ಕಲ್ಲಹಳ್ಳಿ: ಸೇತುವೆ ಗೋಡೆ ಕುಸಿತ
Team Udayavani, Jun 11, 2020, 7:06 AM IST
ದೋಟಿಹಾಳ: ವಾರಗಳ ಹಿಂದೆ ಸುರಿದ ಮಳೆಯಿಂದಾಗಿ ನವನಗರದ ಹತ್ತಿರದ ತಾವರಗೇರಾ-ಮುದೇನೂರು ಗ್ರಾಮಗಳ ಮುಖ್ಯ ರಸ್ತೆಯ ಹಳೆ ಸೇತುವೆಯ ಒಂದು ಭಾಗ ಕುಸಿದಿದ್ದು, ಸಂಚಾರಕ್ಕೆ ತೊಂದರೆಯಾಗಿದೆ.
ಕಳೆದ 3-4 ತಿಂಗಳ ಹಿಂದೆ ಕೆಕೆಆರ್ಡಿಸಿ ಯೋಜನೆಯಲ್ಲಿ ರಸ್ತೆ ಅಗಲೀಕರಣ ವೇಳೆ ಹೊಸ ಸೇತುವೆ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಆದರೆ ಹೊಸ ಸೇತುವೆ ನಿರ್ಮಾಣ ಮಾಡದೇ ಹಾಗೆ ಬಿಟ್ಟಿದ್ದಾರೆ. ಕಳೆದ ವಾರ ಮಳೆಗೆ ಸೇತುವೆ ಒಂದು ಭಾಗ ಕುಸಿದಿದೆ.
ಇನ್ನೊಂದು ಮಳೆ ಬಂದರೇ ಸೇತುವೆ ಸಂಪೂರ್ಣ ಕುಸಿಯುವ ಸಾಧ್ಯತೆ ಇದೆ. ವಾಹನ ಸವಾರರು ಆತಂಕದಿಂದಲೇ ಸೇತುವೆ ಮೇಲೆ ಸಂಚರಿಸುತ್ತಿದ್ದಾರೆ. ಇಷ್ಟಾದರೂ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಆಗ್ರಹ: ಕಲ್ಲಹಳ್ಳ ಸೇತುವೆ ಸದ್ಯ ಸಂಪೂರ್ಣ ಶಿಥಿಲಗೊಂಡಿದೆ. ಹಲವು ಬಾರಿ ಸೇತುವೆಯ ಮೇಲೆ ಹಾಗೂ ಸೇತುವೆ ಅಕ್ಕಪಕ್ಕದ ಮಣ್ಣು ಕುಸಿದು ಬಿದ್ದಿದೆ. ಇದರಿಂದ ಸೇತುವೆ ಅಂಚಿನ ಭಾಗದಲ್ಲಿ ದೊಡ್ಡ ದೊಡ್ಡ ತೆಗ್ಗುಗಳು ಬಿದ್ದಿದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಶಿಥಿಲಗೊಂಡಿರುವ ಸೇತುವೆಯನ್ನು ತೆರವುಗೊಳಿಸಿ, ಹೊಸ ಸೇತುವೆ ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.