ಅನ್ಸಾರಿಗೆ ಕೈ ಟಿಕೆಟ್ ಬೇಡ ಬಿ.ಕೆ.ಹರಿಪ್ರಸಾದ್ ಗೆ ಕಾಂಗ್ರೆಸ್ ಮುಖಂಡರ ಮನವಿಯ ವಿಡಿಯೋ ವೈರಲ್
Team Udayavani, Apr 16, 2022, 6:26 PM IST
ಗಂಗಾವತಿ: ಈ ಭಾರಿ ಗಂಗಾವತಿ ಅಸೆಂಬ್ಲಿ ಕ್ಷೇತ್ರದ ಕೈ ಟಿಕೆಟ್ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಕೊಡದಂತೆ ಇತ್ತೀಚೆಗೆ ನಗರಕ್ಕೆ ಆಗಮಿಸಿದ ಕಾಂಗ್ರೆಸ್ ಹಿರಿಯ ಮುಖಂಡ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ಗುಪ್ತವಾಗಿ ಸಭೆ ನಡೆಸಿ ಕಾಂಗ್ರೆಸ್ ಪಕ್ಷ ಮುಖಂಡರು ಮತ್ತು ಅಲ್ಪಸಂಖ್ಯಾತ ಕೆಲ ಮುಖಂಡರು ಮನವಿ ಮಾಡಿದ ವಿಡೀಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯ ಕೆಲ ಮುಖಂಡರು ವೈರಲ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ತಲ್ಲಣ ಸೃಷ್ಠಿಸಿದ್ದಾರೆ.
ಮಾಜಿ ಸಂಸದ ಹಾಗೂ ಕಾಂಗ್ರೆಸ್ ಪಕ್ಷ ಹಿರಿಯ ಮುಖಂಡ ಎಚ್.ಜಿ.ರಾಮುಲು ನಿವಾಸಕ್ಕೆ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಇತ್ತೀಚೆಗೆ ಭೇಟಿ ನೀಡಿದಾಗ ಕಾಂಗ್ರೆಸ್ ಪಕ್ಷ ಕೆಲ ನಾಯಕ ಪತ್ರಿಕಾ ಮಾಧ್ಯಮದವರನ್ನು ದೂರವಿಟ್ಟು ಗುಪ್ತವಾಗಿ ಸಭೆ ನಡೆಸಿದ ಸಂದರ್ಭದಲ್ಲಿ ಈ ಭಾರಿಯ ಗಂಗಾವತಿ ಕ್ಷೇತ್ರದ ಚುನಾವಣೆ ಪಕ್ಷ ಗಂಭೀರವಾಗಿ ತೆಗೆದುಕೊಳ್ಳಬೇಕು. ಬಿಜೆಪಿ ಸಂಘ ಪರಿವಾರದವರು ಕಿಷ್ಕಿಂದಾ ಅಂಜನಾದ್ರಿ ಹಾಗೂ ಉತ್ತರ ಪ್ರದೇಶದ ಅಯೋಧ್ಯೆಯಂತೆ ಮಾಡಲು ಈಗಾಗಲೇ ಸಿದ್ದತೆ ನಡೆಸಿದ್ದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಸೋಲು ಖಚಿತವಾಗಿದೆ. ಅವರನ್ನು ಎಂಎಲ್ಸಿ ಮಾಡಿ ಅಥವಾ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಅಸೆಂಬ್ಲಿ ಟಿಕೆಟ್ ಕೊಡುವುದು ಬೇಡ. ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಅವರಿಗೆ ಟಿಕೆಟ್ ಘೋಷಣೆ ಮಾಡಬೇಕು. ಶ್ರೀನಾಥ ಅವರಿಗೆ ದಲಿತರು ಹಿಂದುಳಿದವರು ಅಲ್ಪಸಂಖ್ಯಾತರ ಜತೆ ಒಳ್ಳೆಯ ಒಡನಾಟವಿದೆ. ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಯಲ್ಲಿ ಕಾಂಗ್ರೆಸ್ಗಾಗಿ ಎಚ್ಆರ್ಜಿ ಕುಟುಂಬ ಕೆಲಸ ಮಾಡಿದೆ. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಆರ್ಜಿ ಕುಟುಂಬವನ್ನು ಹಾಗೂ ಅವರ ಆಪ್ತರನ್ನು ಮೂಲೆಗುಂಪು ಮಾಡಿದ್ದರು. ಆದ್ದರಿಂದ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಶ್ರೀನಾಥ ಅವರಿಗೆ ಟಿಕೇಟ ಕೊಡುವ ಮೂಲಕ ಪಕ್ಷವನ್ನು ಪುನಶ್ಚೇತನಗೊಳಲಿದೆ ಎಂದು ಬೇಡಿಕೆ ಇಟ್ಟಿದ್ದಾರೆ.
ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಧ್ಯ ಪ್ರವೇಶ ಮಾಡಿ ಕಾಂಗ್ರೆಸ್ನಲ್ಲಿದ್ದುಕೊಂಡು ಮುಸ್ಲಿಂ, ದಲಿತ ಹಿಂದುಳಿದವರು ಮುಂದುವರಿದವರೆಂದು ಮಾತನಾಡಿದರೆ ನನಗಿಷ್ಟವಾಗಲ್ಲ. ಕಾಂಗ್ರೆಸ್ ಎಲ್ಲರ ಪಕ್ಷವಾಗಿದೆ. ಈ ಹಿಂದೆ ಜಿ.ಪಂ. ಚುನಾವಣೆಯಲ್ಲಿ 5 ಕ್ಷೇತ್ರದ ಟಿಕೆಟ್ ಕೊಡುವಾಗ ಜಾತಿ ನೋಡದೇ ಶಿಫಾರಸ್ಸು ಮಾಡಿ ಟಿಕೆಟ್ ಕೊಡಿಸಲಾಗಿದೆ. ಕಾಂಗ್ರೆಸ್ ತತ್ವ ಸಿದ್ದಾಂತದ ಪಕ್ಷ ಅಲ್ಪಸಂಖ್ಯಾತರೂ ಸೇರಿ ಶೋಷಿತರು ಬಡವರ ಪರವಾಗಿ ಪಕ್ಷವಾಗಿದೆ ಹಿರಿಯ ಮುಖಂಡರಾದ ಎಚ್.ಜಿ.ರಾಮುಲು ನೇತೃತ್ವದಲ್ಲಿ ಮೂರು ಜಿಲ್ಲೆಯಲ್ಲಿ ಪಕ್ಷ ಪುನಹ ಬಲವರ್ಧನೆಯಾಗಲಿದೆ ಎಂದು ಕಾರ್ಯಕರ್ತರಿಗೆ ಬುದ್ದಿ ಹೇಳಿದ ವಿಡಿಯೋ ವೈರಲ್ ಆಗಿದೆ.ಈ ವಿಡೀಯೋವನ್ನು ಬಿಜೆಪಿಯವರು ವಾಟ್ಸಪ್ ಗೆ ಹರಿಬಿಟ್ಟಿದ್ದಾರೆ.
ಈ ವಿಡಿಯೋದಲ್ಲಿ ಕಾಂಗ್ರೆಸ್ ಮುಖಂಡ ರಘು ಗುಜ್ಜಲ್, ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ, ಕಾಂಗ್ರೆಸ್ ಪಕ್ಷದ ವಡ್ರಟ್ಟಿ ವೀರಭದ್ರಪ್ಪ ನಾಯಕ, ನಗರಸಭೆ ಸದಸ್ಯ ಉಸ್ಮಾನ ಬಿಚ್ಚಗತ್ತಿ, ಅನ್ವರ್ ಟೇಲರ್, ಜಿನ್ನಾ, ರಜಿಯಾಬೇಗಂ, ಶಂಕರ್ ಉಂಡಾಳೆ, ಆಯೂಬ್ ಖಾನ್, ನ್ಯಾಯವಾದಿ ಹಾಸಿಮುದ್ದೀನ್ ಸೇರಿ ಅನೇಕರಿದ್ದರು.