ಬ್ಯಾಕ್ಟೀರಿಯಾದಿಂದ ದುರ್ನಾತ ತಡೆ ಯತ್ನ
Team Udayavani, Feb 15, 2020, 3:05 PM IST
ಸಾಂಧರ್ಬಿಕ ಚಿತ್ರ
ಕೊಪ್ಪಳ: ನಗರಸಭೆಯು ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯೀಕರಣಕ್ಕೆ ಸಾಕಷ್ಟು ಪ್ರಯತ್ನ ನಡೆಸುತ್ತಲೇ ಇದೆ. ಈಗ ನಗರದಲ್ಲಿನ ಚರಂಡಿಗಳ ದುರ್ವಾಸನೆ ತಡೆಯಲು ಚರಂಡಿಯಲ್ಲಿ ಬ್ಯಾಕ್ಟೀರಿಯಾ ಬಿಡುಗಡೆ ಮಾಡುವ ಪ್ರಯೋಗಕ್ಕೆ ಸಿದ್ಧತೆ ನಡೆಸಿದೆ.
ವರ್ಷದಿಂದ ವರ್ಷಕ್ಕೆ ನಗರೀಕರಣ ವಿಸ್ತಾರವಾಗುತ್ತಿದೆ. ಜನಸಂಖ್ಯೆ ಬೆಳೆದಂತೆಲ್ಲ ನಿತ್ಯ ಬಳಕೆ ವಸ್ತುಗಳ ಖರೀದಿ ಹೆಚ್ಚಾಗುತ್ತಿದೆ. ಪ್ರತಿನಿತ್ಯ ಲಕ್ಷಾಂತರ ಲೀಟರ್ ತ್ಯಾಜ್ಯ ನೀರು ನಗರದಿಂದ ಹರಿದು ಹಳ್ಳ ಸೇರುತ್ತಿದೆ. ಹಳ್ಳಕ್ಕೆ ಸೇರುವ ನೀರು ಮುಂದೆ ನದಿಪಾತ್ರಗಳಿಗೆ ನೇರವಾಗಿ ಸೇರುತ್ತಿದೆ. ನಗರದ ತ್ಯಾಜ್ಯ, ಚರಂಡಿ ನೀರನ್ನು ನೇರ ನದಿಗಳಿಗೆ, ಹಳ್ಳಗಳಿಗೆ ಹರಿ ಬಿಡುವಂತಿಲ್ಲ ಎಂದು ಕಾನೂನು ಖಡಕ್ಕಾಗಿ ಹೇಳುತ್ತಿದೆ. ಚರಂಡಿ ನೀರನ್ನು ನದಿ ಪಾತ್ರಗಳಿಗೆ ಹರಿ ಬಿಡುವ ಮೊದಲು ಅದನ್ನು ಪರೀಕ್ಷೆ ಮಾಡಿ, ಶುದ್ಧೀಕರಿಸಿ ಹರಿಬಿಡಬೇಕಿದೆ. ಆದರೆ ಕೊಪ್ಪಳದಲ್ಲಿ ಹಾಗಾಗುತ್ತಿಲ್ಲ. ನೇರವಾಗಿಯೇ ನಗರದ ಚರಂಡಿ ನೀರು ಹಳ್ಳ ಮೂಲಕ ಮುಂದೆ ನದಿಗೆ ಹರಿಯುತ್ತಿದೆ. ಇದರಿಂದ ಗಂಭೀರ ಸಮಸ್ಯೆ ಎದುರಾಗಿ ರೋಗ, ರುಜಿನಗಳಿಗೆ ಕಾರಣವಾಗುತ್ತಿದೆ.
ಇದನ್ನು ಗಮನಿಸಿದ ಜಿಲ್ಲಾಡಳಿತ ಹಾಗೂ ಕೊಪ್ಪಳ ನಗರಸಭೆ ನಗರದಿಂದ ಲಕ್ಷಾಂತರ ಲೀಟರ್ ಚರಂಡಿ ನೀರು ಹಳ್ಳಕ್ಕೆ ಹರಿಯುವುದನ್ನು ತಡೆಯುವ ಪ್ರಯತ್ನ ಮುಂದುವರಿಸಿದ್ದು, ಅದಕ್ಕೂ ಪೂರ್ವದಲ್ಲಿ ಚರಂಡಿಯಲ್ಲಿನ ಕಲ್ಮಶ ನೀರಿನಲ್ಲಿ ರೋಗ ರುಜಿನಕ್ಕೆ ಕಾರಣವಾಗುವ ಕೆಲವೊಂದು ಕೀಟ, ಸೂಕ್ಷ್ಮಾಣುಗಳನ್ನು ತಿನ್ನಲು ಬ್ಯಾಕ್ಟೀರಿಯಾ ಬಿಡಲು ಯೋಜನೆ ರೂಪಿಸಿವೆ.
