ಬಿಜೆಪಿ ಸಂಸದರು ನಾಮರ್ಧರು : ತಂಗಡಗಿ
ಯತ್ನಾಳ,ಸೂಲಿಬಲೆಗೆ ಕೈ ಅಭಿನಂದನೆ
Team Udayavani, Oct 2, 2019, 4:47 PM IST
ಕೊಪ್ಪಳ: ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಜನರ ಜೀವನವೇ ಕೊಚ್ಚಿಕೊಂಡು ಹೋಗಿದೆ. ಮೋದಿ ಇತ್ತ ತಿರುಗಿಯೂ ನೋಡಿಲ್ಲ. ಒಂದು ಟ್ವಿಟ್ ಮಾಡಿಲ್ಲ. ಇನ್ನೂ ರಾಜ್ಯದ ಬಿಜೆಪಿ ಸಂಸದರು ನರಸತ್ತ ನಾಮರ್ಧರು, ಕೇಂದ್ರದಿಂದ ಪರಿಹಾರ ತರಲು ಆಗುವುದಿಲ್ಲವೆಂದರೆ ಬಳೆ, ಸೀರೆತೊಟ್ಟು ಕುಳಿತುಕೊಳ್ಳಲಿ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ತೀವ್ರ ವಾಗ್ಧಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಮೋದಿ ಬಿಹಾರದಲ್ಲಿ ನೆರೆಯಾದರೆ ಕೂಡಲೇ ಟ್ವಿಟ್ ಮಾಡಿ ನಾವು ನಿಮ್ಮೊಂದಿಗಿದ್ದೇವೆ ಎನ್ನುತ್ತಾರೆ.ಉತ್ತರ ಕರ್ನಾಟಕದ ಜನ ಸಾಯುತ್ತಿದ್ದು,10 ಸಾವಿರ ಪರಿಹಾರ ಬಿಟ್ಟರೆ ನಯಾಪೈಸೆ ಹಣ ಕೊಟ್ಟಿಲ್ಲ.ಅದೂ 10 ಸಾವಿರದ ಪರಿಹಾರದ ಚೆಕ್ ಬೌನ್ಸ್ ಆಗಿವೆ.ರಾಜ್ಯದ 25 ಬಿಜೆಪಿ ಸಂಸದರಿಗೆ ಮೋದಿ ಮುಂದೆ ನಿಂತುಕೊಳ್ಳುವ ಧೈಯ ಇದ್ದಂತೆ ಕಾಣುತ್ತಿಲ್ಲ. ನೆರೆ ಬಂದು ತಿಂಗಳುಗಳು ಗತಿಸಿದರೂ ಪರಿಹಾರ ಬಿಡುಗಡೆ ಮಾತಾಡಿಲ್ಲ. ಇವರಿಗೆ ಹೋಗಿ ನೆರವು ಕೇಳುವ ಧೈರ್ಯವೇ ಇಲ್ಲ. ನರ ಸತ್ತ ನಾಮರ್ಧರು ಎಂದರು.
ಬಿಜೆಪಿ ಸಂಸದರಿಗೆ ಸೀರೆ,ಬಳೆ :
ಅ.15ರೊಳಗೆ ಕೇಂದ್ರ ಪರಿಹಾರ ಬಿಡುಗಡೆ ಮಾಡಬೇಕು. ಇಲ್ಲಿನ ಸಂಸದರು ಪರಿಹಾರ ತರಲು ಆಗದಿದ್ದರೆ ಕಾಂಗ್ರೆಸ್ನಿಂದ ಸಂಸದರಿಗೆ ಇಳಕಲ್ ಸೀರೆ, ಬಳೆ, ಕುಂಕುಮವನ್ನ ಪ್ಯಾಕ್ ಮಾಡಿ ಸಂಸದರ ಮನೆಗೆ ಪಾರ್ಸಲ್ ಕಳಿಸುತ್ತೇವೆ. ಮುಂದೆ ಸಂಸತ್ಗೆ ತೆರಳುವಾಗ ಅವುಗಳನ್ನು ಧರಿಸಿಕೊಂಡು ಸಂಸತ್ ಪ್ರವೇಶಿಸಿ ಆಗಲಾದರೂ ಮೋದಿ ನಿಮ್ಮ ವೇಷಭೂಷಣ ನೋಡಿಯಾದರೂ ನಿಮ್ಮತ್ತ ನೋಡುತ್ತಾರೆ.ಓರ್ವ ಮಹಿಳಾ ಸದಸ್ಯೆಗೆ ಸಫಾರಿ ಕೊಡುತ್ತೇವೆ.ಇದು ಮಹಿಳೆಯರಿಗೆ ನಾವು ಅಪಮಾನ ಮಾಡುತ್ತಿಲ್ಲ.ಅವರ ಎಂಪಿಗಳಿಗೆ ಧೈರ್ಯ ಬರಲಿ. ಸಿಟ್ಟು ಬಂದು ಪರಿಹಾರ ಕೇಳಲಿ ಎಂದು ಮಾಡುತ್ತೇವೆ. ಅವಶ್ಯವಿದ್ದರೆ ನಾವೇ ಅವರಿಗೆ ಸೀರೆ ಉಡಿಸುತ್ತೇವೆ. ಜನರೂ ಅವರಿಗೆ ಸೀರೆ ಉಡಿಸುತ್ತಾರೆ ಎಂದು ವ್ಯಂಗ್ಯವಾಗಿ ಟೀಕೆ ಮಾಡಿದರು.
