ಸಂಗಾಪೂರ: ಬಾಲಕನ ಮೇಲೆ ಚಿರತೆ ದಾಳಿ; ತೀವ್ರ ಗಾಯ
Team Udayavani, Dec 12, 2020, 9:30 PM IST
ಗಂಗಾವತಿ: ಮನೆಯ ಹತ್ತಿರ ಆಟವಾಡುತ್ತಿದ್ದ 09 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ತೀವ್ರ ಗಾಯಗೊಳಿಸಿದ ಘಟನೆ ತಾಲೂಕಿನ ಸಂಗಾಪೂರ ಶ್ರೀರಂಗದೇವರಾಯಲು ನಗರದಲ್ಲಿ ಶನಿವಾರ ಸಂಜೆ ಜರುಗಿದೆ.
ಶ್ರೀರಂಗದೇವರಾಯಲು ನಗರದ ಗುಡ್ಡದ ಪಕ್ಕದ ಮನೆಯ ಹತ್ತಿರ ಇರುವ ಕುರಿ ಹಟ್ಟಿಯಲ್ಲಿ ಆಟವಾಡುತ್ತಿದ್ದ ಆಂಜನೇಯ ತಂದೆ ರಾಜಪ್ಪ (09) ಎಂಬ ಬಾಲಕನ ಮೇಲೆ ಚಿರತೆ ದಾಳಿ ಮಾಡಿ ಹೊತ್ತುಕೊಂಡು ಹೋಗುವಾಗ ಬಾಲಕನ ತಂದೆ ಹಾಗೂ ಇತರೆ ಜನರ ಗುಂಪು ಗದ್ದಲ ಮಾಡಿದಾಗ ಬಾಲಕನನ್ನು ಬಿಟ್ಟು ಹೋಗಿದೆ.
ಬಾಲಕನನ್ನು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಶಾಸಕ ಪರಣ್ಣ ಮುನವಳ್ಳಿ ಅರಣ್ಯ ಸಚಿವ ಆನಂದಸಿಂಗ್ ಅವರಿಗೆ ಮೊಬೈಲ್ ಮೂಲಕ ಮಾತನಾಡಿ ಚಿರತೆ ಸೆರೆ ಹಿಡಿಯಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ.ರೇಣುಕಾ, ಪಿಐ ವೆಂಕಟಸ್ವಾಮಿ,ಡಾ.ಈಶ್ವರ ಸವಡಿ ಅರಣ್ಯ ಇಲಾಖೆಯ ರಾಮಣ್ಣ ಇದ್ದರು.