ಯುವಕರಲ್ಲಿ ರಾಷ್ಟ್ರ ಪ್ರೇಮ ಜಾಗೃತಗೊಳ್ಳಲಿ: ನಾಗೇಶ
ನಮ್ಮ ಪುಸ್ತಕಗಳು ಸೋಲಿನ ಇತಿಹಾಸವನ್ನೇ ಹೇಳಿವೆ
Team Udayavani, May 29, 2022, 12:59 PM IST
ಕೊಪ್ಪಳ: ಸ್ವಾತಂತ್ರ್ಯ ಹೋರಾಟದ ಸ್ಮರಣೆಯ ಕಾರ್ಯಕ್ರಮಗಳ ಮೂಲಕ ಇಂದಿನ ಹಾಗೂ ಮುಂದಿನ ಪೀಳಿಗೆಯಲ್ಲಿ ದೇಶದ ಕುರಿತಾದ ಸ್ವಾಭಿಮಾನ ಹಾಗೂ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಬೇಕಿದೆ. ನಮ್ಮ ಪುಸ್ತಕಗಳು ಸೋಲಿನ ಇತಿಹಾಸವನ್ನೇ ಹೇಳಿವೆ, ಹೋರಾಟ ವಿಷಯ ಹೇಳಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಹೋರಾಟದ ಗಳಿಗೆಗಳನ್ನು ಸ್ಮರಿಸುವ ಉದ್ದೇಶದಿಂದ ರಾಜ್ಯದಲ್ಲಿ ಸ್ವಾತಂತ್ರ್ಯ ಭಾರತಿಗೆ ಕನ್ನಡದಾರತಿ ಅಭಿಯಾನ ಹಮ್ಮಿಕೊಂಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಕನ್ನಡದ ಹೋರಾಟಗಾರರನ್ನು, ಅವರ ತ್ಯಾಗ ಬಲಿದಾನಗಳನ್ನು ನಾವಿಂದು ಸ್ಮರಿಸಬಹುದು. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ತ್ಯಾಗಗಳನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಅವರಲ್ಲಿ ಸ್ವಾಭಿಮಾನ, ದೇಶಪ್ರೇಮ ಜಾಗೃತಗೊಳಿಸಬೇಕಿದೆ ಎಂದರು.
ಭಾರತವನ್ನು ಬ್ರಿಟಿಷರು, ಪೋರ್ಚುಗೀಸರು, ಡಚ್ಚರು ಸೇರಿ ವಿಶ್ವದ ಸಣ್ಣಪುಟ್ಟ ದೇಶಗಳು ನಮ್ಮ ಮೇಳೆ ದಾಳಿ ಮಾಡಿ ಆಳ್ವಿಕೆ ನಡೆಸಿವೆ. ಆದರೆ ನಮ್ಮದು ಜ್ಞಾನಕ್ಕೆ, ಸಂಸ್ಕೃತಿಗೆ, ಸನ್ನಡತೆಗೆ ಮತ್ತು ಸಹೋದರತ್ವಕ್ಕೆ ಒತ್ತನ್ನು ಕೊಟ್ಟಿರುವ ದೇಶವಾಗಿದೆ. ಈ ದೇಶಕ್ಕೆ ವ್ಯಾಪಾರಕ್ಕಾಗಿ ಬಂದ ಪೋರ್ಚುಗೀಸರು, ಮೊಘಲರು, ಬ್ರಿಟೀಷರು ನಮ್ಮ ದೇಶದ ಸಂಪತ್ತನ್ನು ವಶಪಡಿಸಿಕೊಂಡು ನಮ್ಮ ನೆಲದಲ್ಲಿ ತಮ್ಮ ದೇಶದ ಸಂಸ್ಕೃತಿ ಬೆಳೆಸಲು ಯತ್ನಿಸಿದರು. ಆಗಿನ ಆಡಳಿತ ಮತ್ತು ಜೀವನ ಶೈಲಿಯ ನಡುವಿನ ವ್ಯತ್ಯಾಸ ಅರಿಯದ ನಮ್ಮ ಜನ ವಿದೇಶಿಗರ ತಂತ್ರಗಾರಿಕೆಗೆ, ಮೋಸಕ್ಕೆ ಒಳಗಾಗಿ ಬ್ರಿಟಿಷ್ ಆಡಳಿತಕ್ಕೆ ದಾರಿ ಮಾಡಿಕೊಟ್ಟರು. ಇದರಿಂದ ನೂರಾರು ವರ್ಷಗಳ ಕಾಲ ನಮ್ಮ ನಾಡಿನ ಅನೇಕ ರಾಜರು, ಹೋರಾಟಗಾರರು, ನಾಯಕರು ಸತತ ಹೋರಾಟ ಮಾಡಿ ತಮ್ಮ ಪ್ರಾಣಗಳನ್ನು ಬಲಿ ಕೊಟ್ಟು ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು ಎಂದರು.
