ಲೇಖಕ ತ್ರಿಕಾಲ ಜ್ಞಾನಿಯಾಗಿರಲಿ: ಬರಗೂರ
ಲೇಖಕರಿಗೆ ಸಾಮಾಜಿಕ ಬದ್ಧತೆ-ಹೊಣೆ ಅಗತ್ಯ
Team Udayavani, Apr 18, 2022, 5:36 PM IST
ಕೊಪ್ಪಳ: ನಿಜವಾದ ಲೇಖಕ ತ್ರಿಕಾಲ ಜ್ಞಾನಿಯಾಗಿರಬೇಕು. ಭೂತವನ್ನು ಅರ್ಥ ಮಾಡಿಕೊಂಡು ವರ್ತಮಾನದ ವಿವೇಕದಿಂದ ಭೂತವನ್ನು ವಿಶ್ಲೇಷಿಸಬೇಕು. ಭೂತದ ಅನುಭವದಿಂದ ವರ್ತಮಾನದ ವಿವೇಕ ಕಂಡುಕೊಳ್ಳಬೇಕು. ಈ ಎರಡು ವಿವೇಕಗಳಿಂದ ಭವಿಷ್ಯದ ಬೆಳಕನ್ನು ಕಾಣಬೇಕು ಎಂದು ಚಿಂತಕ, ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಹೇಳಿದರು.
ಭಾಗ್ಯನಗರದ ಬಾಲಾಜಿ ಪಂಕ್ಷನ್ ಹಾಲ್ನಲ್ಲಿ ಬೆಟ್ಟದೂರು ಅಲ್ಲಮ ಹಾಗೂ ಅನಿಮಲ್ ಫಾರ್ಮ್ ಎನ್ನುವ ಎರಡು ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ನಿಜವಾದ ಲೇಖಕನು ಈ ಎರಡು ವಿವೇಕಗಳಿಂದ ಭವಿಷ್ಯದ ಬೆಳಕು ಕಾಣಬೇಕು. ಅಲ್ಲದೇ ಭೂತ, ವರ್ತಮಾನ, ಭವಿಷ್ಯದ ವಿವೇಕ ಮತ್ತು ಜ್ಞಾನ ಇರಬೇಕಾಗಿದೆ. ಎಲ್ಲಿ ರಾಜಕಾರಣ ಸೋಲುತ್ತದೆಯೋ ಅಲ್ಲಿ ಸಾಂಸ್ಕೃತಿಕ ಪ್ರಜ್ಞೆ ಎಚ್ಚೆತ್ತುಕೊಳ್ಳಬೇಕು. ಅಂತಹ ಕೆಲಸ ಕನ್ನಡದ ಸಾಂಸ್ಕೃತಿಕ ವಲಯ ಸಾವಿರಾರು ವರ್ಷಗಳಿಂದ ಮುನ್ನಡೆಸಿಕೊಂಡು ಬಂದಿದೆ. ನಾವು ಅದನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಲೇಖಕರಿಗೆ ಸಾಮಾಜಿಕ ಬದ್ಧತೆ, ಜವಾಬ್ದಾರಿ ಬೇಕಿದೆ ಎಂದರು.
