ನಮ್ಮದು ‘ಮಾಡು ಇಲ್ಲವೇ ಮಡಿ’ ಹೋರಾಟ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ
Team Udayavani, Jan 20, 2021, 12:45 PM IST
ಕೊಪ್ಪಳ: 2ಎ ಮೀಸಲಾತಿಗೆ ಒತ್ತಾಯಿಸಿ ನಡೆಯುತ್ತಿರುವ ನಮ್ಮ ಪಾದಯಾತ್ರೆ ‘ಮಾಡು ಇಲ್ಲವೆ ಮಡಿ’ ಎನ್ನುವ ನಿರ್ಧಾರದೊಂದಿಗೆ ಮುನ್ನಡೆದಿದೆ ಎಂದು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಹೇಳಿದರು.
ಕೊಪ್ಪಳದಲ್ಲಿ 7ನೇ ದಿನದ ಪಾದಪಾತ್ರೆಯ ಮುನ್ನ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಪಂಚಮಸಾಲಿ ಸಮಾಜವನ್ನ 2ಎ ಮೀಸಲಾತಿಗೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಸರ್ಕಾರದ ಮುಂದೆ ಹಲವು ಬಾರಿ ಹೋರಾಟ ಮಾಡಿದ್ದೇವೆ. ಉಪವಾಸ ಸತ್ಯಾಗ್ರಹ ನಡೆದಿದೆ. ಆದರೂ ಸಿಎಂ ಯಡಿಯೂರಪ್ಪ ಅವರು ನಮ್ಮ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುತ್ತಿಲ್ಲ. 2-3 ಬಾರಿ ಸಿಎಂ ನಮಗೆ ಪಾದಯಾತ್ರೆ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಆದರೆ 2ಎ ಮೀಸಲು ನೀಡುವ ಕುರಿತಂತೆ ಸ್ಪಷ್ಟ ನಿಲುವು ಸರ್ಕಾರದಿಂದ ಬರುತ್ತಿಲ್ಲ ಎಂದರು.
ಇದನ್ನೂ ಓದಿ:ಬಿಹಾರ ಮಾದರಿಯಲ್ಲಿ ಜನತಾ ಪರಿವಾರ ಒಗ್ಗೂಡಿಸುತ್ತೇವೆ: ಬಸವರಾಜ ಹೊರಟ್ಟಿ
ನಾವು ರಾಜಕೀಯ ಮೀಸಲಾತಿಯನ್ನು ಕೇಳುತ್ತಿಲ್ಲ. ಶೈಕ್ಷಣಿಕ, ಔದ್ಯೋಗಿಕವಾಗಿ ಮಾತ್ರ 2ಎ ಮೀಸಲಾತಿಯನ್ನು ಕೇಳುತ್ತಿದ್ದೇವೆ. ಸರ್ಕಾರ ಇದಕ್ಕೆ ಸ್ಪಂದಿಸಬೇಕು. ನಮ್ಮದು ಪಂಚಮಸಾಲಿ ನಡಿಗೆ ವಿಧಾನಸೌಧದ ಒಳಗೆ ಎನ್ನುವ ಘೋಷವಾಕ್ಯದೊಂದಿಗೆ ನಮ್ಮ ಪಾದಯಾತ್ರೆ ನಡೆದಿದೆ ಎಂದರು.
ಇದನ್ನೂ ಓದಿ:ಸಚಿವ ಬಿ.ಸಿ. ಪಾಟೀಲ್ ರೈತರ ಕ್ಷಮೆ ಕೇಳಬೇಕು: ಶಾಸಕ ಪುಟ್ಟರಾಜು ಆಗ್ರಹ
ಕಲ್ಯಾಣ ಕರ್ನಾಟಕದ ಗಡಿ ದಾಟುವುದರ ಒಳಗೆ ನಮ್ಮ ಬೇಡಿಕೆ ಈಡೇರಬೇಕು. ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಗೆ ಪಾದಯಾತ್ರೆ ತೆರಳುವ ಒಳಗೆ ಸರ್ಕಾರ ನಿಲುವು ಪ್ರಕಟ ಮಾಡದಿದ್ದರೆ ನಮ್ಮ ಧ್ಯೇಯ ವಾಕ್ಯ ನಿರ್ಣಯವು ಬದಲಾಗಲಿದೆ. ಅಲ್ಲಿ ಅದನ್ನು ಘೋಷಣೆ ಮಾಡಲಿದ್ದೇನೆ ಎಂದು ಸ್ವಾಮೀಜಿ ಹೇಳಿದರು.