ಚರಂಡಿ ನೀರು ಪರೀಕ್ಷೆ: ನಗರದಲ್ಲಿ ಈ ಮೊದಲು ಯುಜಿಡಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ಹಲವಾರು ಕಾರಣಕ್ಕೆ ಯುಜಿಡಿ ಕಾಮಗಾರಿ ಸ್ಥಗಿತವಾಗಿದೆ. ಆ ಬಳಿಕ ನಗರದುದ್ದಕ್ಕೂ ಹರಿಯುವ ಚರಂಡಿ ತ್ಯಾಜ್ಯ ತುಂಬಿದ ನೀರನ್ನು ಮೂರು ಭಾಗದಲ್ಲಿ ಸಂಗ್ರಹ ಮಾಡಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಕ ಕಲ್ಮಶ ನೀರನ್ನು ಪರೀಕ್ಷೆಗೆ ಕಳಿಸಲಾಗಿದ್ದು, ಅದರ ವರದಿಯೂ ಬಂದಿದೆ. ವರದಿ ಆಧರಿಸಿ ನೀರಿನಲ್ಲಿ ಯಾವೆಲ್ಲ ಅಂಶಗಳಿವೆ. ಯಾವ ಪ್ರಮಾಣ ಹೆಚ್ಚಿದೆ. ಇದಕ್ಕೆ ವೈಜ್ಞಾನಿಕವಾಗಿ ಏನು ಮಾಡಬೇಕು, ಯಾವ ರೀತಿಯ ಬ್ಯಾಕ್ಟಿರಿಯಾ ಬಿಡುಗಡೆ ಮಾಡಿ ನೀರಿನ ತ್ಯಾಜ್ಯದಲ್ಲಿನ ದುರ್ವಾಸನೆ ಕಡಿಮೆ ಮಾಡಬೇಕು ಎನ್ನುವ ಚರ್ಚೆಗಳು ನಡೆದಿವೆ.
ಕೊಪ್ಪಳಕ್ಕೆ ಇತ್ತೀಚೆಗೆ ಆಗಮಿಸಿದ್ದ ಹಸಿರು ನ್ಯಾಯಾಧಿಕರಣ ಪೀಠದ ರಾಜ್ಯ ಸಮಿತಿ ಸದಸ್ಯ ಸುಭಾಷ ಅಡಿ ಅವರು ಇಲ್ಲಿನ ತ್ಯಾಜ್ಯದ ವ್ಯವಸ್ಥೆ ನೋಡಿ ಗರಂ ಆಗಿದ್ದಾರೆ. ಕೂಡಲೇ ಚರಂಡಿ ನೀರು ನೇರವಾಗಿ ಹಳ್ಳ ಸೇರುವುದನ್ನು ತಪ್ಪಿಸಿ ಪರ್ಯಾಯ ವ್ಯವಸ್ಥೆ ಮಾಡಿ ಎನ್ನುವ ಖಡಕ್ ಸೂಚನೆ ನೀಡಿದ್ದಾರೆ. ಇದರಿಂದ ಎಚ್ಚೆತ್ತ ನಗರಸಭೆ ಮೊದಲೇ ಯೋಜನೆ ರೂಪಿಸಿದಂತೆ ಅದನ್ನು ಈಗ ಕಾರ್ಯಗತಕ್ಕೆ ಮುಂದಾಗಿದೆ.
ವಿವಿಧೆಡೆ ಬ್ಯಾಕ್ಟಿರಿಯಾ ರಿಲೀಸ್: ನಗರಸಭೆ ಚರಂಡಿಗಳಲ್ಲಿ ಬ್ಯಾಕ್ಟಿರಿಯಾ ಬಿಡುಗಡೆ ಮಾಡಿ ಕಲ್ಮಶ ನೀರಿನ ದುರ್ವಾಸನೆ ತಡೆಗೆ ವಿಜ್ಞಾನಿಗಳ ವರದಿ ಆಧರಿಸಿ ಪ್ರಯೋಗಕ್ಕೆ ಮುಂದಾಗಿದೆ. ಇಂತಹ ಪ್ರಯೋಗವನ್ನು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಅವರು, ಕಲಬುರಗಿ ನಗರ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದರು. ಅಲ್ಲಿ ನೀರಿನಲ್ಲಿನ ದುರ್ನಾತ ತಡೆಯುವ ಪ್ರಯತ್ನ ಮಾಡಿದ್ದರು. ಅದನ್ನೇ ಕೊಪ್ಪಳದಲ್ಲಿ ಪ್ರಯೋಗ ಮಾಡುತ್ತಿದ್ದಾರೆ. ನಗರಸಭೆಯ ಹೊಸತನದ ಪ್ರಯೋಗ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಚರಂಡಿ ತ್ಯಾಜ್ಯದ ನೀರು ನೇರವಾಗಿ ಹಳ್ಳಕ್ಕೆ ಸೇರುತ್ತಿದೆ. ಇದರಲ್ಲಿನ ಕಲ್ಮಶ ನಿಯಂತ್ರಣಕ್ಕೆ ತರಲು, ಜೈವಿಕವಾಗಿ ಬ್ಯಾಕ್ಟೀರಿಯಾಗಳನ್ನು ಚರಂಡಿಯಲ್ಲಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದ್ದೇವೆ. ಬ್ಯಾಕ್ಟೀರಿಯಾಗಳು ಕಲ್ಮಶ ನೀರಿನಲ್ಲಿ ಸಂತಾನೋತ್ಪತ್ತಿ ಮಾಡಿ ದುರ್ನಾತ ತಡೆಯಲು ಸಹಕಾರಿಯಾಗಲಿವೆ. –ಮಂಜುನಾಥ, ನಗರಸಭೆ ಪೌರಾಯುಕ್ತ
ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್