ಪ್ರತಾಪಗೌಡಗೆ ಭರ್ಜರಿ ಜಯ: ವಿಜಯೇಂದ್ರ
Team Udayavani, Mar 21, 2021, 9:12 PM IST
ತಾವರಗೇರಾ: ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಹೆಚ್ಚು ಮತಗಳ ಅಂತರದಿಂದ ಜಯಗಳಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಅವರು ಶನಿವಾರ ಮಸ್ಕಿಗೆ ಹೋಗುವ ಸಂದರ್ಭದಲ್ಲಿ ಪಟ್ಟಣದ ಜೈಜನಾಥ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಹಾಗೂ ಪಕ್ಷದ ಮುಖಂಡರು ಚುನಾವಣೆ ನಡೆಯುತ್ತಿರುವ ಮಸ್ಕಿ ಕ್ಷೇತ್ರದ ಉಸ್ತುವಾರಿ ನನಗೆ ನೀಡಿದ್ದಾರೆ. ಮಸ್ಕಿ ಕ್ಷೇತ್ರದ ಅಭಿವೃದ್ಧಿಗಾಗಿ ಮತದಾರರು ಬಿಜೆಪಿಗೆ ಮತ ನೀಡುವ ಮೂಲಕ ಪ್ರತಾಪಗೌಡ ಪಾಟೀಲ್ ಅವರನ್ನು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸವಿದೆ. ಇದೇ ವೇಳೆ ಮುಖಂಡರು ಶ್ಯಾಮೀದಲಿ ದರ್ಗಾ ಅಭಿವೃದ್ಧಿಗೆ, ಮೆಣೇಧಾಳ ರಾಯರ ಬೃಂದಾವನ ನಿರ್ಮಾಣಕ್ಕೆ, ವೈಜನಾಥ ದೇವಸ್ಥಾನ ಅಭಿವೃದ್ಧಿಗೆ ತಲಾ 1 ಕೋಟಿ ರೂ. ಅನುದಾನ ಮಂಜೂರು ಮತ್ತು ಸೂರ್ಯವಂಶ ಕ್ಷತ್ರೀಯ ಸಮಾಜವನ್ನು ಎಸ್ಸಿ ಮೀಸಲಾತಿ ಪಟ್ಟಿಗೆ ಸೇರಿಸಲು, ಸರ್ಕಾರಕ್ಕೆ ಒತ್ತಡ ತರುವಂತೆ ಮನವಿ ಮಾಡಿದರು.
ಶಾಸಕ ಬಸವರಾಜ ದಢೇಸುಗೂರು, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಜಿಪಂ ಸದಸ್ಯ ಕೆ. ಮಹೇಶ, ಮುಖಂಡರಾದ ನವೀನ ಗುಳಗಣ್ಣವರ, ಅಮರೇಶ ಕುಳಗಿ, ಚಂದ್ರಶೇಖರ ನಾಲತವಾಡ, ಮಂಜುನಾಥ ಜೂಲಕುಂಟಿ ಇದ್ದರು.