ಬ್ರಿಟಿಷರಿಗಿಂತ ಮೊಗಲರು ನಮ್ಮ ಮೇಲೆ ಆಕ್ರಮಣ ಮಾಡಿ ಎಲ್ಲ ದೇವಸ್ಥಾನಗಳನ್ನು ಒಡೆದು ಹಾಕಿ ಕ್ರೌರ್ಯ ತೋರಿದರು. ಆದರೆ ಪಠ್ಯದಲ್ಲಿ ಅಂತಹ ವಿಚಾರಗಳೇ ಹೆಚ್ಚಿವೆ. ಸೋಲಿನ ಇತಿಹಾಸವನ್ನು ಪಠ್ಯ ಪುಸ್ತಕದಲ್ಲಿ ಬರೆಯಲಾಗಿದೆ. ಸದ್ಯ ಪಠ್ಯಗಳಲ್ಲಿ ನೈಜ ಸ್ವಾತಂತ್ರ್ಯ ಹೋರಾಟಗಾರರ ಸಾಹಸಗಾಥೆಗಳನ್ನು ಅಳವಡಿಸಬೇಕು. ಅವರ ಹೋರಾಟದ ಕ್ರಮ, ಮಾಡಿದ ತ್ಯಾಗ, ಬಲಿದಾನಗಳನ್ನು ಮಕ್ಕಳಿಗೆ ತಿಳಿಸಬೇಕು. ಇತಿಹಾಸವೆಂದರೆ ಬರಿ ಸೋಲಿನ ಪಾಠವಲ್ಲ. ಸೋಲನ್ನು ಸೋಲಿಸಿ ಗೆದ್ದ ಪರಿಯನ್ನು, ಗೆಲುವಿನ ಕಥೆಯನ್ನು ಮಕ್ಕಳಿಗೆ ತಿಳಿಸಬೇಕು ಎಂದರು.
ನಾವು ಯಾರ ಮೇಲೆಯೂ ಆಕ್ರಮಣ ಮಾಡಿಲ್ಲ. ಆದರೆ ಇಂತಹ ಇತಿಹಾಸವನ್ನು ತಿಳಿಸಿಲ್ಲ. ನೈಜ ಇತಿಹಾಸವನ್ನೇ ಕೈ ಬಿಡಲಾಗಿದೆ. ಸ್ವಾತಂತ್ರ್ಯದ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕನಿಷ್ಟ ದೇಶದ ಹೋರಾಟಗಾರರನ್ನು ಮಕ್ಕಳಿಗೆ ಪರಿಚಯಿಸುವ ಕೆಲಸ ಮಾಡಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಕೊಪ್ಪಳ ಜಿಲ್ಲೆಯ ವೀರಪ್ಪ ದೇಸಾಯಿ ಅವರು ತಮ್ಮದೇ ತಂತ್ರಗಾರಿಕೆ ಮೂಲಕ ತಂಡಗಳನ್ನು ರಚಿಸಿ, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡರು. ಮುಂಡರಗಿ ಭೀಮರಾಯರು, ಪುಂಡಲೀಕ ಜ್ಞಾನಮೋಠೆಯವರು ನಿಜಾಮರ, ರಜಾಕರ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ನಮ್ಮ ದೇಶಕ್ಕೆ ಪ್ರಮುಖ ನಾಯಕರು ಮಾತ್ರವಲ್ಲ ಜನಸಾಮಾನ್ಯರು ಕೂಡ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು. ಕುಷ್ಟಗಿ ಶಾಸಕರಾದ ಅಮರೇಗೌಡ ಬಯ್ನಾಪುರ ಮಾತನಾಡಿ, ನಾವೆಲ್ಲರೂ ಆ. 15ರಂದು ಮಾತ್ರ ಸ್ವಾತಂತ್ರ್ಯ ಹೋರಾಟಗಾರರು, ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾತನಾಡುತ್ತೇವೆ, ನೆನಪಿಸಿಕೊಳ್ಳುತ್ತೇವೆ. ಆದರೆ ಸ್ವಾತಂತ್ರ್ಯ ಹೋರಾಟವೆಂಬುದು ಒಂದು ದಿನದ ಆಚರಣೆಗೆ ಸೀಮಿತವಾಗದೇ. ಹೋರಾಟಗಾರರ ಶ್ರಮವನ್ನು ಪ್ರತಿನಿತ್ಯ ಸ್ಮರಿಸಬೇಕು. ನಮ್ಮ ಜಿಲ್ಲೆಯ, ತಾಲೂಕಿನ ಪುಂಡಲೀಕಪ್ಪ ಜ್ಞಾನಮೋಠೆ ಅವರು ತಮ್ಮದೇ ತಂಡವನ್ನು ರಚಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅಂತಹ ಹೋರಾಟಗಾರರನ್ನು ಹೊಂದಿರುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕೆಂದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂಬ ಮಾತಿದೆ. ಅದರಂತೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿಯುವುದು ಇಂದಿನ ಅವಶ್ಯಕತೆಯಾಗಿದೆ. ಸ್ವಾತಂತ್ರ್ಯ ದೊರೆತು 75 ವರ್ಷಗಳಾದ ಹಿನ್ನೆಲೆಯಲ್ಲಿ ಅಂದಿನ ಹೋರಾಟ, ಹೋರಾಟಗಾರರ ಬಗ್ಗೆ ಮಾಹಿತಿ ನೀಡಲು ಸರ್ಕಾರ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು, ಮಕ್ಕಳು ಇತಿಹಾಸದ ಬಗ್ಗೆ ಪರೀಕ್ಷಾ ದೃಷ್ಟಿಯಿಂದ ಮಾತ್ರವಲ್ಲ ದೇಶಾಭಿಮಾನದಿಂದಲೂ ತಿಳಿದುಕೊಳ್ಳಬೇಕು. ಪಾಲಕರು ತಮಗೆ ತಿಳಿದಿರುವ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಮಕ್ಕಳಿಗೆ ಹೇಳಿ ಅವರಲ್ಲಿ ದೇಶಾಭಿಮಾನ ಬೆಳೆಸಬೇಕು ಎಂದರು.
ಅಮೃತಭಾರತಿಗೆ ಕನ್ನಡದಾರತಿ ಕಾರ್ಯಕ್ರಮದ ಸ್ಮರಣೆಗಾಗಿ ಸ್ಮರಣ ಫಲಕವನ್ನು ಸಚಿವರು ಬಿಡುಗಡೆಗೊಳಿಸಿದರು. ಅಭಿಯಾನ ಕಾರ್ಯಕ್ರಮದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಸ್ತುತ ಪಡಿಸಿದ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.
ಸಂಕಲ್ಪ ಸ್ವೀಕಾರ ಕಾರ್ಯಕ್ರಮ: ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ದೇಶದ ಸಾಮರಸ್ಯ, ಸಹೋದರತ್ವ, ಸಂಸ್ಕೃತಿ ಕಾಪಾಡಿಕೊಳ್ಳುವ ಕುರಿತು ಸಂಕಲ್ಪ ಸ್ವೀಕಾರ ಬೋಧಿಸಿದರು.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್, ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್, ಎಸ್ಪಿ ಅರುಣಾಂಗ್ಷು ಗಿರಿ, ಎಸಿ ಬಸವಣಪ್ಪ ಕಲಶೆಟ್ಟಿ, ತಹಶೀಲ್ದಾರ್ ವಿಠ್ಠಲ್ ಚೌಗಲೆ, ಡಿಡಿಪಿಐ ಮುತ್ತರೆಡ್ಡಿ ಇ. ರಡ್ಡೇರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು
Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ
Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ
Koppala: ಬೆಂಬಲಿಗರ ಜೊತೆ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಸಂಸದ ಸಂಗಣ್ಣ ಕರಡಿ…