ಹಳ್ಳದ ಹಿನ್ನೀರು ಹೆಚ್ಚಳದಿಂದ ಗ್ರಾಮದ ಸಂಪರ್ಕವನ್ನೇ ಕಡಿದುಕೊಂಡ ಗದ್ದೇರಹಟ್ಟಿ ರಸ್ತೆ
Team Udayavani, Oct 11, 2021, 3:50 PM IST
ಕುಷ್ಟಗಿ : ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಯ ಕಾಡಂಚಿನ ಗದ್ದೇರಹಟ್ಟಿ ಗ್ರಾಮದ ಏಕೈಕ ರಸ್ತೆ ಹಳ್ಳದ ಹಿನ್ನೀರು ಗ್ರಾಮದ ಸಂಪರ್ಕವನ್ನೇ ಕಡಿದುಕೊಂಡಿದೆ.
ತಾವರಗೇರಾ ರಾಯನ ಕೆರೆ ಭರ್ತಿಯಾಗಿ ಚಟ್ನಿಕೆರೆಯ ಮೂಲಕ ಹರಿಯುವ ಕನ್ನಾಳ ಹಳ್ಳ ಪುರ ಕೆರೆ ಸೇರುತ್ತದೆ. ಈ ಕೆರೆ ಪುರ ಕೆರೆ ಸೇರುವ ಸಂದರ್ಭದಲ್ಲಿ ಗುಡ್ಡಕ್ಕೆ ಒತ್ತಿ ನಿಲ್ಲುವ ಹಳ್ಳದ ನೀರು ಗದ್ದೇರಹಟ್ಟಿ ಸಂಪರ್ಕಿಸುವ ರಸ್ತೆಯನ್ನು ಅತಿಕ್ರಮಿಸುತ್ತದೆ. ಪ್ರತಿ ಬಾರಿಯೂ ಹಳ್ಳದ ಹಿನ್ನೀರು ರಸ್ತೆಯನ್ನು ಮುಳುಗಿಸುತ್ತಿದ್ದು ಜನ ಸಂಚಾರ ಸ್ಥಗಿತಗೊಳಿಸುತ್ತದೆ. ದೊಡ್ಡವರು ಹೇಗೋ ನೀರು ದಾಟುತ್ತಿದ್ದು ಮಕ್ಕಳಿಗೆ ಸಮಸ್ಯೆಯಾಗುತ್ತಿದ್ದು ಶಾಲೆಗೆ ಹೋಗುವ ಮಕ್ಕಳು ಪಾಲಕರನ್ನು ಆಶ್ರಯಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಪಾಲಕರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದನ್ನು ಬಿಟ್ಟು ಮಕ್ಕಳನ್ನು ಹಿನ್ನೀರು ದಾಟಿಸುವುದು ಪುನಃ ಕರೆ ತರುವುದು ಹೆಚ್ಚುವರಿ ಕೆಲಸವಾಗಿದೆ. ಈ ಪ್ರದೇಶದ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದ್ದು ಯಾವುದೇ ಕಟ್ಟಡ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿಯಾಗಿದೆ. ಈ ಕುರಿತು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್, ಗದ್ದೇರಹಟ್ಟಿಯಲ್ಲಿ ವಾಸವಿರುವ ಗೊಲ್ಲರ ಅಳಲು ಕೇಳುವವರಿಲ್ಲ. ಭರವಸೆ ನೀಡುತ್ತಿದ್ದಾರೆ ಸಮಸ್ಯೆಗೆ ಪರಿಹಾರ ಮರೀಚಿಕೆಯಾಗಿದೆ.
ಗದ್ದೇರಹಟ್ಟಿ ಸಂಪರ್ಕಿಸುವ ರಸ್ತೆಯಲ್ಲಿ ಕನ್ನಾಳ ಹಳ್ಳದ ಹಿನ್ನೀರು ಅಡ್ಡಗಟ್ಟಿದರೆ ಸಮಸ್ಯೆಗೆ ಕಾರಣವಾಗುತ್ತಿದ್ದು, ಈ ರಸ್ತೆಯಲ್ಲಿ ಬ್ರಿಜ್ ಕಮ್ ಬ್ಯಾರೇಜ್, ಮಿನಿ ಸೇತುವೆ ನಿರ್ಮಿಸಬೇಕಿರುವುದು ಅಗತ್ಯವಾಗಿದೆ. ಇಲ್ಲವಾದಲ್ಲಿ ಹಳ್ಳದ ಹಿನ್ನೀರು ಬಂದಾಗೊಮ್ಮೆ ಶಾಲೆಗೆ ಗೈರಾಗುವುದು ಅನಾರೋಗ್ಯ ಸಂದರ್ಭದಲ್ಲಿ ಅಸ್ಪತ್ರೆ ಹೋಗುವುದು ಕಷ್ಟವಾಗುತ್ತಿದ್ದು ಈ ಸಮಸ್ಯೆಗೆ ಜಿಲ್ಲಾಡಳಿತ ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಉಮೇಶ ಯಾದವ್ ಆಗ್ರಹಿಸಿದ್ದಾರೆ.