ಭೂತ ಮತ್ತು ವರ್ತಮಾನಗಳ ನಡುವೆ ನಡೆಯುವ ಸಂವಹನವೇ ನಿಜವಾರ ಚರಿತ್ರೆಯಾಗಿದೆ. ಆಯಾ ಕಾಲಘಟ್ಟದಲ್ಲಿ ಆಯಾ ಸ್ವರೂಪಕ್ಕೆ ಅನುಗುಣವಾಗಿ ಬಂಡಾಯ ಪ್ರಜ್ಞೆ ಬೆಳೆದಿದೆ. ಬಂಡಾಯ ಎನ್ನುವುದು ಹೊಡಿ, ಬಡಿ, ಕಡಿಯಲ್ಲ. ಅದೊಂದು ಹಿಂಸೆಯಲ್ಲ, ಇಂದು ಹಿಂಸೆಯನ್ನು ಪ್ರಚೋದಿಸುವ ಮಾತುಗಳು ಕೇಳಿ ಬರುತ್ತಿವೆ. ಹಿಂಸೆಯೂ ಕಾಣುತ್ತಿದೆ. ಮಾತು ಮಲೀನವಾಗಿರುವ ಸಂದರ್ಭದಲ್ಲಿ ನಾವು ನಿಂತಿದ್ದೇವೆ. ಯಾವ ಮಾನವೀಯತೆಯ ಸ್ಪರ್ಶ ಇರುವುದಿಲ್ಲವೋ? ಯಾವ ಮಾತಿಗೆ ಸಹಿಷ್ಣತೆಯ ನಿಜವಾದ ಆಯಾಮ ಇರುವುದಿಲ್ಲವೋ? ಯಾವ ಮಾತಿಗೆ ಸಮಾನತೆಯ ಮಾತಿಗೆ ಮುನ್ನೋಟ ಇರುವುದಿಲ್ಲವೋ? ಅವೆಲ್ಲವೂ ಮಲೀನತೆಯ ಮಾತುಗಳು ಎಂದರು.
ಇಂದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಿವಿಗಳಿಗಿಂತ ನಾಲಿಗೆ ಉದ್ದವಾಗಿದೆ. ಆದರೆ ವಾಸ್ತವದ ಪ್ರಜಾಪ್ರಭುತ್ವದಲ್ಲಿ ಕಿವಿಗಳು ತೆರೆದುಕೊಂಡಿರಬೇಕು. ನಾಲಿಗೆಯಲ್ಲ. ನಾಲಿಗೆಯನ್ನು ಎಷ್ಟು ಬೇಕೋ ಅಷ್ಟು ಬಳಸಬೇಕು. ಇಂದು ವಿಷ ಕಾರುವ ಕೆಲಸ ಜಾಸ್ತಿಯಾಗುತ್ತಿದೆ. ಏನು ಮಾತನಾಡಬಾರದು ಅದನ್ನು ಮಾತನಾಡುತ್ತಿದ್ದಾರೆ. ಮಾನವೀಯ ಸಮಾಜದ ನಿರ್ಮಾಣ ಬೇಕಾಗಿದೆ ಎಂದರು.
ಇಂದು ಜಾತಿ, ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಸಂಘರ್ಷ ನಡೆದಿದೆ. ಪ್ರಜಾಪ್ರಭುತ್ವ ಇಂದು ಮತಪ್ರಭುತ್ವವಾಗಿ ರೂಪಾಂತರಗೊಂಡಿದೆ. ಓಟಿಗಾಗಿ ಏನಾದರೂ ಮಾಡುತ್ತೇವೆ ಎನ್ನುವಂತ ಸಮಾಜದಲ್ಲಿ ನಾವಿದ್ದೇವೆ. ಓಟ್ ಒಂದೇ ಮಾನದಂಡವಲ್ಲ. ಪ್ರಜಾಪ್ರಭುತ್ವದಲ್ಲಿ ಓಟ್ ಒಂದು ಮಾನದಂಡವಷ್ಟೇ. ಇದು ಖಳನಾಯಕರ ಕಾಲವಾಗಿದೆ. ಪ್ರತಿ ನಾಯಕರ ಕಾಲವಲ್ಲ ಎಂದರು.
