾಗಿದೆ. –ಯಾರಬ್ಪಾಷಾ, ಪ್ರಥಮ ದರ್ಜೆ ಗುಮಾಸ್ತ.
-ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ
LS polls 2024: ಕೋಲಾರ ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ; ಜೆಡಿಎಸ್ ಮುಖಂಡರು ಗೈರು