ಕುಡತಿನಿ ಉಷ್ಣ ಸ್ಥಾವರ ಘಟಕದ ಪೈಪ್ಲೈನ್ ಅಳವಡಿಕೆಗೆ ವಿರೋಧ
ಆಲಮಟ್ಟಿ ಜಲಾಶಯದಿಂದ ನೀರು ಪೂರೈಕ
Team Udayavani, May 4, 2021, 7:54 PM IST
ಕುಷ್ಟಗಿ: ಆಲಮಟ್ಟಿ ಜಲಾಶಯದಿಂದ ಕುಷ್ಟಗಿ ಮೂಲಕ ಬಳ್ಳಾರಿ ಜಿಲ್ಲೆಯ ಕುಡತಿನಿ ಉಷ್ಣ ಸ್ಥಾವರ ಘಟಕದ ಬೃಹತ ಗಾತ್ರದ ಪೈಪ್ಲೈನ್ ಹಾಕಲು ಕುಷ್ಟಗಿಯಲ್ಲಿ ರೈತರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಈಗಾಗಲೇ ಪೈಪ್ಲೈನ್ ಕುಷ್ಟಗಿ ಸೀಮಾ ಪ್ರದೇಶದಲ್ಲಿ ಎಲ್ ಆ್ಯಂಡ್ ಟಿ ಕಂಪನಿಯವರು ರೈತರ ಒಪ್ಪಂದ ಮೇರೆಗೆ ಜಮೀನಿನ ಅಡಿಯಲ್ಲಿ ಪ್ರತಿ ಪೈಪ್ಗೆ 12 ಸಾವಿರ ರೂ. ನೀಡುತ್ತಿದ್ದು, ಒಪ್ಪಂದನ್ವಯ ಪೈಪ್ಲೈನ್ಗಾಗಿ ಹಿಟಾಚಿಯಿಂದ ನೆಲ ಅಗೆಯುವ ಹಾಗೂ ಅದರ ಹಿಂದೆ ಪೈಪ್ ಜೋಡಣಾ ಕಾರ್ಯ ಭರದಿಂದ ಸಾಗಿದೆ. ಈ ಪೈಪ್ಲೈನ್ಗೆ ಒಪ್ಪದ ರೈತರು ಪಕ್ಕದ ರೈತರನ್ನು ಸಂಪರ್ಕಿಸಿ, ಅವರ ರೈತರ ಮನವೊಲಿಸಲಾಗುತ್ತಿದೆ. ಇನ್ನೊಂದೆಡೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಪೈಪ್ಲೈನ್ ಹಾಕುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಒಪ್ಪದವರಿಗೆ ಸರ್ಕಾರದ ಕೆಲಸ ಎಂದು ಹೇಳುವ ಮೂಲಕ ಕಾಮಗಾರಿ ಮುಂದುವರಿಸುವ ಪ್ರಯತ್ನಗಳು ನಡೆದಿವೆ
. ಕುಷ್ಟಗಿಯ ತಾವರಗೇರಾ ರಸ್ತೆಯ ನಿರಂಜನ್ ಅವರ ಜಮೀನಿನಲ್ಲಿ ಪೈಪ್ಲೈನ್ ಅಳವಡಿಸುತ್ತಿದ್ದು, ಪೈಪ್ಲೈನ್ನ್ನು ಕೇವಲ ಏಳೆಂಟು ಅಡಿ ಆಳದಲ್ಲಿ ಹಾಕಲಾಗುತ್ತಿದೆ. ಇದರಿಂದ ಮುಂದೆ ಉಳುಮೆಗೆ ತೊಂದರೆಯಾಗುತ್ತದೆ. 10 ವರ್ಷಗಳ ಹಿಂದೆ ಜಿಂದಾಲ್ ಪೈಪ್ಲೈನ್ ಇದಕ್ಕಿಂತ ಆಳವಾಗಿ ಹಾಕಿದ್ದರೂ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದರು.
ಅದೇ ರಾಗ ಅದೇ ಹಾಡು: ಆಲಮಟ್ಟಿ ಜಲಾಶಯದಿಂದ ಈಗಾಗಲೇ ಹಾಕಿರುವ ಪೈಪ್ ಲೈನ್ನಿಂದ ಎರೆಡು ವರ್ಷಗಳಲ್ಲಿ ಐದಾರು ಬಾರಿ ನೀರು ಸೋರಿಕೆಯಾಗಿದೆ. ಇದರಿಂದ ರೈತರ ಫಸಲು ಹಾಗೂ ಮಣ್ಣು ಹಾಳಾಗಿದೆ. ಈ ರೀತಿಯ ಹಾನಿಗೆ ಸಂಬಂ ಧಿಸಿ ಕಂಪನಿಯವರು ಕೂಡಲೇ ಸ್ಪಂ ಸದೇ ನಿರ್ಲಕ್ಷಿಸಿದ್ದಾರೆ. ಇದರಿಂದ ಜಿಂದಾಲ್ ಕಂಪನಿ ವಿರುದ್ಧದ ಆಕ್ರೋಶ ಇನ್ನು ತಣ್ಣಗಾಗಿಲ್ಲ. ಈ ಮಧ್ಯೆ ಇದೀಗ ಕುಡಿತಿನಿ ಉಷ್ಣಸ್ಥಾವರಕ್ಕೆ ಪೈಪ್ಲೈನ್ ಹಾಕಲು ಮುಂದಾಗಿರುವ ಎಲ್ ಆ್ಯಂಡ್ ಟಿ ಕಂಪನಿಯವರಿಗೆ ರೈತರು ತಮ್ಮ ಜಮೀನಿನಲ್ಲಿ ಬೃಹತ್ ಗಾತ್ರದ ಪೈಪ್ಲೈನ್ ಹಾಕಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಒಂದು ವೇಳೆ ಅಧಿಕಾರಿಗಳ ಮೂಲಕ ಬಲವಂತವಾಗಿ ಪೈಪ್ ಹಾಕಲು ಮುಂದಾದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ರೈತರು ತಿಳಿಸಿದ್ದಾರೆ.