ನೀರು ಹರಿಸುವ ಮುಂಚೆ ಮಳೆ ನೀರಿಗೆ ಒಡೆದ ಕಾಲುವೆ: ಅತಂತ್ರ ಸ್ಥಿತಿಯಲ್ಲಿ ವಿಎನ್ ಸಿ ರೈತರು
Team Udayavani, Jul 25, 2020, 9:52 AM IST
ಗಂಗಾವತಿ: ಇಡೀ ರಾತ್ರಿ ಸುರಿದ ಮಳೆಗೆ ತಾಲೂಕಿನ ಕೋರಮ್ಮ ಕ್ಯಾಂಪ್ ಹತ್ತಿರ ವಿಜಯನಗರ ಕಾಲುವೆ ನಾಲ್ಕೈದು ಕಡೆ ಬಿರುಕುಬಿಟ್ಟು ಒಡೆದು ಹೋಗಿದೆ. ಇದರಿಂದ ನಾಟಿ ಮಾಡಿದ ಭತ್ತದ ಗದ್ದೆ ಮತ್ತು ಹಾಕಿದ್ದ ಭತ್ತದ ಸಸಿ ಮಡಿಗೆ ನೀರು ನುಗ್ಗಿದ್ದು ಅಪಾರ ನಷ್ಟವುಂಟು ಮಾಡಿದೆ.
ವಿಜಯನಗರ ಕಾಲುವೆಗಳ ಶಾಶ್ವತ ದುರಸ್ಥಿ ಯೋಜನೆಯಡಿ ಈ ಕಾಲುವೆಗಳನ್ನು ಸುಮಾರು 370 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆ ಮತ್ತು ಶನಿವಾರ ರಾತ್ರಿ ಸುರಿದ ಮಳೆಗೆ ಗುಡ್ಡದ ನೀರು ಕಾಲುವೆಗೆ ನುಗ್ಗಿದ್ದರಿಂದ ಕಾಲುವೆ ಹಲವೆಡೆ ಬಿರುಕು ಬಿಟ್ಟು ಪಕ್ಕದ ಗದ್ದೆ ಮತ್ತು ಭತ್ತದ ಸಸಿ ಮಡಿಗೆ ನೀರು ನುಗ್ಗಿದೆ. ಆ.01ರಂದು ಕಾಲುವೆ ನೀರು ಹರಿಸಲು ಜಲಸಂಪನ್ಮೂಲ ಇಲಾಖೆ ಸಿದ್ದತೆ ಮಾಡಿಕೊಂಡಿತ್ತು. ಈ ಮಧ್ಯೆ ಕಾಲುವೆ ಒಡೆದು ಹೋಗಿರುವುದರಿಂದ ಕಾಲುವೆಯನ್ನು ದುರಸ್ಥಿಗೊಳಿಸಿದ ನಂತರವೇ ನೀರು ಹರಿಸುವುದರಿಂದ ಭತ್ತದ ನಾಟಿ ಮಾಡುವ ಕಾರ್ಯ ವಿಳಂಭವಾಗುವ ಸಾಧ್ಯತೆ ಇದೆ.
ಕಾಮಗಾರಿ ಅವೈಜ್ಞಾನಿಕ: ಶಾಶ್ವತ ದುರಸ್ಥಿ ನೆಪದಲ್ಲಿ ಏಷಿಯನ್ ಬ್ಯಾಂಕ್ ನೆರವಿನಲ್ಲಿ ಜಲಸಂಪನ್ಮೂಲ ಇಲಾಖೆ ವಿಜಯನಗರ ಕಾಲುವೆಗಳ ಶಾಶ್ವತ ದುರಸ್ಥಿ ಕಾರ್ಯ ವೈಜ್ಞಾನಿಕವಾಗಿದೆ. ಆನೆಗೊಂದಿ ಭಾಗದಲ್ಲಿ ಗುಡ್ಡಪ್ರದೇಶದ ಮಧ್ಯೆ ಕಾಲುವೆ ಹರಿಯುತ್ತಿರುವುದರಿಂದ ಮಳೆಗಾಲದಲ್ಲಿ ಗುಡ್ಡದ ನೀರು ಕಾಲುವೆಯಲ್ಲಿ ಸೇರಿ ಕಾಲುವೆ ಒಡೆಯುವ ಸಾಧ್ಯತೆ ಮನಗಂಡು ವಿಜಯನಗರದ ಅರಸರು ತಂತ್ರಜ್ಞಾನ ಬಳಸಿ ಕಾಲುವೆ ನಿರ್ಮಿಸಿದ್ದರು. ಈಗ ಕಾಮಗಾರಿ ನಿರ್ವಹಿಸುವವರು ಅವೈಜ್ಞಾನಿಕ ವಿಧಾನಗಳನ್ನು ಅಳವಡಿಸಿರುವ ಕಾರಣ ಮಳೆಗಾಲದಲ್ಲಿ ಕಾಲುವೆ ಹೊಡೆಯುವಂತಾಗಿದೆ. ಸ್ಥಳೀಯ ರೈತರ ಸಲಹೆ ಪಡೆದು ಪುನಃ ಕಾಲುವೆ ನಿರ್ಮಿಸಬೇಕೆಂದು ಆನೆಗೊಂದಿ ರೈತ ಸಂಘದ ಅಧ್ಯಕ್ಷ ಸುದರ್ಶನ ವರ್ಮಾ ‘ಉದಯವಾಣಿ’ ಮೂಲಕ ಒತ್ತಾಯಿಸಿದ್ದಾರೆ.