ಸಿಎಂಗೆ ಯಾವ ಸಮಾಜಕ್ಕೂ ನ್ಯಾಯ ಕೊಡಿಸಲಾಗದು
Team Udayavani, Feb 11, 2021, 2:40 PM IST
ಕುಷ್ಟಗಿ: ಯಾವ ಸಮಾಜಕ್ಕೂ ನ್ಯಾಯ ಕೊಡಿಸುವ ಕೆಲಸ ಸಿಎಂ ಬಿಎಸ್ವೈ ಅವರಿಂದ ಆಗದು ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಅವರು ಇಲ್ಲಿನ ಕೊಪ್ಪಳ ರಸ್ತೆ ಪಿ.ಸಿ.ಎಚ್. ಪ್ಯಾಲೇಸ್ನಲ್ಲಿ ನಡೆದ ಕುಷ್ಟಗಿ-ಹನುಮಸಾಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಸಹಯೋಗದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಸನ್ಮಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಎಂ ಯಡಿಯೂರಪ್ಪ ಅವರು ಮೀಸಲಾತಿಗಾಗಿ ಬೇಡಿಕೆ ಇಟ್ಟವರಿಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದು, ಅಭಿವೃದ್ಧಿ ಕೆಲಸವೇ ಇಲ್ಲ. ಸಿಎಂ ಬಿಎಸ್ವೈ ಅವರಿಗೆ ಎಲ್ಲ ಸಮುದಾಯದವರು ಎಚ್ಚರಿಸಿದ್ದಾರೆ.
ಮುಂದಿನ ದಿನಗಳಲ್ಲಿ ಎಲ್ಲ ಸಮುದಾಯದವರು ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಎಂಜಿನ್ ಇಲ್ಲದ ಸರ್ಕಾರ: ಬಿಜೆಪಿ ಸರ್ಕಾರ ಡಬಲ್ ಎಂಜಿನ್ ಸರ್ಕಾರ ಅಲ್ಲ, ಎರಡು ಜಂಜಿನ್ ಕೆಟ್ಟು ನಿಂತು ಎಂಜಿನ್ ಇಲ್ಲದ ಸರ್ಕಾರವಾಗಿದೆ. ಈ ಭಾಗದ ರೈತರಿಗೆ ನೆರೆ ಪರಿಹಾರ ನೀಡಲಿಲ್ಲ.
ನಮ್ಮ ಜಿಲ್ಲೆಯಲ್ಲೂ ನೀರಾವರಿ, ತೋಟಗಾರಿಕೆ ಬೆಳೆ ಹಾನಿಯಾದರೂ ಸರ್ವೇ ಮಾಡಿದರೇ ವಿನಃ ಪರಿಹಾರ ನೀಡಲಿಲ್ಲ. ಏನೂ ಮಾಡದೇ, ಜನರಿಗೆ ಮಂಕು ಬೂದಿ ಎರಚುವ ಸರ್ಕಾರವಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಸ್ಪಂದಿ ಸಿಲ್ಲ. ಹೋರಾಟದ ಸಂದರ್ಭದಲ್ಲಿ ರೈತರನ್ನು ಭಯೋತ್ಪಾದಕರು, ನಕ್ಸಲರು ಎಂದಿದ್ದರು. ರೈತರ ಹೋರಾಟಕ್ಕೆ ಮಣಿದಿರುವ ಪ್ರಧಾನಿ ಮೋದಿ ಅವರು, ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಭಟನಾ ನಿರತ ರೈತರನ್ನು ಮನವೊಲಿಸುವ ಇಂಗಿತ ವ್ಯಕ್ತಪಡಿಸಿದ್ದು, ಬಿಜೆಪಿಗೆ ಈಗ ಜ್ಞಾನೊದಯವಾಗಿದೆ ಎಂದರು.
ಇದನ್ನೂ ಓದಿ :ಮಕ್ಕಳಲ್ಲಿ ಜಾಂಡಿಸ್, ಟೈಫಾಯ್ಡ
ಯಾವೂದಾದರೂ ಒಳ್ಳೆಯ ಕೆಲಸವಾದರೆ ನಮ್ಮದು ಎನ್ನುವ ಮನೋಭಾವ ಬಿಜೆಪಿಯವರದ್ದು, ಕೆಟ್ಟದ್ದು ಘಟಿಸಿದರೆ ಅದು ಕಾಂಗ್ರೆಸ್ ಕುಮ್ಮಕ್ಕು ಎನ್ನುತ್ತಾರೆ. ರೈತರಿಗೆ ಮಾರಕವಾಗಿರುವ ಕಾನೂನು ರೈತರೇ ಬೇಡ ಎನ್ನುತ್ತಿರುವಾಗ ಯಾವ ಹಠಕ್ಕೆ ಈ ಕಾನೂನು ಅನುಷ್ಠಾನ ಮಾಡುತ್ತಿದ್ದಾರೋ ಗೊತ್ತಿಲ್ಲ. ಬಂಡವಾಳ ಶಾಹಿಗಳ ಕುಮ್ಮಕ್ಕಿನಿಂದ ಈ ಮೂರು ಮಾರಕ ಕಾನೂನು ಜಾರಿಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ. 12ರಂದು ಯಲಬುರ್ಗಾದಲ್ಲಿ, ಫೆ. 14ಕ್ಕೆ ಗಂಗಾವತಿಯಲ್ಲಿ ಫೆ. 14ರಂದು ಕೊಪ್ಪಳ ಹಾಗೂ ಕುಷ್ಟಗಿಯಲ್ಲಿ ಫೆ. 15ರಂದು ಕನಕಗಿರಿಯಲ್ಲಿ ಟ್ರಾÂಕ್ಟರ್ ಜಾಥಾ ಮೂಲಕ ಪ್ರತಿಭಟಿಸಲಿದ್ದೇವೆ ಎಂದರು.