ಕಾಲೇಜ್ ಕಟ್ಟಡ ಕಾಮಗಾರಿಗೆ ಭೂಮಿಪೂಜೆ
Team Udayavani, Oct 5, 2019, 4:35 PM IST
ಕೊಪ್ಪಳ: ತಾಲೂಕಿನ ದದೇಗಲ್ ಸಮೀಪದ ಸರಕಾರಿ ಡಿಪ್ಲೊಮಾ ಕಾಲೇಜಿನಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ ಕಟ್ಟಡ ಹಾಗೂ ವಿದ್ಯಾರ್ಥಿಗಳಿಗೆ ಲ್ಯಾಬ್ ಕಟ್ಟಡ ಕಾಮಗಾರಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಆಧುನಿಕ ಶಿಕ್ಷಣದಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಪ್ರಾಧಾನ್ಯತೆ ಇದ್ದು, ವಿದ್ಯಾರ್ಥಿಗಳು ಐಟಿಐ, ಡಿಪ್ಲೊಮಾ ವ್ಯಾಸಂಗ ಮುಗಿಸಿ ಇಂಜನಿಯರಿಂಗ್ ಕೋರ್ಸ್ಗೆ ಹೋಗಲು ಅನೇಕ ಅವಕಾಶಗಳಿವೆ. ಉತ್ತಮ ಫಲಿತಾಂಶ ಹೊಂದಿದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಮೂಲಕವೇ ಉದ್ಯೋಗ ಅವಕಾಶ ಕಲ್ಪಿಸಲಾಗುವುದು. ಜಿಲ್ಲೆಯಲ್ಲಿ ಈಗಾಗಲೇ ಇಂಜನಿಯರಿಂಗ್ ಕಾಲೇಜು ಪ್ರಾರಂಭಗೊಂಡಿದ್ದು, ಶೀಘ್ರವೇ ಗಂಗಾವತಿಯಲ್ಲಿ ಸರಕಾರಿ ಇಂಜನಿಯರಿಂಗ್ ಕಾಲೇಜು ಪ್ರಾರಂಭಗೊಳ್ಳಲಿದೆ ಎಂದರು.
ಈ ವೇಳೆ ಜಿಪಂ ಮಾಜಿ ಸದಸ್ಯ ಪ್ರಸನ್ನ ಗಡಾದ, ನಗರಸಭೆ ಸದಸ್ಯ ಅಕ್ಬರ್ ಪಾಷಾ ಪಲ್ಟನ್, ಪ್ರಾಚಾರ್ಯರ ವಾದಿರಾಜಮಠ, ಮುಖಂಡರಾದ ಗಾಳೆಪ್ಪ ಪೂಜಾರ, ಅಂದಾನಸ್ವಾಮಿ, ಮೌಲಾಹುಸ್ಸೇನ ಕೋಳೂರು, ವಕ್ತಾರ ರವಿ ಕುರಗೋಡ ಯಾದವ್, ಕಾಲೇಜು ಉಪನ್ಯಾಸಕರು ಸೇರಿ ಇತರರು ಪಾಲ್ಗೊಂಡಿದ್ದರು.