ದೋಟಿಹಾಳ ವಸತಿ ನಿಲಯದಲ್ಲಿ 13 ಜನ ಕ್ವಾರಂಟೈನ್
Team Udayavani, May 17, 2020, 4:36 PM IST
ದೋಟಿಹಾಳ: ಗ್ರಾಮದ ಕಸ್ತೂರಬಾ ವಸತಿ ನಿಲಯದಲ್ಲಿ ಶನಿವಾರ ತೋನಸಿಹಾಳ ತಾಂಡಾಕ್ಕೆ ತಮಿಳುನಾಡು ಮತ್ತು ಗೋವಾದಿಂದ ಆಗಮಿಸಿದ ಸುಮಾರು 13 ಜನರನ್ನು ಕ್ವಾರಂಟೈನ್ ಮಾಡಲಾಯಿತು.
ಕಸ್ತೂರಬಾ ವಸತಿ ನಿಲಯ ಕ್ವಾರಂಟೈನ್ ಕೇಂದ್ರ ಮಾಡುವುದಕ್ಕೆ ಕೇಸೂರ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಇಲ್ಲಿ ಕ್ವಾರಂಟೈನ್ ಮಾಡುವುದು ಬೇಡ ಎಂದು ನಿಲಯದ ಮುಖ್ಯ ರಸ್ತೆಗೆ ಮುಳ್ಳುಕಂಟಿ ಹಚ್ಚಿ ಪ್ರತಿಭಟನೆ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎಂ. ಸಿದ್ದೇಶ್ ಮಾತನಾಡಿ, ನಮ್ಮ ವಲಸೆ ಕಾರ್ಮಿಕರು ಹೊರ ರಾಜ್ಯಗಳಿಂದ ಮರಳಿ ತಮ್ಮ ಗ್ರಾಮಗಳಿಗೆ ಬರಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಗ್ರಾಮಕ್ಕೆ ಬಂದ ವಲಸೆ ಕಾರ್ಮಿಕರನ್ನು 14 ದಿನಗಳ ಕಾಲ ಇಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ. ಇವರಲ್ಲಿ ಯಾರಿಗೂ ರೋಗ ಲಕ್ಷಣಗಳು ಇಲ್ಲ. ಇವರು ನಮ್ಮ ತಾಲೂಕಿನವರು ಇವರ ಹಾಗೂ ಎಲ್ಲರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆ ಹೀಗಾಗಿ ಸಾರ್ವಜನಿಕರು ಸಹಕರಿಬೇಕು ಎಂದು ಹೇಳಿದರು.
ಪಿಎಸ್ಐ ಚಿತ್ತರಂಜನ್ ಡಿ. ಅವರು ಮಾತನಾಡಿ, ಕ್ವಾರಂಟೈನ್ ಇರುವರು ಯಾವುದೇ ಕಾರಣಕ್ಕೂ ಹೊರಗೆ ಬರುವುದಿಲ್ಲ. ಕೇಂದ್ರಕ್ಕೆ 24ಗಂಟೆ ಬಿಗಿ ಬಂದೋಬಸ್ತ್ ಮಾಡುತ್ತೇವೆ. ನಿಮಗೆ ಯಾವುದೇ ಆತಂಕ ಬೇಡ ಎಂದು ಹೇಳಿದರು. ಹೀಗಾಗಿ ಗ್ರಾಮಸ್ಥರು ತಮ್ಮ ಹೋರಾಟ ಹಿಂಪಡೆದರು. ಕೇಸೂರ ಗ್ರಾಪಂ ಪಿಡಿಒ, ಗ್ರಾಪಂ ಸದಸ್ಯರು, ಕಸ್ತೂರಬಾ ವಸತಿ ನಿಲಯದ ನೋಡಲ್ ಅಧಿಕಾರಿ ಎಂ. ಗಂಗಾಧರ. ಎನ್ಜಿಒ ಸಿಬ್ಬಂದಿ ಶ್ರೀಕಾಂತ, ನಿಲಯದ ಸಿಬ್ಬಂದಿ, ಪೊಲೀಸರು ಮತ್ತು ಗ್ರಾಮಸ್ಥರು ಇದ್ದರು.