ಯತ್ನಾಳ,ಸೂಲಿಬಲೆಗೆ ಅಭಿನಂದನೆ :
ಮೋದಿ ವಿರುದ್ದ ಗುಡುಗಿದ ಬಸವನಗೌಡ ಪಾಟೀಲ್ ಯತ್ನಾಳ, ಚಕ್ರವರ್ತಿ ಸೂಲಿಬಲೆಗೆ ಈಗ ಕಣ್ಣಿಗೆ ಬಂದಂತ ಪೊರೆ ತೆಗೆದಂತೆ ಕಾಣುತ್ತಿದೆ. ಇವರಿಗೆ ಮೋದಿಯವರ ನಾಟಕ ಗೊತ್ತಾಗಿದೆ. ಅವರ ಆಟ ಅರಿತ ನಿಮಗೆ ಕಾಂಗ್ರೆಸ್ ಅಭಿನಂದನೆ ಸಲ್ಲಿಸುತ್ತದೆ ಎಂದರು.
ಬಿಎಸ್ವೈ ಅಧಿಕಾರಕ್ಕೇರಿದ ತಿಂಗಳಲ್ಲೇ ತಂತಿ ಮೇಲೆ ನಡಿಗೆ ಎನ್ನುತ್ತಿದ್ದಾರೆ.ತಂತಿ ಮೇಲೆ ನಡೆಯುತ್ತಾರೋ ? ಬೀಳುತ್ತಾರೋ ಅಥವಾ ಅಲ್ಲಿಂದ ಜಿಗಿಯುತ್ತಾರೋ ಗೊತ್ತಿಲ್ಲ. ಆದರೆ ಅಮಿತ್ ಶಾ,ಆರ್ಎಸ್ಎಸ್ ಮುಖಂಡರಿಗೆ ಹಾಗೂ ಬಿಜೆಪಿಗೆ ಬಿಎಸ್ವೈ ಸಿಎಂ ಆಗಿದ್ದು ಇಷ್ಟವೇ ಇಲ್ಲ.ಅವರನ್ನು ಅರಕೆಯ ಕುರಿಯನ್ನಾಗಿ ಮಾಡುತ್ತಾರೆ.ಬಿಎಸ್ವೈ ಬಿಜೆಪಿಯಲ್ಲಿ ಇಲ್ಲ ಅಂದರೆ ಪಕ್ಷವೇ ನಿರ್ನಾಮವಾಗಲಿದೆ. ಬೆಂಗಳೂರು ಮೇಯರ್ ಆಯ್ಕೆಯಲ್ಲಿ ಸಂಘರ್ಷ ಆರಂಭವಾಗಿದೆ.ಮುಂದೆ ಅದೇ ಬಹಿರಂಗವಾಗಲಿದೆ ಎಂದರು.
ಕಾಂಗ್ರೆಸ್ ಸರ್ಕಾರ ಎಲ್ಲ ಜಾತಿಗಳಿಗೂ ಸೌಲಭ್ಯ ದೊರೆಯಲಿ ಎನ್ನುವ ಉದ್ದೇಶದಿಂದ ಜಾತಿ ಗಣತಿ ಮಾಡಿಸಿದ್ದೇವೆ. ಅದರಲ್ಲಿ ಕೆಲವೊಂದು ದೋಷಗಳಿದ್ದವು.ಅದೆಲ್ಲವನ್ನು ಸರಿಪಡಿಸಿ ನಾವು ಘೋಷಣೆ ಮಾಡುವ ಹಂತದಲ್ಲಿದ್ದೆವು.ಆದರೆ ನಮ್ಮ ಸರ್ಕಾರ ಅಧಿಕಾರ ಕಳೆದುಕೊಂಡಿತು.ಈಗ ಬಿಜೆಪಿ ಅದನ್ನು ಕೈ ಬಿಡಲು ಮುಂದಾಗಿರುವುದು ಸರಿಯಲ್ಲ.ಅವಶ್ಯವಿದ್ದರೆ ಮುಂದೆ ಅದನ್ನು ಪರಿಶೀಲನೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಇದ್ದರು.