ಐವರು ಶಾಸಕರಿಂದ ತಲಾ 3 ಶಾಲೆ ದತ್ತು
| ಸರ್ಕಾರಿ ಶಾಲೆಗಳ ಪ್ರಗತಿಗೆ ಯತ್ನ | ಕ್ಷೇತ್ರಾಭಿವೃದ್ಧಿ ಅನುದಾನ ಬಳಕೆ | ಶೈಕ್ಷಣಿಕ ಅಭಿವೃದ್ಧಿಗೆ ಬೇಕಿದೆ ಒತ್ತು
Team Udayavani, Dec 18, 2020, 5:01 PM IST
ಸಾಂದರ್ಭಿಕ ಚಿತ್ರ
ಕೊಪ್ಪಳ: ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಎಲ್ಲಶಾಸಕರಿಗೆ ಶಾಲೆಗಳನ್ನು ದತ್ತು ನೀಡಿದೆ. ಶಾಸಕರು ತಮ್ಮ ಕ್ಷೇತ್ರಾಭಿವೃದ್ಧಿ ಅನುದಾನ ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕರಿಸುವಂತೆಯೂ ಸೂಚಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಐವರು ಶಾಸಕರು ತಮ್ಮಕ್ಷೇತ್ರಗಳಲ್ಲಿ ತಲಾ ಮೂರು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಕಾರ್ಯಯೋಜನೆಗೆ ತಯಾರಿ ನಡೆಸಿದ್ದಾರೆ.
ಹೌದು.. ಪ್ರಸ್ತುತ ಖಾಸಗಿ ಶಾಲೆಗಳ ಅಬ್ಬರದ ನಡುವೆ ಕನ್ನಡ ಸರ್ಕಾರಿ ಶಾಲೆಗಳು ಅವನತಿಯತ್ತ ಸಾಗುತ್ತಿವೆ. ಬಡ ವಿದ್ಯಾರ್ಥಿಗಳ ಭವಿಷ್ಯದ ದಾರಿದೀಪವಾಗಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿಸರ್ಕಾರ ಉತ್ತಮ ನಿರ್ಧಾರ ಕೈಗೊಂಡುಶಾಲೆ ದತ್ತು ಯೋಜನೆ ಆರಂಭಿಸಿದೆ. ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಪ್ರತಿ ವರ್ಷಶಾಲೆಗೆ ಹಣ ಹಂಚಿಕೆ ಮಾಡಿ ಮಕ್ಕಳಭವಿಷ್ಯಕ್ಕೆ ದಾರಿಯಾಗುವಂತೆ ಸರ್ಕಾರ ಶಾಸಕರಿಗೆ ಸಲಹೆ ನೀಡಿದೆ. ಹಾಗಾಗಿ, ಕೊಪ್ಪಳಜಿಲ್ಲೆಯಲ್ಲಿ ಐವರು ಶಾಸಕರಿದ್ದು, ಅವರೆಲ್ಲರೂ ಈಗಾಗಲೇ ಪ್ರತಿ ಕ್ಷೇತ್ರದಲ್ಲಿ ತಲಾ ಮೂರುಶಾಲೆಗಳನ್ನು ಆಯ್ಕೆ ಮಾಡಿ ಅಲ್ಲಿ ಬೇಕಿರುವಸೌಲಭ್ಯಗಳ ಕುರಿತು ಕ್ರಿಯಾಯೋಜನೆರೂಪಿಸುವಂತೆಯೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಅವರು, ತಾಲೂಕಿನ ಅಳವಂಡಿಯ ಸಿಪಿಎಸ್ ಶಾಲೆ, ಹಿರೇ ಸಿಂದೋಗಿಯ ಕೆಪಿಎಸ್ ಶಾಲೆ, ಹಿಟ್ನಾಳದ ಎಂಎಚ್ಪಿಎಸ್ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸದ್ಯ ಶಾಲೆಯಲ್ಲಿನ ಸಮಸ್ಯೆಗಳ ಕುರಿತು ಪಟ್ಟಿ ತಯಾರಿಸಿ ಅತಿ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವ ಕುರಿತಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇನ್ನೂ ಗಂಗಾವತಿ ಕ್ಷೇತ್ರದ ಶಾಸಕ ಪರಣ್ಣ ಮುನವಳ್ಳಿ ಅವರು, ತಾಲೂಕಿನ ಆನೆಗೊಂದಿಯ ಸರ್ಕಾರಿ ಪ್ರೌಢಶಾಲೆ, ಗಂಗಾವತಿ ನಗರದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಇರಕಲ್ ಗಡಾದ ಕೆಪಿಎಸ್ ಶಾಲೆ ಆಯ್ಕೆ ಮಾಡಿ ಕೊಂಡಿದ್ದಾರೆ. ಯಲಬುರ್ಗಾ ಕ್ಷೇತ್ರದ ಶಾಸಕಹಾಲಪ್ಪ ಆಚಾರ್ ಅವರು, ತಾಲೂಕಿನಮಸಬಂಚಿನಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಗಳೂರು ಕೆಪಿಎಸ್ ಶಾಲೆ, ಯಲಬುರ್ಗಾದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಮುಂದಾಗಿದ್ದಾರೆ. ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಬಯ್ಯಾಪೂರ ಅವರು, ತಾಲೂಕಿನಹನುಮನಾಳದ ಸರ್ಕಾರಿ ಮಾದರಿಹಿರಿಯ ಪ್ರಾಥಮಿಕ ಶಾಲೆ, ತಾವರಗೇರಾ ಕರ್ನಾಟಕ ಪಬ್ಲಿಕ್ ಶಾಲೆ, ನಿಲೋಗಲ್ಸರ್ಕಾರಿ ಪ್ರೌಢಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸುಗೂರು ಅವರು, ಕಾರಟಗಿಕರ್ನಾಟಕ ಪಬ್ಲಿಕ್ ಶಾಲೆ, ನವಲಿಯಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕಶಾಲೆ, ಮುಸಲಾಪುರದ ಸರ್ಕಾರಿ ಪ್ರೌಢಶಾಲೆ ಆಯ್ಕೆ ಮಾಡಿಕೊಂಡಿದ್ದಾರೆ. ಈ ಐವರು ಶಾಸಕರು ಈಗಷ್ಟೇ ಶಾಲೆ ದತ್ತುಪಡೆದಿದ್ದಾರೆ. ಇವರು ಸರ್ಕಾರ ನೀಡುವಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದವನ್ನುಮೀಸಲಿಟ್ಟು ದತ್ತು ಪಡೆದ ಶಾಲೆಗಳಲ್ಲಿಅಭಿವೃದ್ಧಿ ಕಾರ್ಯಕೈಗೊಳ್ಳಬೇಕಾಗಿದೆ ಶಾಸಕರಿಗೆ ಪ್ರತಿವರ್ಷ 2 ಕೋಟಿ ಅನುದಾನ ಬಂದರೂ ಇದರಲ್ಲಿಯೇ ಕುಡಿಯುವ ನೀರು, ಶೌಚಾಲಯ, ವಿದ್ಯಾರ್ಥಿಗಳಿಗೆ ಡೆಸ್ಕ್, ಶಾಲಾ ಕೊಠಡಿ ದುರಸ್ತಿ, ನಿರ್ಮಾಣ, ಸ್ಮಾರ್ಟ್, ಡಿಜಿಟಲ್ ಕ್ಲಾಸ್ ಸೇರಿದಂತೆ ಶಾಲೆ ಸಮಸ್ಯೆಯನ್ನು ನಿವಾರಿಸಲು ಮುಂದಾಗಬೇಕಿದೆ.
ಒಟ್ಟಿನಲ್ಲಿ ಸರ್ಕಾರವು ಸರ್ಕಾರಿ ಶಾಲೆಗಳ ರಕ್ಷಣೆಗೆ ಆರಂಭಿಸಿದ ಶಾಲೆ ದತ್ತು ಯೋಜನೆಯ ಉದ್ದೇಶ ಒಳ್ಳೆಯದಾಗಿದ್ದರೂ ಶಾಸಕರ ಇಚ್ಛಾಶಕ್ತಿಯೂ ಅವಶ್ಯವಾಗಿದೆ.
