ಪ್ರಕೃತಿ ವಿಕೋಪ ನೀಗಿಸಲು ವಿಶೇಷ ತಂಡ
ಮುಂಜಾಗ್ರತಾ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಸ್ಪಷ್ಟನೆ
Team Udayavani, Jun 16, 2019, 3:44 PM IST
ಕೊಪ್ಪ: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಕೃತಿ ವಿಕೋಪದ ಕುರಿತ ಮುಂಜಾಗ್ರತಾ ಸಭೆಯಲ್ಲಿ ಶಾಸಕ ರಾಜೇಗೌಡ ಮಾತನಾಡಿದರು.
ಕೊಪ್ಪ: ಕಳೆದ ಬಾರಿ ಪ್ರಕೃತಿ ವಿಕೋಪಗಳಿಂದ ಸಾಕಷ್ಟು ಹಾನಿಯಾಗಿತ್ತು. ಪೂರ್ವ ಸಿದ್ಧತೆಯಿಲ್ಲದಿದ್ದರೂ ಸಂದರ್ಭವನ್ನು ಸಮರ್ಪಕವಾಗಿ ನಿಭಾಯಿಸಲಾಗಿದೆ. ಈ ಬಾರಿ ಎಲ್ಲಾ ಇಲಾಖೆಗಳನ್ನೊಳಗೊಂಡ ವಿಶೇಷ ತಂಡಗಳನ್ನು ರಚಿಸಿ, ಪೂರ್ವ ಸಿದ್ಧತೆ ಮಾಡಿಕೊಳ್ಳಲಾ ಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಕೃತಿ ವಿಕೋಪ ಕುರಿತ ಮುಂಜಾಗ್ರತಾ ಸಭೆಯಲ್ಲಿ ಮಾತನಾಡಿದರು. ಯಾವುದೇ ಸಮಯದಲ್ಲಿ ಪ್ರಕೃತಿ ವಿಕೋಪಕ್ಕೆ ಸಂಬಂಧಪಟ್ಟಂತೆ ವರದಿಗಳು ಬಂದಲ್ಲಿ ಕೂಡಲೇ ಸ್ಪಂದಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಯಾವುದೇ ಇಲಾಖೆ ಅಧಿಕಾರಿಗಳು ಮಳೆಗಾಲ ಮುಗಿಯುವವರೆಗೂ ದೀರ್ಘ ರಜೆಯಲ್ಲಿ ತೆರಳುವಂತಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳದೆ ದಿನದ 24ಗಂಟೆ ಚಾಲನೆಯಲ್ಲಿರುವಂತೆ ನೋಡಿಕೊಳ್ಳಬೇಕೆಂದು ತಾಕೀತು ಮಾಡಿದರು.
ತಹಶೀಲ್ದಾರ್ ಎರ್ರಿ ಸ್ವಾಮಿ ಮಾತನಾಡಿ, ಶಾಸಕರ ಸೂಚನೆಯಂತೆ ಈಗಾಗಲೇ ಪ್ರಕೃತಿ ವಿಕೋಪದ ಎದುರಾದಲ್ಲಿ ಕಾರ್ಯಾಚರಣೆ ನಡೆಸಲು ರ್ಯಾಪಿಡ್ ರೆಡ್ಕ್ರಾಸ್ ಟೀಂ ರಚಿಸಲಾಗಿದೆ. 6 ಜನ ಸರ್ಕಾರಿ ವೈದ್ಯರು, 3 ಜನ ಆ್ಯಂಬುಲೆನ್ಸ್ ಚಾಲಕರು, 3 ಮಂದಿ ಖಾಸಗಿ ವೈದ್ಯರು, 6 ಜನ ಶುಶ್ರೂಷಕರು, 5 ಮಂದಿ ಡಿ ಗ್ರೂಪ್ ನೌಕರರು ತಂಡದಲ್ಲಿದ್ದಾರೆ. ತುರ್ತು ಚಿಕಿತ್ಸೆಗೆ ಅಗತ್ಯವಾದ ಎಲ್ಲಾ ಔಷಧಿಗಳನ್ನು ಪೂರೈಸಲಾಗಿದೆ ಎಂದರು. ಮಳೆಗಾಲದಲ್ಲಿ ಪ್ರವಾಹ ಉಂಟಾಗುವಂತಹ 11ತಗ್ಗು ಪ್ರದೇಶಗಳಾದ ಹರಿಹರಪುರ, ನರಸೀಪುರ, ಬೊಮ್ಲಾಪುರ, ಗುಡ್ಡೇತೋಟ, ಕುದ್ರೆಗುಂಡಿ, ಮೇಗೂರು, ಬಸ್ರಿಕಟ್ಟೆ, ಕೊಗ್ರೆ ಮುಂತಾದ ಗ್ರಾಮಗಳಲ್ಲಿ ಸದಾ ಎಚ್ಚರದಿಂದ ಇರಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಗಣಪತಿ, ಲೋಕೋಪಯೋಗಿ ಇಲಾಖೆ ಎಇಇ ರವಿಚಂದ್ರ, ಆರ್ಎಫ್ಒ ಪ್ರವೀಣ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ವಿಜಯ್ಕುಮಾರ್, ಚೇತನ್, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.