ಕಾಂಗ್ರೆಸ್ ಸರ್ಕಾರದಲ್ಲೇ ಹೆಚ್ಚು ಹಿಂದೂಗಳ ರಕ್ಷಣೆ: ಸತೀಶ್ ಜಾರಕಿಹೊಳಿ
ಮೀಸಲಾತಿ ಹೆಚ್ಚಳದ ಶ್ರೇಯಸ್ಸು ಸ್ವಾಮೀಜಿಗೆ ಸಲ್ಲುತ್ತದೆ
Team Udayavani, Nov 28, 2022, 6:27 PM IST
ಕೊಪ್ಪಳ: ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದ ಶ್ರೇಯಸ್ಸು ಸ್ವಾಮೀಜಿಗೆ ಸಲ್ಲುತ್ತದೆ. ನಂತರದ ಶ್ರೇಯಸ್ಸು ಸಮುದಾಯಕ್ಕೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಕೊಪ್ಪಳದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಬಹುತ್ವ ಭಾರತ ಚಿಂತನಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ, ಎಸ್ಟಿಯವರಿಗೆ 40 ವರ್ಷದ ಹೋರಾಟದಿಂದ ಮೀಸಲಾತಿ ಸಿಕ್ಕಿದೆ. 40 ವರ್ಷದಲ್ಲಿ ಅನೇಕರು ಹೋರಾಟ ಮಾಡಿದ್ದಾರೆ. ಅದರಲ್ಲಿ ಸ್ವಾಮೀಜಿಗಳು ದೀರ್ಘ ಹೋರಾಟ ಮಾಡಿದ್ದಾರೆ. ಬಿಜೆಪಿ ಅವರು ಕೊಡಬೇಕಾಗಿದ್ದರೆ ಒಂದೆರಡು ತಿಂಗಳಲ್ಲಿ ಕೊಡಬೇಕಾಗಿತ್ತು. ಅಷ್ಟು ದಿನಗಳ ಕಾಲ ಸ್ವಾಮೀಜಿಗಳನ್ನು ಕೂಡಿಸುವ ಅವಶ್ಯಕತೆ ಏನಿತ್ತು? ಇದರಲ್ಲಿ ಯಾರ ಕ್ರೆಡಿಟ್ ಇಲ್ಲ. ಸ್ವಾಮೀಜಿಯವರ ಒತ್ತಡದ ಮೇಲೆ ಮೀಸಲಾತಿ ದೊರಕಿದೆ ನಂತರ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನದ್ದು ಎಂದರು.
ಸಿದ್ದರಾಮಯ್ಯ ಸಿಎಂ ಆದರೆ ಹಿಂದೂಗಳ ಹತ್ಯೆ ಆಗುತ್ತದೆ ಎನ್ನುವ ವಿಚಾರವಾಗಿ ಸಿ.ಟಿ.ರವಿ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವಧಿಯಲ್ಲಿ ಮಂಗಳೂರು, ಶಿವಮೊಗ್ಗದಲ್ಲಿ ಏನಾಗಿದೆ ? ಕಾಂಗ್ರೆಸ್ ಸರಕಾರದಲ್ಲಿಯೇ ಹಿಂದೂಗಳಿಗೆ ಹೆಚ್ಚು ರಕ್ಷಣೆ ಸಿಕ್ಕಿದೆ. ಮಂಗಳೂರು, ಶಿವಮೊಗ್ಗ ಘಟನೆಗಳು ಬಿಜೆಪಿ ಅವರು ಬಂದ ಮೇಲೆ ಆಗಿವೆ. ಈ ಕುರಿತು ಪ್ರಮೋದ್ ಮುತಾಲಿಕ್ ಹೇಳಿಕೆ ಗಮನಿಸಿರಬಹುದು ಎಂದರು.
ಸಿದ್ದು-ಡಿಕೆಶಿ ಸಿಎಂ ಕುರ್ಚಿಗಾಗಿ ಚಿರತೆ ರೀತಿ ಕಾದಾಡುತ್ತಿದ್ದಾರೆಂದು ಶ್ರೀರಾಮುಲು ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಅವರಿಬ್ಬರೂ ಚಿರತೆಯಾಗಿ ಬಿಜೆಪಿಗೆ ಬೆನ್ನು ಹತ್ತಿದ್ದಾರೆ. ಸಿಎಂ ಕುರ್ಚಿಗಾಗಿ ಪೈಪೋಟಿ ವಿಚಾರವಾಗಿಯೂ ಸ್ಪಷ್ಟನೆ ನೀಡಿದ ಅವರು, ಈಗ ಅದರ ಬಗ್ಗೆ ಮಾತು ಇಲ್ಲ. 113 ಸ್ಥಾನ ಬಂದ ಮೇಲೆ ಅದರ ಬಗ್ಗೆ ವಿಚಾರಿಸಲಾಗುವುದು. ಈಗ ಏನಿದ್ದರೂ ಪಕ್ಷ, ಸಂಘಟನೆ ಅಷ್ಟೇ ಮಾತು ಎಂದರು.
ಸಂವಿಧಾನ ಬದಲಿಸಿದ್ದು ಕಾಂಗ್ರೆಸ್ ಎಂದು ಸಿ.ಟಿ.ರವಿ ಹೇಳಿದ್ದಾರೆ. ನಾವೇಕೆ ಅದನ್ನು ಬದಲಿಸಬೇಕು. ಕಾಂಗ್ರೆಸ್ ನಿಂದಲೇ ಸಂವಿಧಾನಕ್ಕೆ ರಕ್ಷಣೆಯಾಗಿದೆ. ಬಿಜೆಪಿ ಅವರು ಸಂವಿಧಾನ ಬದಲಾವಣೆ ಮಾಡಲು ಬಂದಿದ್ದೇವೆ ಎಂದು ಹೇಳುತ್ತಾರೆ. ನಾವು ಸಂವಿಧಾನ ಬದಲಾವಣೆ ಮಾಡಲು ಬಿಡುವುದಿಲ್ಲ.ಅದಕ್ಕಾಗಿ ಮಾನವ ಬಂಧುತ್ವ ವೇದಿಕೆಯಿಂದ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.