ಶ್ರೇಣಿಕೃತ ಸಮಾಜದಲ್ಲಿ ಶೋಷಣೆಗೆ ಒಳಗಾಗಿದ್ದವರೇ ಬಂಡಾಯದ ವ್ಯವಸ್ಥೆಗೆ ಬರುವುದು. ದಲಿತರು, ಮಹಿಳೆಯರು ಬೇರೆ ಬೇರೆ ಕ್ಷೇತ್ರಗಳಿಗೆ ಬರುವುದೇ ಬಂಡಾಯದ ಪ್ರಜ್ಞೆಯಾಗಿದೆ. 20ನೇ ಶತಮಾನದಲ್ಲಿದ್ದ ಬಂಡಾಯದ ಪ್ರಜ್ಞೆಗೂ ಈಗಿನ ಬಂಡಾಯದ ಪ್ರಜ್ಞೆಗೂ ಸ್ವರೂಪದಲ್ಲಿನ ಬದಲಾವಣೆ ಕಾಣಬಹುದು. ಚಾರಿತ್ರ್ಯ ಕತೆಯನ್ನು ಮರೆತರೆ ವರ್ತಮಾನಕ್ಕೆ ಯಾವುದೇ ಅರ್ಥ ಇರುವುದಿಲ್ಲ. ಭೂತದ ಬೆಳಕಿನಲ್ಲಿ ವರ್ತಮಾನ ನೋಡುವುದು, ವರ್ತಮಾನದ ವಿವೇಕದಿಂದ ಭೂತವನ್ನು ಕಂಡುಕೊಳ್ಳುವುದೇ ನಿಜವಾದ ಚರಿತ್ರೆಯಾಗಿದೆ. ಡಾ| ಸಿ.ಬಿ. ಚಿಲ್ಕರಾಗಿ ಅವರು ಬೆಟ್ಟದೂರ ಅಲ್ಲಮ ಕೃತಿಯಲ್ಲಿ ಸಾಹಿತಿ ಅಲ್ಲಮಪ್ರಭು ಅವರ ವಿಚಾರಧಾರೆ ಉತ್ತಮವಾಗಿ ಬಿಂಬಿಸಿದ್ದಾರೆ. ಅವರ ಹೋರಾಟದ ಅಂಶಗಳು ಇದರಲ್ಲಿ ಅಡಕವಾಗಿವೆ ಎಂದರು.
ರಾಜ್ಯಸಭಾ ಸದಸ್ಯ ಡಾ| ಎಲ್. ಹನುಮಂತಯ್ಯ ಮಾತನಾಡಿ, ಸಾಹಿತಿ ಈಶ್ವರ ಹತ್ತಿ ಅವರ ಅನಿಮಲ್ ಫಾರ್ಮ್ ಎನ್ನುವ ಅನುವಾದಿತ ಕೃತಿ ನಿಜಕ್ಕೂ ಕನ್ನಡದ್ದೇ ಕೃತಿಯೇನೋ ಎನ್ನುವಂತೆ ಭಾಸವಾಗುತ್ತಿದೆ. ಈ ಕೃತಿಯಲ್ಲಿ ಪ್ರಾಣಿಗಳ ಲೋಕದ ಮೂಲಕ ಮನುಷ್ಯನ ನಿರಂಕುಶತೆ, ಆಡಳಿತ, ವಾಸ್ತವಿಕತೆ ನಡೆಯುವ ಅಂಶಗಳಿವೆ. ಸ್ವಾಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಇಂಗ್ಲಿಷ್ ಕೃತಿ ಬಂದಿತ್ತು. ಈ ಕಾದಂಬರಿಯು ಇಂದು ನಮ್ಮ ಸುತ್ತಲು ನಡೆಯುವ ವಿದ್ಯಮಾನಗಳ ಕುರಿತು ಬರೆಯಲಾಗಿದೆ ಎನ್ನುವಂತಿದೆ. ಈ ಮಹತ್ವದ ಕೃತಿಯು ನಿಜಕ್ಕೂ ನನ್ನ ಮನಸ್ಸು ಸೆಳೆದಿದೆ ಎಂದರು.
ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಎಚ್.ಎಸ್. ಪಾಟೀಲ್, ಈಶ್ವರ ಹತ್ತಿ, ಡಾ| ಸಿ.ಬಿ. ಚಿಲಕರಾಗಿ, ಡಿ.ಎಂ. ಬಡಿಗೇರ ಸೇರಿದಂತೆ ಪ್ರಮುಖ ಸಾಹಿತಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