ನಾಯಕರನ್ನು ಖುಷಿಪಡಿಸುವ ಹೇಳಿಕೆ ಸಲ್ಲದು: ಖಾಶೆಂಪೂರ
Team Udayavani, Feb 1, 2019, 12:30 AM IST
ಕೊಪ್ಪಳ: ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ನಮಗೆ ಅವರೇ ನಾಯಕ. ಅವರ ನಾಯಕರನ್ನು ಖುಷಿಪಡಿಸಲು ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಕಾಂಗ್ರೆಸ್ ಶಾಸಕರ ನಡೆಗೆ ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ತಿರುಗೇಟು ನೀಡಿದ್ದಾರೆ.
ತಾಲೂಕಿನ ಕೆರೆಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಶಾಸಕರು ತಮ್ಮ ನಾಯಕರನ್ನು ಖುಷಿಪಡಿಸಲು ಬೇಕಾಬಿಟ್ಟಿ ಮಾತನಾಡುವುದು ಸರಿಯಲ್ಲ. ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ನಮ್ಮ ನಾಯಕರು ಎನ್ನುತ್ತಾರೆ. ನಮಗೆ ಕುಮಾರಸ್ವಾಮಿ ನಾಯಕರಾಗಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ದೇವೇಗೌಡ ಅವರು ಕಾಂಗ್ರೆಸ್ ಶಾಸಕರ ವರ್ತನೆ ಬಗ್ಗೆ ಮಾತನಾಡಿದ್ದು ಸರಿಯಿದೆ. ಅದರಲ್ಲಿ ತಪ್ಪೇನೂ ಇಲ್ಲ ಎಂದರು.
ಬಿಜೆಪಿ ಬಾಂಬ್ಗಳು ಠುಸ್ಸಾಗಿವೆ: ಮೈತ್ರಿ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯವರ ಎಲ್ಲ ಬಾಂಬ್ಗಳು ಠುಸ್ ಆಗಿವೆ. ಸರ್ಕಾರ ಬೀಳ್ಳೋದು ಖಚಿತವಾದರೆ ಉಳಿಸಿಕೊಳ್ಳಲು ಬೇಕಾಗುವ ಎಲ್ಲ ಬಾಂಬ್ಗಳು ನಮ್ಮ ಬಳಿ ರೆಡಿ ಇವೆ ಎಂದು ಸಚಿವ ಬಂಡೆಪ್ಪ ಖಾಶೆಂಪುರ ಹೇಳಿದರು. ಬಳ್ಳಾರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಬಿಜೆಪಿಯವರ ಆಟ ಏನು ಎಂಬುದು ಎಲ್ಲಾ ಗೊತ್ತಾಗಿದೆ ಎಂದು ತಿಳಿಸಿದರು.