ಬೇಡಿಕೆ ಈಡೇರಿಸದಿದ್ದರೆ ಸೆ.5ಕ್ಕೆ ವಿಧಾನಸೌಧ ಚಲೋ
Team Udayavani, Jul 8, 2019, 3:40 PM IST
ಕುಷ್ಟಗಿ: ಶಿಕ್ಷಕರ ಬೇಡಿಕೆ ಈಡೇರಿಸದೇ ಇದ್ದಲ್ಲಿ ಜು. 9ರಂದು ಎಲ್ಲಾ ಶಾಲೆ ಬಂದ್ ಮಾಡಿ ಪ್ರತಿಭಟಿಸಲಾಗುತ್ತಿದೆ. ಇದಕ್ಕೂ ಸ್ಪಂದಿಸದಿದ್ದರೆ ಸೆ. 5ರಂದು ನಡೆಯುತ ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಗುನ್ನಾಳ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 1ರಂದು ಸಿಎಂ ಕುಮಾರಸ್ವಾಮಿ ಅವರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಗಿತ್ತು. ಸದರಿ ಬೇಡಿಕೆಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಮೇ 30ರಂದು ಪ್ರಾಥಮಿಕ ಶಿಕ್ಷಕರ ಕಾರ್ಯಕಾರಿಣಿ ಸಭೆಯಲ್ಲಿ ಮೂರು ಹಂತದ ಹೋರಾಟಕ್ಕೆ ನಿರ್ಣಯಿಸಲಾಗಿದೆ. ಈಗಾಗಲೇ ಒಂದು ಹಂತದ ಹೋರಾಟ ನಡೆದಿದ್ದು, ಎರಡನೇ ಹಂತದ ಹೋರಾಟ ಜು. 9ರಂದು ಎಲ್ಲಾ ಶಾಲೆಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿಗೆ ಹಕ್ಕೋತ್ತಾಯ ಮಂಡಿಸಲಾಗುತ್ತಿದೆ. ಇದಕ್ಕೆ ಸ್ಪಂದಿಸದಿದ್ದರೆ ಸೆ. 5ರಂದು ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ, ವಿಧಾನಸೌಧ ಚಲೋ ಚಳವಳಿ ಆರಂಭಿಸುತ್ತಿರುವುದಾಗಿ ಮಾಹಿತಿ ನೀಡಿದರು.
ಕೊಪ್ಪಳ ಜಿಲ್ಲೆಯಾಗಿ 22 ವರ್ಷವಾದರೂ ಗುರು ಭವನ ನಿರ್ಮಿಸಲು ಸಾಧ್ಯವಾಗಿಲ್ಲ. ಇದಕ್ಕೆ ಸೂಕ್ತ ಜಾಗೆಯ ಕೊರತೆ ಎದುರಾಗಿದ್ದು, ಈ ಕೊರತೆ ನೀಗಿಸಲು ಜನಪ್ರತಿನಿಧಿಗಳು ಮುಂದಾಗಿಲ್ಲ. ಈಗಾಗಲೇ ಗುರು ಭವನಕ್ಕೆ ಜಿಲ್ಲೆಯ ಶಿಕ್ಷಕರ 1 ದಿನದ ವೇತನ ನೀಡಿದ್ದು, ಬೇಕಾದರೆ ಇನ್ನೂ ಒಂದು ದಿನದ ವೇತನ ನೀಡಲು ಸಿದ್ಧರಿದ್ದೇವೆ ಎಂದರು.
ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಪೈಕಿ, ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ವೈದ್ಯಕೀಯ ಬಿಲ್ ಪಾವತಿ ವಿಳಂಬವಾಗುತ್ತಿದೆ. ಡಿಸಿ ಅಧ್ಯಕ್ಷತೆಯಲ್ಲಿರುವ ಈ ಸಮಿತಿ ರದ್ದುಗೊಳಿಸಬೇಕು. ಬೇರೆ ಜಿಲ್ಲೆಗಳಲ್ಲಿರದ ಸಮಿತಿ ಇಲ್ಲೇಕೆ? ಶಿಕ್ಷಕರ ವರ್ಗಾವಣೆಯಲ್ಲಿ ನಿರ್ಬಂಧಗಳನ್ನು ಹೇರದೇ ವರ್ಗಾವಣೆಯಲ್ಲಿ ಸಡಿಲಿಕೆ ಇರಲಿ. ಎಲ್ಕೆಜಿ, ಯುಕೆಜಿ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಆರಂಭಿಸಬೇಕು. 6ನೇ ವೇತನ ಆಯೋಗದ ಶಿಫಾರಸು ಪ್ರಕಾರ ಮುಖ್ಯ ಶಿಕ್ಪ್ಷಕರಿಗೆ ಕೇವಲ ಒಂದೇ ಬಡ್ತಿ ನೀಡಿದರಷ್ಟೇ ಸಾಲದು, ಶಿಕ್ಷಕರಿಗೆ ಸಿಗುವ ವರ್ಷಗಳ ಬಡ್ತಿ ನೀಡಬೇಕೆಂದು ಆಗ್ರಹಿಸಿದರು.