ಹಾಳಾಗುತ್ತಿದೆ ನೆರೆ ಸಂತ್ರಸ್ತರಿಗೆ ಕೊಟ್ಟ ಧಾನ್ಯ-ಅಗತ್ಯ ವಸ್ತು
Team Udayavani, Oct 13, 2019, 1:13 PM IST
ಗಂಗಾವತಿ: ನೆರೆ ಸಂತ್ರಸ್ತರಿಗಾಗಿ ಜನತೆ ಕೊಟ್ಟ ದವಸಧಾನ್ಯ ಅಗತ್ಯ ವಸ್ತುಗಳನ್ನು ಅರ್ಹರಿಗೆ ತಲುಪಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಉಕದಲ್ಲಿ ಸಂಭವಿಸಿದ ನೆರೆಯಲ್ಲಿ ಸಾವಿರಾರು ನಿರಾಶ್ರಿತರಾಗಿದ್ದರು.
ನೆರೆ ಪೀಡಿತರಿಗೆ ಜನತೆ, ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು ಸ್ಪಂದಿಸಿ ಅಗತ್ಯ ವಸ್ತುಗಳನ್ನು ನೀಡಿದ್ದರು. ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕಿನ ಜನತೆ ನೆರೆ ಪೀಡಿತರಿಗೆ ತಲುಪಿಸುವಂತೆ ವಸ್ತುಗಳು ತಾಲೂಕು ಆಡಳಿತಕ್ಕೆ ನೀಡಿದ್ದರು. ಇವುಗಳನ್ನು ಸಾಮಾರ್ಥ್ಯ ಸೌಧದ ಕೋಣೆಗಳಲ್ಲಿ ಸಂಗ್ರಹಿಸಡಲಾಗಿತ್ತು. ಅಧಿಕಾರಿಗಳ ನಿರ್ಲಕ್ಷದಿಂದಾಗಿ ನೆರೆ ಪೀಡಿತರಿಗೆ ತಲುಪಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಸಂಗ್ರಹ ಮಾಡಲಾಗಿದ್ದ ಅಕ್ಕಿ ಸೇರಿ ಕೆಲ ದವಸಧಾನ್ಯಗಳು ಹಾನಿಗೊಂಡಿವೆ. ಇನ್ನೂ ಕೆಲವರು ಧಾನ್ಯಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ. ಶನಿವಾರ ಸಂಜೆ ಸಂಘಟನೆಗಳ ಮುಖಂಡರು ಖಚಿತ ಮಾಹಿತಿ ಮೇರೆಗೆ ಸಾಮಾರ್ಥ್ಯಸೌಧಕ್ಕೆ ಆಗಮಿಸಿ ಬಾಗಿಲು ತೆಗೆಸಿ ನೋಡಿದಾಗ ದವಸಧಾನ್ಯಗಳು ನಾಶವಾಗಿರುವ ಮಾಹಿತಿ ಗೊತ್ತಾಗಿದೆ. ಕೂಡಲೇ ನಿರ್ಲಕ್ಷ ವಹಿಸಿದ ಅಧಿ ಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಉಳಿದ ದವಸಧಾನ್ಯ, ಇತರೆ ವಸ್ತುಗಳನ್ನು ನೆರೆ ಪೀಡಿತರಿಗೆ ತಲುಪಿಸುವಂತೆ ಒತ್ತಾಯಿಸಲಾಯಿತು.