ಶಾಸಕರು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಶಾಸಕರು ಶಾಲೆಯಲ್ಲಿನ ಭೌತಿಕ ಸಮಸ್ಯೆಗಳ ನಿವಾರಣೆ ಜೊತೆಗೆ ಶೈಕ್ಷಣಿಕ ಗುಣಮಟ್ಟಕ್ಕೆ ವಿಶೇಷ ಒತ್ತು ಕೊಡಬೇಕು. ಶಿಕ್ಷಕರಿಗೆ ಹೆಚ್ಚಿನ ತರಬೇತಿ ಕೊಡಿಸಿ, ಅದರ ಮೌಲ್ಯಮಾಪನದ ಬಗ್ಗೆಯೂ ನಿಗಾ ವಹಿಸಬೇಕು. ಶಾಸಕರು ತಿಂಗಳಿಗೊಮ್ಮೆ ಆ ಶಾಲೆಗೆ ಭೇಟಿ ನೀಡಿ ಅಲ್ಲಿನ ವಸ್ತುಸ್ಥಿತಿ ತಿಳಿಯಬೇಕು. ಶಿಕ್ಷಣ ತಜ್ಞರ ಸಮಿತಿ ರಚಿಸಿ ಆ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಲು ನಿಗಾ ವಹಿಸಬೇಕು. -ದೇವರಡ್ಡಿ ಡಂಬ್ರಳ್ಳಿ, ಅಲ್ಲಾನಗರ ಶಾಲೆ ಪ್ರಭಾರಿ ಮುಖ್ಯ ಶಿಕ್ಷಕ
ಸರ್ಕಾರವು ಸರ್ಕಾರಿ ಶಾಲೆಗಳನ್ನು ಶಾಸಕರಿಗೆ ದತ್ತು ಕೊಡುವ ಯೋಜನೆ ಆರಂಭಿಸಿರುವುದು ಒಳ್ಳೆಯದು. ಇಲ್ಲಿ ಶಾಸಕರು ಶಾಲೆಯಲ್ಲಿನ ಮೂಲಭೂತ ಸಮಸ್ಯೆಗಳನ್ನು ಗಮನಿಸಿ ಬಗೆಹರಿಸಬೇಕು. ಇಲ್ಲವೇ ಶಾಲೆಗೆ ಬುದ್ದಿವಂತರಿಗೆ ಶೈಕ್ಷಣಿಕ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸುವ ಜವಾಬ್ದಾರಿ ನೀಡಬೇಕು. ಆಧುನಿಕತೆಗೆ ತಕ್ಕಂತೆ ಶಾಲೆಯನ್ನು ಉನ್ನತೀಕರಿಸಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವ ಕೆಲಸವಾಗಬೇಕು. ಖಾಲಿ ಶಿಕ್ಷಕರ ಸ್ಥಾನ ಭರ್ತಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. – ಅಲ್ಲಮಪ್ರಭು ಬೆಟ್ಟದೂರು, ಶಿಕ್ಷಣ ಪ್ರೇಮಿ
ಸರ್ಕಾರ ಶಾಲೆಗಳನ್ನು ಶಾಸಕರಿಗೆ ದತ್ತು ನೀಡುತ್ತಿರುವುದು ಒಳ್ಳೆಯ ವಿಚಾರ. ದತ್ತು ಶಾಲೆಯಲ್ಲಿ ಶಾಸಕರು ಭೌತಿಕ ಸ್ಥಿತಿಗತಿಗಳನ್ನು ಅವಲೋಕಿಸಿ ಅವುಗಳಿಗೆಪರಿಹಾರ ಕಂಡುಕೊಳ್ಳಬೇಕು. ಶೌಚಾಲಯ, ಕುಡಿಯುವ ನೀರು ಸೇರಿ ಕಟ್ಟಡದ ಸಮಸ್ಯೆಬಗೆಹರಿಸಿದರೆ ಮಕ್ಕಳು ಆಕರ್ಷಿತರಾಗಲಿದ್ದಾರೆ. ಆ ಶಾಲೆಗೆ ಎಸ್ಡಿಎಂಸಿ ಹೊರತಾಗಿಶಿಕ್ಷಣ ತಜ್ಞ, ಪ್ರೇಮಿಗಳ, ನಿವೃತ್ತ ಅಧಿ ಕಾರಿಗಳ ಸಮಿತಿ ಅವಶ್ಯವಾಗಿ ರಚಿಸಬೇಕು. ಅವರು ಆ ಶಾಲೆ ಶೈಕ್ಷಣಿಕ ಅಭಿವೃದ್ಧಿಗೆ ಕಾಳಜಿ ವಹಿಸಬೇಕು. ಜೊತೆಗೆ ಶಾಲೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಪಾಠ ಬೋಧನೆ ಮಾಡಿದರೆ ಮಕ್ಕಳ ಕಲಿಕೆಯಲ್ಲಿ ಮಹತ್ವದಬದಲಾವಣೆಯಾಗಲಿದೆ. ಶಾಸಕರು ಇಂತಹ ವಿಷಯದ ಬಗ್ಗೆ ಗಮನಿಸಬೇಕು. –ರಾಜೇಶ ಅಂಗಡಿ, ಶಿಕ್ಷಕರು, ಅನುದಾನಿತ ಪ್ರೌಢಶಾಲೆ, ಹುಲಿಗಿ
-ದತ್ತು ಕಮ್ಮಾರ